Search This Blog

Friday 24 July 2015

ಕಿಶೋರ ಸಂಸ್ಕಾರದ ಬಗ್ಗೆ ಹೀಗೊಂದು ಪುಸ್ತಕ

ಕಿಶೋರ ಸಂಸ್ಕಾರ  ಎಂಬ ಒಂದು ಪುಸ್ತಕ ಈಚೆಗೆ ಪ್ರಕಟವಾಗಿದೆ. ಕಿಶೋರರು ಎಂದರೆ ಹದಿಹರಯದ ಮಕ್ಕಳು. ಇವರಲ್ಲಿ ಸನ್ನಡತೆ ಉಂಟಾಗುವಂತೆ ಮಾಡಲು ಕೆಲವು ಸೂಚನೆಗಳನ್ನು ಈ ಪುಸ್ತಕ ೊಳಗೊಂಡಿದೆ. ಇದರಲ್ಲಿ ಕೆಲವು ಉತ್ತಮಾಂಶಗಳಿವೆ. ಹಳತರ ಬಗ್ಗೆ ಅಭಿಮಾನ ಹೆಚ್ಚಿದೆ. ಹೊಸದನ್ನು ಎಚ್ಚರಿಕೆಯಿಂದ ಸ್ವೀಕರಿಸಬೇಕೆಂಬ ಎಚ್ಚರಿಕೆ ಇದೆ. ಇದರ  ಒಂದು ಪರಿಚಯಾತ್ಮಕ ಲೇಖನ ಇಲ್ಲಿದೆ:

ಕಿಶೋರರಿಗೆ ಸರಿಯಾದ ಸಂಸ್ಕಾರಗಳನ್ನು ನೀಡುವುದು ಜನ್ಮದಾತರ ಮತ್ತು ಗುರಗಳ ಕರ್ತವ್ಯ
                                                                             
ಭಾರತೀಯ ಸಂಸ್ಕೃತಿ ಹಿರಿದು, ವಿಶ್ವವೇ ಒಂದು ಕುಟುಂಬವೆಂದು ಸಾರುತ್ತದೆ, ಬೇರೆಬೇರೆ ನಡವಳಿಕೆಗಳನ್ನು ಒಳಗೊಳಿಸಿಕೊಳ್ಳುತ್ತದೆ, ಆದ್ದರಿಂದಲೇ ಶ್ರೇಷ್ಠ, ಇತ್ಯಾದಿ ಮಾತುಗಳನ್ನು ಕೇಳುತ್ತಿರುತ್ತೇವೆ. ಆದರೆ ಸಂಸ್ಕೃತಿ ಎಂಬುದು ಜನಜೀವನದಲ್ಲಿ ಬಿಂಬಿತವಾಗುವಂತಹುದೇ ಹೊರತು ತನ್ನಷ್ಟಕ್ಕೇ ನಿರಪೇಕ್ಷವಾಗಿ ನಿಲ್ಲುವಂತಹುದಲ್ಲ. ಜನರ ನಡವಳಿಕೆ ಈ ಮಟ್ಟವನ್ನು ಮುಟ್ಟ ಬೇಕೆಂದಾದರೆ ಅದು ಹೇಗಿರಬೇಕು, ಯಾವ ನಿಯಮಗಳನ್ನು ಪಾಲಿಸಬೇಕು, ಮಕ್ಕಳನ್ನು ಈನಿಟ್ಟಿನಲ್ಲಿ ಬೆಳೆಸುವುದು ಹೇಗೆ ಎಂಬಿವು ಎಲ್ಲರ ಆಸಕ್ತಿಯ ವಿಷಯ. ಇದಕ್ಕೆ ಸಂಬಂಧಿಸಿದ ಹಲವು ಮುಖಗಳನ್ನು ಚಿತ್ರಿಸುವ ಒಂದು ಚಿಕ್ಕ ಪುಸ್ತಕ ಕಿಶೋರ ಸಂಸ್ಕಾರ, ವ್ಯಕ್ತಿತ್ವ ವಕಸನಕ್ಕೆ ದಾರಿ. ಇದರ ಲೇಖಕರು ಕೃಷ್ಣ ಜಿ. ಭಟ್ಟ, ಹೆಗಡೆ. ಪುಸ್ತಕದ ಪ್ರಕಾಶಕರು ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ 20. ಪುಸ್ತಕದಲ್ಲಿ ಒಟ್ಟು 112 ಪುಟಗಳಿವೆ. ಬೆಲೆ ರೂ.90/-.
