Search This Blog

Friday 13 January 2017

ಶ್ರೀ ರಾಘವೇಂದ್ರ ಸ್ವಾಮಿಗಳ ಶ್ರೀರಾಮಚರಿತ್ರ ಮಂಜರಿ




ರಾಘವೇಂದ್ರ ತೀರ್ಥರು ಶ್ರೀ ರಾಮಚರಿತ್ರಮಂಜೆರಿ ಎಂಬ ಹನ್ನೊಂದು ಶ್ಲೋಕಗಳ ಪು್ಟ್ಟ ಕೃತಿಯೊಂದನ್ನು ರಚಿಸಿದ್ದಾರೆ. ಇದು ಚಕ್ಕದಾಗಿದ್ದು ರಾಮಾಯಣದ ವಿವರವಾದ ಪುನರ್ಸೃಷ್ಟಿಯಲ್ಲ. ಬದಲಾಗಿ ಇಲ್ಲಿರುವ ಶ್ಲೋಕಗಳನ್ನು ಓದಿದಂತೆಲ್ಲ ರಾಮಾಯಣದ ಘಟನೆಗಳು ನೆನಪಿಗೆ ಬಂದು ದಿನವೂ ರಾಮಾಯಣದ ಘಟನೆಗಳನ್ನು ಸ್ಮರಣೆಗೆ ತಂದುಕೊಳ್ಳಲು ಸಹಾಯಕ. ನಿತ್ಯ ಪಾರಾಯಣಕ್ಕೆ ಸೂಕ್ತವಾಗಿದೆ. ಇದರ ಒಂದು ಪದ್ಯಾನುವಾದವನ್ನು ಸಾಂಗತ್ಯದಲ್ಲಿ ಇಲ್ಲಿ ಪ್ರಯತ್ನಿಸಿದ್ದೇನೆ. ಇಲ್ಲಿರುವ ಗುಣಗಳೆಲ್ಲ ಶ್ರೀ ರಾಯರವು. ದೋಷರಹಿತವಾಗಿ ಮಾಡಿದ್ದೇನೆ ಎನ್ನುವ ಎದೆಗಾರಿಕೆ ನನಗಿಲ್ಲ.

ಶ್ರೀರಾಮಚರಿತ್ರ ಮಂಜರಿ
         ಮೂಲ: ಶ್ರೀರಾಘವೇಂದ್ರತೀರ್ಥರು
            ಕನ್ನಡಕ್ಕೆ: ಡಾ ಬಿ ವಿ ಮಹೀದಾಸ
ಪೂರ್ವದಲಿ ಸಿರಿಯರಸನಿಂದು ದಶರಥಪುತ್ರ
ಕರೆಯೆ ರಾಜರ್ಷಿ ಚಿಂತಿಸದೆ
ನಡೆಯುತನುಜಸಹಿತ ಹೊಡೆದ ತಾಟಕಿಯ
ಮತ್ತೆಷ್ಟೋ ರಕ್ಕಸರ ಲೀಲೆಯಿಂದ                   1

ಪಡೆದನು ಮಂತ್ರಗಳ, ಶಿವಧನು ಮುರಿದು
ಸೀತೆಯ ವರಿಸಿ ಮುನ್ನಡೆದ
ಕಲ್ಲ ಕರಗಿಸಿ ನೀರೆಯನು ಹೊರತಂದು
ತನ್ನಯ ಗರಿಮೆಯ ಮೆರೆದ                            2
                                                            ಕಾಯೋ ನೀನೆಮ್ಮ ಶ್ರೀ ರಾಮಚಂದ್ರನೆ
                                                            ಬಿಡದೆ ಎಂದೆಂದು ಅನವರತ
ಸೀತೆಯೊಡ ಸಾಕೇತ ದಾರಿಯಲಿಸಾನುಜನು
ಭಾರ್ಗವ ಪಂಥವನೊಪ್ಪಿ
ವಿಷ್ಣುಧನು ಹೆದೆಗಟ್ಟಿ ಕೆಡವೆ ಸುರಾರಿಯ
ಸ್ತುತಿಸಿದರು ಜನರು ಪುರದಲ್ಲಿ                                    3