          ಪುಸ್ತಕದಲ್ಲಿ ಏಳು ಅಧ್ಯಾಯಗಳಿವೆ. ಕಿಶೋರ ಸಂಸ್ಕಾರ, ಧರ್ಮ ಎಂದರೇನು, ಮಮತಾಮಯಿ ಮಾತೆ, ಜನ್ಮದಾತರಿಗೆ ನಿತ್ಯ ನಮನ, ವೀರಶೈವ ಸಂಸ್ಕಾರ, ಜೈನ ಧರ್ಮ ಸಂಸ್ಕಾರ ತತ್ವಗಳು, ಉಪಸಂಹಾರ – ಇವು ಅಧ್ಯಾಯಗಳ ಶೀರ್ಷಿಕೆಗಳು. ಪ್ರತಿಯೊಂದು ಅಧ್ಯಾಯದಲ್ಲಿ ಮತ್ತೆ ಉಪಶೀರ್ಷಿಕೆಗಳು ಮತ್ತು ಅವುಳಿಗೆ ಚಿಕ್ಕಚಿಕ್ಕ ವಿವರಣೆಗಳು ಹೀಗೆ ಸಾಗುತ್ತದೆ ಪುಸ್ತಕದ ಓಟ. ಇದರಿಂದ ಪುಸ್ತಕದ ಓದು ಸುಭಗವಾಗುತ್ತದೆ; ಆಸಕ್ತಿದಾಯಕವಾಗುತ್ತದೆ.
          ಮೊದಲನೆಯ ಅಧ್ಯಾಯ ಉಪೋದ್ಘಾತ ಸ್ವರೂಪದ್ದು. ಇದರಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರಗಳ ಒಂದು ವ್ಯಾಖ್ಯೆಯನ್ನು ನಿರೂಪಿಸಲು ಪ್ರಯತ್ನಿಸಲಾಗಿದೆ. ‘ನಮ್ಮ ನಡವಳಿಕೆ ಮತ್ತು ರೀತಿ ನೀತಿಗಳು ಸತ್ಸಂಪ್ರದಾಯ ಆಧಾರಿತವಾಗಿದ್ದು,  ಶೀಲ, ಭಾವ, ನಿರೂಪಣೆಗಳನ್ನೇ  ಸಂಸ್ಕೃತಿ’ ಎನ್ನಬಹುದೆಂದು ಇಲ್ಲಿಯ ನಿರೂಪಣೆ. ಸಂಸ್ಕೃತಿಯನ್ನು ರೂಢಿಸುವ ಪ್ರಕ್ರಿಯೆಗಳು ಮತ್ತು ಘಟನೆಗಳೇ ಸಂಸ್ಕಾರಗಳು. ಎರಡನೆಯ ಅಧ್ಯಾಯದಲ್ಲಿ ಧರ್ಮ ಶಾಸ್ತ್ರ ಸಮ್ಮತವಾದ ಷೋಡಶಸಂಸ್ಕಾರಗಳ ಒಂದು ಸಂಕ್ಷಿಪ್ತ ನಿರೂಪಣೆಯನ್ನು ಕಾಣಬಹುದು. ಇವುಗಳಲ್ಲಿ ಎಲ್ಲವೂ ಸಾಮಾನ್ಯವಾಗಿ ಪ್ರಚಲಿತವಿಲ್ಲವೆಂದೂ ಜಾತಕರ್ಮ, ನಾಮಕರಣ, ಅನ್ನಪ್ರಾಶನ, ಉಪನಯನ, ವಿವಾಹ ಮತ್ತು ಅಂತ್ಯತೇಷ್ಟಿಗಳೆಂಬ ಆರು ಮಾತ್ರ ಆಚರಣೆಯಲ್ಲಿವೆ ಎಂದೂ ಸೂಚಿಸಿದ್ದಾರೆ.ಈ ‘ಸಂಸ್ಕಾರಗಳ ಸ್ವರೂಪವನ್ನು ಅರಿತು ಆಚರಿಸೋಣ’ ಎಂಬ ಆಶಯ ಒಟ್ಟಾರೆಯಾಗಿ ಇಲ್ಲಿ ಪ್ರತಿಪಾದಿತವಾಗಿದೆ. ಈ ಆಚರಣೆಗಳ ಹಿನ್ನೆಲೆ ಮತ್ತು ಅವುಗಳ ಒಂದು ವಿವರಣೆಯನ್ಮು ಇಲ್ಲಿ ನೋಡಬಹುದು. ಮೂರನೆಯ ಅಧ್ಯಾಯವು ಹೆಸರೇ ತಿಳಿಸುವಂತೆ ತಾಯಿಯ ಜವಾಬ್ದಾರಿಗಳನ್ನು ತಿಳಿಸುತ್ತದೆ. ಕುಪುತ್ರನಿರಬಹುದು; ಕುಮಾತಾ ಎಲ್ಲಿಯೂ ಇರಲಾರಳು ಎಂಬರ್ಥದ ಸಂಸ್ಕೃತ ಉಕ್ತಿಯನ್ನು ಉಲ್ಲೇಖಿಸಿ ಮಗುವಿಗೆ ಶಿಕ್ಷಣದ ಪ್ರಾರಂಭವು ತಾಯಿಯಿಂದಲೇ ಎಂದು ವಿವರಿಸಿದ್ದಾರೆ. ತಾಯಿಗೆ ಮಗುವಿನ ಸರ್ವಾಂಗೀಣ ಪ್ರಗತಿಯತ್ತ ಲಕ್ಷ್ಯವಿರಬೇಕೇ ಹೊರತು ಕೇವಲ ಅಂಕಗಳ ಕಡೆಗಲ್ಲವೆಂದು ತಿಳಿಸಿದ್ದಾರೆ. ಮಗುವಿಗೆ ಶಿಕ್ಷೆ ನೀಡುವುದು ಅಪರಾಧವೆಂಬ ಆಧುನಿಕ ತತ್ವವನ್ನು ಪ್ರತಿಪಾದಿಸಿದ್ದಾರೆ. ಮಗುವಿಗೆ ಯಾವ ಆಹಾರ ಒಳ್ಳೆಯದು ಯಾವುದು ತ್ಯಾಜ್ಯ ಎಂಬಂತಹ ವಿಷಯಗಳು ಬಂದಿವೆ. ಒಟ್ಟಾರೆಯಾಗಿ ಷೋಡಶ ಸಂಸ್ಕಾರದಿಂದಾಚೆ ಇಂದಿನ ಸಮಾಜದಲ್ಲಿ ಮಗುವನ್ನು ಬೆಳೆಸಲು ತಾಯಿಗೆ ಅಗತ್ಯವಾದ ಕೆಲವು ಅಂಶಗಳು ಇಲ್ಲಿವೆ. ನಾಲ್ಕನೆಯ ಅಧ್ಯಾಯವು ಈ ಪುಸ್ತಕದಲ್ಲಿ ಅತಿ ದೀರ್ಘವಾದುದು ಮತ್ತು ಇದರಲ್ಲಿ ಐವತ್ತೆರಡು ಪುಟಗಳಿವೆ. ಜನ್ಮದಾತರಿಗೆ ನಿತ್ಯ ನಮನ ಎಂಬುದು ಅಧ್ಯಾಯದ ಶೀರ್ಷಿಕೆಯಾದರೂ ಹಿರಿಯರನ್ನೂ ಗುರುಗಳನ್ನೂ ಗೌರವಿಸುವ ರೀತಿಗಳನ್ನೂ ಇಲ್ಲಿ ಸೇರಿಸಲಾಗಿದೆ. ಹಂಚಿ ತಿನ್ನಬೇಕು – ಮುಂಜಾನೆ ಮುಂಚೆ ಏಳಬೇಕು – ಪ್ರಾತಃಸ್ಮರಣೆ, ವ್ಯಾಯಾಮ, ಪ್ರಾಣಾಯಾಮ, ಸ್ನಾನ ಇತ್ಯಾದಿಗಳನ್ನು ಕ್ರಮವಾಗಿ ಮಾಡಬೇಕು ಇಂತಹ ವಿಷಯಗಳನ್ನು ಸಾಂಪ್ರದಾಯಿಕವಾಗಿ ಇಲ್ಲಿ ನಿರೂಪಿಸಲಾಗಿದೆ. ಅನಂತರ ಶಾಲಾಪಾಠಗಳನ್ನು ಓದಿ ಕಲಿಯಬೇಕು, ಗೃಹ ಪಾಠಗಳನ್ನು ತಪ್ಪದೇ ಪೂರೈಸಬೇಕು, ಸಹಪಠ್ಯ ಚಟುವಟಿಕೆಗಳಿಗಾಗಿ ಸಿದ್ಧತೆ ಮಾಡಿಕೊಂಡು ಭಾಗವಹಿಸಬೇಕು – ಇಂತಹ ಕಿವಿಮಾತುಗಳನ್ನು ಇಲ್ಲಿ ಕಾಣ ಬಹುದು. ನಮ್ಮ ಭಾಷೆ, ಪಾರಂಪರಿಕ ಉಡುಪು, ಸತ್ಸಂಪ್ರದಾಯ ಇಂತಹವುಗಳ ಬಗೆಗೆಲ್ಲ ಲೇಖಕರಿಗೆ ಹೆಮ್ಮೆ ಇದೆ. ಮುಂದಿನ ಜನಾಂಗಕ್ಕೆ ಇವುಗಳನ್ನೆಲ್ಲ ಮೌಲಿಕವಾಗಿ ವರ್ಗಾಯಿಸಬೇಕೆಂಬುದು ಅವರ ಆಶಯ. ವೀರಶೈವ ಸಂಸ್ಕಾರ ಮತ್ತು ಜೈನ ಧರ್ಮ ಸಂಸ್ಕಾರ ತತ್ವಗಳು ಎಂಬಿವು ಮುಂದಿನ ಎರಡು ಅಧ್ಯಾಯಗಳು. ಈ ಎರಡು ಅಧ್ಯಾಯಗಳಲ್ಲಿ ಆಯಾ ಮತಾನಯಾಯಿಗಳ ಆಚರಣೆಗಳ ಒಂದು ಸಂಕ್ಷಿಪ್ತತಮ ನಿರೂಪಣೆ ಇದೆ. ‘ನಮ್ಮ ಸುತ್ತ ಇರುವ ಸನಾತನ ಹಿಂದೂ ಧರ್ಮದ ಜೊತೆ ವೀರಶೈವ, ಜೈನರ ಕುರಿತೂ ಸ್ಥೂಲವಾಗಿ ತಿಳಿದುಕೊಂಡರೆ ನಮ್ಮದೇ ಅರಿವಿನ ಕ್ಷತಿಜ ವಿಸ್ತಾರಗೊಳ್ಳುತ್ತದೆ’ ಎಂಬುದು ಇವೆರಡನ್ನು ಸೇರಿಸಲು ಕೃತಿಕಾರರು ನೀಡಿರುವ ಕಾರಣ. ದೇಶದಲ್ಲಿರವ ಇತರ ಧರ್ಮಗಳ ಆಚರಣೆಗಳನ್ನೂ ಸೇರಿಸಿದ್ದರೆ ಪುಸ್ತಕವು ಹೆಚ್ಚು ಸಮಗ್ರವಾಗುತ್ತಿತ್ತು.