ಶುಭಕರಾಗುಣಲೇಶರಹಿತಾಂತರಾತ್ಮನ
ಪರಿಪರಿಯಲಿ ಪೊಗಳಿ ನುತಸಿದರು
ಕೈಕಯೀ ಪ್ರೀತಿಗೆ ಸೋತು ಅರಸುಗಳಿ
ಗಸಹಜ ವಲ್ಕಲ ತೊಡಿಸೆ                               4
                                                            ಕಾಯೋ ನೀನೆಮ್ಮ ಶ್ರೀ ರಾಮಚಂದ್ರನೆ
                                                            ಬಿಡದೆ ಎಂದೆಂದು ಅನವರತ                                                  
ಅಳುಕದೆ ನಡೆದರು ವನಕೆ ಗಂಗೆಯತಟದಿ
ಗುಹನರ್ಚಿಸೆ ಚಂದದಿ ಜಟೆಗಟ್ಟಿ
ಪೂಜಿಸೆ ಗುರುಪುತ್ರ ನದಿಯ ದಾಟುತ
ಚಿತ್ರಕೂಟಕೈತಂದನು                                   5

ತಾಯಂದಿರೊಡಗೂಡಿ ಭರತತಾ ಅರುಹಲು
ತಂದೆಯ ಮರಣ ವಾರ್ತೆ
ಸಂತೈಸಿಯವರ್ಗಳ ಪಿತನ ಸದ್ಗತಿಗೆ
ತೀರ್ಥವನಿತ್ತು ಪೂಜಿಸಿದ                                6
                                                            ಕಾಯೋ ನೀನೆಮ್ಮ ಶ್ರೀ ರಾಮಚಂದ್ರನೆ
                                                            ಬಿಡದೆ ಎಂದೆಂದು ಅನವರತ

ತನ್ನಯ ಪಾದುಕೆ ನೀಡುತ ಭರತಂಗೆ
ವಹಿಸಿ ನೆಲರಕ್ಷಣೆಯ ಭಾರ
ಪೂಜೆಗೊಂಡತ್ರಿಯಿಂ ನಡೆದನರಣ್ಯಕೆ
ದಂಡಕವದು ಘೋರ ಸುಂದರ                         7

ತಾಪಸೇಷ್ಟಗೆ ಮೋಕ್ಷಪದವನಿತ್ತಸುರನ
ಕುಲವನೆ ಸಂಹಾರಗೈದು
ಋಷಿಪುಂಗವರ್ಗೆಲ್ಲ ನೀಡಿಯಭಯವನ್ನು
ಅಗಸ್ತ್ಯರಿನಾಯುಧ  ಪಡೆದ                             8
                                                            ಕಾಯೋ ನೀನೆಮ್ಮ ಶ್ರೀ ರಾಮಚಂದ್ರನೆ
                                                            ಬಿಡದೆ ಎಂದೆಂದು ಅನವರತ
ರಾಕ್ಷಸಿಯ ಮಾಡಿದೆ ವಿಕಲಾಂಗಿ ನೀನಿರುತ
ಪಂಚವಟಿಯ ನೆರಳಿನಲ್ಲಿ
ಸಂಹಾರಗೈದೆ ಯಾರ್ಯಾರ ನೀನಲ್ಲಿ
ಕ್ರವ್ಯಾದ ಖರದೂ ಷರನೆಲ್ಲ                           9