          ಪುಸ್ತಕದ ಶೈಲಿಯು ಒಂದು ರೀತಿಯ ವಿಧ್ಯಾತ್ಮಕವಾದುದು. ಹೀಗೆ ಮಾಡಬೇಕು ಹೀಗೆ ಮಾಡಬಾರದು ಎಂದು ಹೇಳುವುದು ಇಲ್ಲಿಯ ಪರಿ. ಹಳತೆಲ್ಲ ಸಾಧು; ಹೊಸತು ಪಾಶ್ಚಾತ್ಯರ ಅಂಧಾನುಕರಣೆ ಎಂಬಂತಹ ಮನೋಧೋರಣೆ ಕೃತಿಯುದ್ದಕ್ಕೂ ಕಾಣಸಿಗುತ್ತದೆ. ಉದಾಹರಣೆಗೆ ‘ಪುರಾಣಶ್ರವಣವೊಂದು ಅತ್ಯುತ್ತಮ ಸಂಸ್ಕಾರ’ (ಪು, 71), ‘ಪಂಚೆ, ಜುಬ್ಬ ಹಿಂದಿನ ಪರಂಪರೆಯ ಉಡುಪು. ಅದಕ್ಕೆ ಒಂದು ಪಾವಿತ್ರ್ಯ ಇದೆ’(ಪು, 88), ‘ಕಿಸೆಗೂ ಕಿವಿಗೂ ಸಂಪರ್ಕ ೇರ್ಪಡಿಸುವ ಸಾಧನ ‘ಐಪಾಡ್’’. ಇದರ ದುರುಪಯೋಗವೇ ಹೆಚ್ಚು’(ಪು,89) – ಇಂತಹ ಹೇಳಿಕೆಗಳಲ್ಲಿ ಇದನ್ನು ಕಾಣಬಹುದು. ಹಳತರ ಬಗ್ಗೆ ವಿಮರ್ಶೆಗಿಂತ ಸಂಪಾದಿಸಿದ್ದನ್ನು ಕಳೆದುಕೊಳ್ಳಬಾರದೆಂಬ ಕಳಕಳಿ ಇಲ್ಲಿದೆ. ಹೊಸತರ ಬಗ್ಗೆ ಮೆಚ್ಚುಕೆಗಿಂತ ಅದರಿಂದ  ಏನು ಅನಾಹುತವಾಗಿ ಬಿಡುತ್ತದೋ ಎಂಬ ಭಯ ಇಲ್ಲೆಲ್ಲ ಕಾಣುತ್ತದೆ. ಹೊಸತು ಅನಿವಾರ್ಯ ಎಂಬ ಪ್ರಜ್ಞೆಯ ಜೊತೆಗೆ ನಮ್ಮತನವನ್ನು ಕಳೆದುಕೊಳ್ಳದಂತೆ ಜಾಗರೂಕತೆಯಿಂದ ಅದನ್ನು ಸ್ವೀಕರಿಸಬೇಕೆಂಬ ಕಾಳಜಿ ಕೃತಿಯಲ್ಲಿದೆ. ಪುಸ್ತಕವನ್ನು ಒಮ್ಮೆ ಓದಬಹುದು

Monday 13 July 2015

ಕನ್ನಡಕ್ಕೆ ಸಂಬಂಧಿಸಿದಂತೆ ಎಟಿಮಲೋಜಿಕಲ್ ನಿಘಂಟುಗಳು

ಕನ್ನಡಕ್ಕೆ ಸಂಬಂಧಿಸಿದಂತೆ ಎಟಿಮಲೋಜಿಕಲ್ ನಿಘಂಟುಗಳು

  ಭಾಷೆಯಲ್ಲಿರುವ ಪದ, ಪ್ರತ್ಯಯ, ಉಪಸರ್ಗ ಇತ್ಯಾದಿ ಭಾಷಾ ರೂಪಗಳು ಯಾವಾಗಲೂ ಇದ್ದಂತೆಯೇ ಇರುವುದಿಲ್ಲ. ನಾನಾ ಕಾರಣಗಳಿಂದ ಅವು ವ್ಯತ್ಯಾಸವಾಗುತ್ತಿರುತ್ತವೆ. ಈ ಪ್ರಕ್ರಿಯೆಯಲ್ಲಿ ಎರಡು ಪದಗಳಿಂದಾದ ಪದ ಒಂದೇ ಪದದಂತೆ ಕಾಣಬಹುದು. ಪ್ರತ್ಯಯವಿಲ್ಲದೆ ಸ್ವತಂತ್ರ ಅಸ್ತಿತ್ವವಿರುವ ಪದ ಪ್ರತ್ಯಯದೊಟ್ಟಿಗೇ ಕಾಣುವಂತಾಗಬಹುದು. ಅಕ್ಷರಿಕೆಯಲ್ಲಿ, ಉಚ್ಚಾರದಲ್ಲಿ ವ್ಯತ್ಯಾಸಗಳಾಗಬಹುದು. ಧ್ವನಿವ್ಯತ್ಯಾಸಗಳಿಗೆ ಪಕ್ಕಾಗಬಹುದು. ಹೀಗೆ ಈಗಿರುವ ಭಾಷಾರೂಪದ ಮೂಲಸ್ವರೂಪ ಬೇರೆಯೇ ಆಗಿರುವುದು ಸಂಭಾವ್ಯ.
ಒಂದು ಭಾಷಾರೂಪದ ಮೂಲಸ್ವರೂಪ ಮತ್ತು ಅದರ ಚಾರಿತ್ರಿಕ ಬೆಳವಣಿಗೆಯನ್ನು ಅದರ ಅಂಗಗಳು, ಅತ್ಯಂತ ಪ್ರಾಚೀನ ಪ್ರಯೋಗಗಳು, ರೂಪಾಂತರ ಮತ್ತು ಅರ್ಥಾಂತರಗಳು, ಇನ್ನೊಂದು ಭಾಷೆಯಿಂದ ಈ ಭಾಷೆಗೆ ಬದಲಾಗಿ ಬಂದ ಬಗೆ, ಇತರ ಭಾಷೆಗಳಲ್ಲಿ ಅದರ ಜ್ಞಾತಿಗಳು ಇವೆಲ್ಲವನ್ನೂ ಗುರುತಿಸಿ, ವಿಶ್ಲೇಷಿಸಿ, ಹೋಲಿಸುವ ಮೂಲಕ ಪದದ ಪ್ರಾಚೀನ ರೂಪವನ್ನು ಹುಡುಕಿ  ಕೊಡುವುದು ನಿಷ್ಪತ್ತಿ ಶಾಸ್ತ್ರವೆನಿಸಿಕೊಳ್ಳುತ್ತದೆ. ಈ ಎಲ್ಲ ಅಂಶಗಳನ್ನು ಅಳವಡಿಸಿಕೊಂಡು ಸಿದ್ಧಪಡಿಸಲಾದ ನಿಘಂಟಿಗೆ ನಿಷ್ಪತ್ತಿ ಶಾಸ್ತ್ರೀಯ ನಿಘಂಟು ಅಥವ ಎಟಿಮಲಾಜಿಕಲ್ ನಿಘಂಟು ಎಂದು ಹೆಸರು. ಈ ಎಲ್ಲ ದೃಷ್ಟಿಗಳಿಂದ ಪರಿಪೂರ್ಣವೆನಿಸಿದ ನಿಷ್ಪತ್ತಿ ಶಾಸ್ತ್ರೀಯ ನಿಘಂಟುಗಳ ರಚನೆ ವಿರಳವಾದರೂ ಇತರ ಸೋದರ ಭಾಷೆಗಳ ಜ್ಞಾತಿಪದಗಳೊಂದಿಗೆ ಪದದ ಅರ್ಥವನ್ನು ಕೊಟ್ಟು ತನ್ಮೂಲಕ ನಿಷ್ಪತ್ತಿ ಹೊಳೆಯುವಂತೆ ವ್ಯವಸ್ಥೆಗೊಳಿಸಿರುವ ನಿಘಂಟುಗಳು ರಚನೆಯಾಗಿವೆ. ಇದು ಕನ್ನಡ ಮತ್ತು ದ್ರಾವಿಡ ಭಾಷೆಗಳ ಸಂದರ್ಭದಲ್ಲಿ ತುಂಬ ಸತ್ಯ.  ದ್ರಾವಿಡ ಭಾಷೆಗಳ ನಿಷ್ಪತ್ತಿ ಅಥವ ಎಟಿಮಲಾಜಿಕಲ್ ನಿಘಂಟಿನಲ್ಲಿ ಸೋದರ ಭಾಷೆಗಳ ಜ್ಞಾತಿಪದಗಳನ್ನು  ಹೋಲಿಸುವುದು ಅನಿವಾರ್ಯ. ಆದ್ದರಿಂದ ಇಂತಹ ನಿಘಂಟುಗಳ ರಚನೆ ಭಾಷಾರೂಪಗಳ ಹೋಲಿಕೆಯಿಂದ ಪ್ರಾರಂಭವಾಗುತ್ತದೆ ಎನ್ನಬಹುದು.