ತ್ರಿಶೀರ್ಷನ ಕೊಂದೆ ಮಾರೀಚನ ಸದೆದೆ
ಜಟಾಯುಗೆ ಸ್ವಪದವ ನೀಡಿದೆ
ತೋರಲಿಲ್ಲವೆ ಅವ ಸೀತಾಕೃತಿಯಿದ್ದ
ಸ್ಥಳಕೆ ಮಾರ್ಗವ ಚಂದದಿ                              10
                                                            ಕಾಯೋ ನೀನೆಮ್ಮ ಶ್ರೀ ರಾಮಚಂದ್ರನೆ
                                                            ಬಿಡದೆ ಎಂದೆಂದು ಅನವರತ
ಪಂಪಾತೀರವ ತಲುಪುತ ಶಬರಿಯ
ಭಕ್ತಿಯಿಂದಾಗಿ ಸಂತುಷ್ಟ
ನೀಡಿಯಾಕೆಗೆ ಮುಕ್ತಿ ಹನುಮನ ನುಡಿಗೊಲಿದು
ಬೆಳೆಸಿದ ಸುಗ್ರೀವ ಸಖ್ಯ                                 11

ಬೊಮ್ಮನ ವರದಿಂದ ಬಲಪಡೆದು ನಿಂದಿಹ
ರಕ್ಕಸಗಟ್ಟಿಗರ ರೂಪ
ವಟವೃಕ್ಷವೇಳನು ಛೇದಿಸಿ ವಾಲಿಯ
ರಾಜ್ಯವನಿತ್ತ ಸುಗ್ರೀವಗೆ                                 12
                                                            ಕಾಯೋ ನೀನೆಮ್ಮ ಶ್ರೀ ರಾಮಚಂದ್ರನೆ
                                                            ಬಿಡದೆ ಎಂದೆಂದು ಅನವರತ



ನಿಂದಲ್ಲಿ ಮಾಲ್ಯವತ್ ಗಿರಿಯಲ್ಲಿಕೆಲದಿನ
ಕಳಿಸಿ ಕಪೀಶರ ದಿಕ್ಕಿಗೆಲ್ಲ
ಸೀತೆಯ ಹುಡುಕಿ ಕರೆತಂದ ಹನುಮನ
ಮಾತಿಗೆ ಲಕ್ಷ್ಯವ ಕೊಟ್ಟ                                14

ಸುಗ್ರೀವ ಕಪಿಸೈನ್ಯದೊಂದಿಗೆ ಧಾಳಿಟ್ಟ
ದಶಮುಖಾನುಜನ ಮಾನೈಸಿ
ಸಾಗರನಾದೇಶ ಸೇತುವ ಕಟ್ಟಿಸಿ
ದೈತ್ಯರ ನಾಶವ ಗೈದ                                   15
                                                            ಕಾಯೋ ನೀನೆಮ್ಮ ಶ್ರೀ ರಾಮಚಂದ್ರನೆ
                                                            ಬಿಡದೆ ಎಂದೆಂದು ಅನವರತ
ಸೋಲಿಸಿ ಓಡಿಸೆ ರಾವಣ ಕಳಿಸಿದ
ಎಬ್ಬಿಸಿ ಕುಂಭ ಕರ್ಣನ್ನ
ಕೆಡೆಯಲು ಅವನನ್ನು ಇಂದ್ರಜಿತು ಕಟ್ಟಿದ
ಕಪಿಗಳ ನಾಗಾಸ್ತ್ರದಿಂದ                                  16

ಗರುಡನೆ ಮುಂಬಂದು ಸಂಕಲೆ ಗಳಬಿಡಿಸಿ
ರಾಮನ ಆಶಿಷ ಪಡೆದ
ಲಕ್ಷ್ಮಣ ಕೊಂದನು ಅಸುರಜನ, ಮತ್ತೆಲ್ಲ
ಕಪಿಗಳು ಏಳಲು ಚೇತರಿಸಿ                               17
                                                            ಕಾಯೋ ನೀನೆಮ್ಮ ಶ್ರೀ ರಾಮಚಂದ್ರನೆ
                                                            ಬಿಡದೆ ಎಂದೆಂದು ಅನವರತ
ಬಳಸಿ ವಿಜ್ಞಾನಾಸ್ತ್ರ ಕಾಯ್ದ ಕಪಿಗಳನೆಲ್ಲ
ಹನುಮಗೆ ಸಂತೋಷ ತಂದ
ಗುಡ್ಡವ ತಂದಿಟ್ಟ ಹನುಮನ ಹರ್ಷಿಸಿ
ಕಾಯಲಿ ರಾಮನು ಅನಘ                              18