1835ರಲ್ಲಿ ಶ್ರೀರಂಗಪಟ್ಟಣದ ಕೃಷ್ಣಮಾಚಾರ್ಯ ಎಂಬುವನು ಹೊಸಗನ್ನಡ ವ್ಯಾಕರಣವೊಂದನ್ನು ರಚಿಸಿದ. ಈ ವ್ಯಾಕರಣದ ಮೂಲಕ ಕನ್ನಡದ ಪದಗಳನ್ನು  ಇತರಭಾಷಾ ಪದಗಳೊಂದಿಗೆ ಹೋಲಿಸುವ ಪ್ರವೃತ್ತಿಯು ಕೃಷ್ಣಮಾಚಾರ್ಯ(೧೮೩೫)ನಿಂದ ಪ್ರಾರಂಭವಾಯಿತು. ಅದುವರೆಗೆ ಸಂಸ್ಕೃತ ಜನನಿ ಸ್ಥಾನದಲ್ಲಿದ್ದು ಸಂಸ್ಕೃತ ಪದಗಳು ಕನ್ನಡಕ್ಕೆ ಬರುವಾಗ ಯಾವ ವ್ಯತ್ಯಾಸಗಳು ಉಂಟಾಗುತ್ತವೆ ಎಂಬುದಷ್ಟೆ ವ್ಯಾಕರಣಗಳಲ್ಲಿ ಚರ್ಚೆಯಾಗುತ್ತಿತ್ತು. ಯಾವುವು ತತ್ಸಮಗಳು, ಯಾವುವು ತದ್ಭವಗಳು ತದ್ಭವಗಳುಂಟಾಗುವಾಗ ಆಗುವ ವ್ಯತ್ಯಾಸಗಳಾವುವು ಇಂತಹವುಗಳನ್ನು ವ್ಯಾಕರಣಗಳಲ್ಲಿ ವಿವರವಾಗಿ ಚರ್ಚಿಸುತ್ತಿದ್ದರು. ಕೃಷ್ಣಮಾಚಾರ್ಯ ಈ ಪ್ರವೃತ್ತಿಯನ್ನು ಬದಲಿಸಿದ. ಜನನಿ ಸ್ಥಾನವನ್ನು ಸಂಸ್ಕೃತದ ಬದಲು ದ್ರಮಿಡಕ್ಕೆ ನೀಡಿದ. ದ್ರಮಿಡ ಎಂದರೆ ತಮಿಳು ಭಾಷೆಗೆ ಇನ್ನೊಂದು ಹೆಸರು. ತಮಿಳೂ ದೇವಭಾಷೆಯಾಗಿದ್ದು ಕನ್ನಡವು ದ್ರಮಿಡಜನ್ಯ ಎಂಬುದು ಇವನ ಪ್ರತಿಪಾದನೆ.  ಇವನ ಈ ಅಂಬೋಣ ಒಂದು ವಾಸ್ತವವನ್ನು ಮೀರಿದ ಹೇಳಿಕೆಯಾದರೂ ಕನ್ನಡ ಪದಗಳನ್ನು ತಮಿಳು ಪದಗಳೊಂದಿಗೆ     ಹೋಲಿಸುವ ಪ್ರವೃತ್ತಿ ಇದರಿಂದ ಪ್ರಾರಂಭವಾಯಿತು.                                           
          ಇವನನಂತರ ಕಾಲ್ಡ್ವೆಲ್ ಎಂಬ ಮಹಾಶಯ ದಕ್ಷಿಣ ಭಾರತದ ಪ್ರಮುಖ ಭಾಷೆಗಳನ್ನು ದ್ರಾವಿಡ ಭಾಷೆಗಳೆಂದು ಕರೆದು ಅವುಗಳಲ್ಲಿರುವ ತಿರುಳೆನಿಸುವ ಪದಗಳನ್ನೂ ಅವುಗಳ ವ್ಯಾಕರಣ ವಿಶೇಷಗಳನ್ನೂ  ಹೋಲಿಸಿ ತುಲನಾತ್ಮಕ ವ್ಯಾಕರಣವನ್ನೇ ಬರೆದ. ಮೊದಲು ದಕ್ಷಿಣ ಭಾರತದ ಭಾಷೆಗಳನ್ನು ಮಾತ್ರ ಒಳಗೊಂಡಿದ್ದ ದ್ರಾವಿಡಭಾಷಾ ಕುಟುಂಬ ಬ್ರಾಹುಈ, ಕುವೀ, ಕುಈ ಮುಂತಾದ ಭಾರತದ ಇತರ ಪ್ರದೇಶದ (ದ್ರಾವಿಡ)ಭಾಷೆಗಳನ್ನೂ ಸೇರಿಸಿಕೊಂಡಿತು. ಕಾಲ್ಡ್ವೆಲನ ವ್ಯಾಕರಣದಿಂದ  ಇಪ್ಪತ್ತೊಂದು ದ್ರಾವಿಡ ಭಾಷೆಗಳ ಪರಿಚಯಕ್ಕೂ ಅವುಗಳಲ್ಲಿರುವ ಪದಗಳ ಹೋಲಿಕೆಗೂ ವೇದಿಕೆ ನಿರ್ಮಾಣವಾಯಿತು.