ಸಂಹಾರಗೈದು ಕ್ರವ್ಯಾದರನಲ್ಲದೆ
ದಶವದನಾಸುರನನ್ನು
ಬ್ರಹ್ಮಾದಿಗಳ ಪುಷ್ಪ ವೃಷ್ಟಿಯಲಿ ಮೀಯುತ
ಅಗ್ನಿಯಿಂದೆದ್ದ ಸೀತೆಯುತ                            19
                                                            ಕಾಯೋ ನೀನೆಮ್ಮ ಶ್ರೀ ರಾಮಚಂದ್ರನೆ
                                                            ಬಿಡದೆ ಎಂದೆಂದು ಅನವರತ


ಮಾಡಿವಿಭೀಷಣಗೆ ಲಂಕೆಯ ಪಟ್ಟವ
ಏರಿದ ಪುಷ್ಪಕ ವಿಮಾನ
ಸಾಕೇತದಲಿಮುನಿಗಳಾನುಗ್ರಹ ಪಡೆದು
ನಡೆಸಿದ ರಾಜ್ಯಭಾರವನು                               20

ಪಾಲಿಸೆ ಸಮೃದ್ಧ ಭುವಿಯನು ಕುಂದಿರದೆ
ಮೆಚ್ಚಿ ಸ್ತುತಿಸಲು ಮುನಿಗಣ
ಭರತನು ಯುವರಾಜ ರಕ್ಷೆಯು ಲಕ್ಕಣಗೆ
ಪ್ರಜೆಗಳ ಸಂತಸಕೆಣೆಯೇ                                21
                                                                        ಕಾಯೋ ನೀನೆಮ್ಮ ಶ್ರೀ ರಾಮಚಂದ್ರನೆ
                                                                        ಬಿಡದೆ ಎಂದೆಂದು ಅನವರತ
ಶತ್ರುಘ್ನ ಕೊಂದನು ಲವಣಾಸುರನನ್ನು
ದುಷ್ಟರೆಲ್ಲರನು ಮತ್ತೆ
ಆಶ್ವಮೇಧವಗೈದ ಶ್ರೀರಾಮಚಂದ್ರ
ಕೂಡಿದ ವನದಲಿ ಕುಶಲವರ                           22

ಶ್ವೇತದ್ವೀಪವ ತಲುಪಿದ ಶ್ರೀ ರಾಮ
ಸೇವಿತಹ್ರೀಶ್ರೀದೇವಿಯರಿಂದ
ಹನುಮನು ಹಿಡಿಯಲು ಶ್ವೇತಚ್ಛತ್ರವ
ಬ್ರಹ್ಮಾದಿ ದೇವರು ಸ್ತಿತಿಸರೆ                            23
                                                                     ಕಾಯೋ ನೀನೆಮ್ಮ ಶ್ರೀ ರಾಮಚಂದ್ರನೆ
                                                                     ಬಿಡದೆ ಎಂದೆಂದು ಅನವರತ
ಮಂಗಳವು ಶ್ರೀರಾಮಚಂದ್ರಂಗೆ ಮಂಗಳವು
ಸೀತೆಗೆ ಹದಿನಾಲ್ಕು ಲೋಕಕೆ
ಮಂಗಳವು ಗುರು ರಾಘವೇಂದ್ರರಿಗೆ ಶ್ರೀಮಧ್ವ
ಮತವರ್ಧನಕೃತಿಕಾರರ್ಗೆ








No comments:

Post a Comment