     1894ರಲ್ಲಿ ಬಂದ ಕಿಟೆಲ್ ನಿಘಂಟು ಈ ನಿಟ್ಟಿನಲ್ಲಿ ಇನ್ನೂ ಒಂದು ಹೆಜ್ಜೆಯ ಮುಂದೆ ಹೋಗಿ ಮುದ್ರಣ ರೀತಿಯಲ್ಲೇ ಪದವು ದೇಶ್ಯ ಅಥವ ಅನ್ಯದೇಶ್ಯ ಎಂದು ತೋರಿಸಿದ್ದಲ್ಲದೆ ಎಲ್ಲ ದೇಶ್ಯ ಪದಗಳಿಗೂ ದ್ರಾವಿಡ ಜ್ಞಾತಿಗಳನ್ನು ಆವರಣದಲ್ಲಿ ನೀಡಿದ್ದಾನೆ. ಕಿಟೆಲನ ನಿಘಂಟು ಕೇವಲ ಒಂದು ಸಾಮಾನ್ಯ ನಿಘಂಟಲ್ಲ. ಅದು ಒಂದು ಜ್ಞಾತಿ ಪದಕೋಶ. ಒಂದು ಚಾರಿತ್ರಿಕ ನಿಘಂಟು ಮತ್ತು ಒಂದು ಸಾಂಸ್ಕೃತಿಕ ಪದಕೋಶ. ಹಾಗಾಗಿ ಎಟಿಮಲಾಜಿಕಲ್ ನಿಘಂಟುಗಳ ಬೆಳವಣಿಗೆಯಲ್ಲಿ ಇದಕ್ಕೊಂದು ಪ್ರಮುಖಸ್ಥಾನವಿದೆ ಎನ್ನಬಹುದು.
ದ್ರಾವಿಡಭಾಷೆಗಳಿಗೆ ಸಂಬಂಧಿಸಿದಂತೆ ಎಟಿಮಲಾಜಿಕಲ್ ನಿಘಂಟೊಂದು ಅರವತ್ತರ ದಶಕದಲ್ಲಿ ರಚಿತವಾಯಿತು.ಎಟಿಮಲಾಜಿಕಲ್ ನಿಘಂಟುಗಳ ಯುಗ ೧೯೬೧ರಲ್ಲಿ ಟಿ ಬರೋ ಮತ್ತು ಎಮ್ ಬಿ ಎಮಿನೋ ಇವರ ಎ ದ್ರವಿಡಿಯನ್ ಎಟಿಮಲಾಜಿಕಲ್ ಡಿಕ್ಷನರಿಯಿಂದ ಪ್ರಾರಂಭವಾಯಿತು. ೧೯೮೪ರಲ್ಲಿ ಇದರ ಪರಿಷ್ಕೃತ ಆವೃತ್ತಿ ಹೊರ ಬಂತು. ೧೯೯೮ರಲ್ಲಿ ಇದರ ಪುನರ್ಮುದ್ರಿತ ಆವೃತ್ತಿ ಹೊರಬಂದಿದೆ. ಇದರಲ್ಲಿ 640 ಪುಟಗಳಿವೆ.4572 ನಮೂದುಗಳಿವೆ. ಇದರಲ್ಲಿ ಪದಗಳ ಆಯ್ಕೆ ದ್ರಾವಿಡ ಭಾಷಾ ಶಬ್ದ ಭಂಡಾರಕ್ಕೆ ಮಾತ್ರ ಸೀಮಿತವಾಗಿದೆ. ಬೇರೆ ಭಾಷೆಗಳಿಂದ ಸ್ವೀಕೃತ ಪದಗಳನ್ನು ಸೇರಿಸಿಲ್ಲ. ಇದರಲ್ಲಿ ಉಲ್ಲೇಖಗೊಂಡ ಪ್ರತಿಯೊಂದು ಭಾಷೆಯ ಪದಗಳ ಪ್ರತ್ಯೇಕ ಸೂಚಿಗಳನ್ನು ಕೊನೆಯಲ್ಲಿ ನೀಡಿದ್ದು ಇದು ಪದಗಳ ಹುಡುಕಾಟಕ್ಕೆ ಅನುಕೂಲವಾಗಿದೆ.
ಈ ನಿಘಂಟಿನಲ್ಲಿ ಉಲ್ಲೇಖಪದಗಳು ಅಥವ ಮುಖ್ಯ ನಮೂದುಗಳನ್ನು ವಿಶಿಷ್ಟ ರಿತಿಯಲ್ಲಿ ಆಯ್ಕೆ ಮಾಡಲಾಗಿದೆ. ಒಂದು ಪದದ ಪ್ರಾಚಿನ ರೂಪವು ಯಾವ ಭಾಷೆಯಲ್ಲಿದೆಯೋ ಆ ಭಾಷೆಯ ಪದ ಮುಖ್ಯ ನಮೂದಾಗುತ್ತದೆ. ಉಳಿದ ಭಾಷೆಗಳ ಪದಗಳನ್ನು ಜ್ಞಾತಿಪದಗಳನ್ನಾಗಿ ನೀಡಲಾಗಿದೆ. ಯಾವುದೇ ಒಂದು ಪದವನ್ನು ದ್ರಾವಿಡ ಎಂದು ಗುರುತಿಸಲಾಗದಿದ್ದರೆ ಅಂತಹ ರೂಪವನ್ನು ಪುನಾರಚಿಸಿ ಕೊಡಲಾಗಿದೆ. ಬರೋ-ಎಮಿನೋ ನೀಘಂಟಿನ ಪ್ರಾಮುಖ್ಯ ಎಷ್ಟೆಂದರೆ ಇಂದಿಗೂ ಇಂತಹ ನಿಘಂಟುಗಳಲ್ಲಿ ದ್ರಾವಿಡಭಾಷಾ ಅಧ್ಯಯನಗಳಲ್ಲಿ ಈ ನಿಘಂಟನ್ನು ಉಲ್ಲೇಖಿಸಲಾಗುತ್ತಿದೆ.
೨೦೧೩ರಲ್ಲಿ ಎನ್ ಉಚಿಡ, ಬಿ ಬಿ ರಾಜಪುರೋಹಿತ್ ಮತ್ತು ಜೆ ತಕಶಿಮ ಎಂಬ ವಿದ್ವಾಂಸರು ಕನ್ನಡ - ಇಂಗ್ಲಿಷ್ ಎಟಿಮಲಾಜಿಕಲ್ ನಿಘಂಟೊಂದನ್ನು ರಚಿಸಿದ್ದಾರೆ. ಇದರಲ್ಲಿ ಪೂರ್ವದ್ರಾವಿಡ ಪದಗಳನ್ನು ಪುನಾರಚಿಸಿ ಕೊಟ್ಟಿಲ್ಲ. ಬಳಕೆ ತಪ್ಪಿದ ಪದಗಳನ್ನು ಗುರುತಿಸಿಕೊಟ್ಟಿದ್ದಾರೆ. ಉಪಭಾಷಾ ಮೂಲವನ್ನು ತೋರಿಸಿದ್ದಾರೆ. ಗ್ರಾಂಥಿಕ ಭಾಷೆಯಲ್ಲಿ ಮಾತ್ರ ಪ್ರಯೋಗವಾಗುವ ಪದಗಳನ್ನು ಹಾಗೆಂದು ಸೂಚಿಸಿದ್ದಾರೆ. ಇವೆಲ್ಲದರ ಹೊರತಾಗಿಯೂ ಇದರಲ್ಲಿ ಇತರ ದ್ರಾವಿಡ ಪದಗಳೊಂದಿಗೆ ಹೋಲಿಕೆ, ಮೂಲರೂಪನಿರ್ಧಾರ ಈ ಅಂಶಗಳಿಗೆ ಗಮನ ಸಂದಿಲ್ಲ. ಉಲ್ಲೇಖಗೊಂಡಿರುವ ದೇಶ್ಯ ಪದಗಳು ದ್ರವಿಡಿಯನ್ ಎಟಿಮಲಾಜಿಕಲ್ ಡಿಕ್ಷನರಿಯಲ್ಲಿ ಎಲ್ಲಿ ಬಂದಿದೆ ಎಂದು ಇಲ್ಲಿ ಸೂಚಿಸಿರುವುದರಿಂದ ಆ ಪದದ ಇತಿಹಾಸ ಮತ್ತು ವ್ಯುತ್ಪತ್ತಿಯ ಬಗ್ಗೆ ಅಲ್ಪವಿವರ ಸಿಕ್ಕಂತಾಗುವುದು.
ಇದರನಂತರ ಈಚೆಗೆ 2014ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಒಂದು ದ್ರಾವಿಡಭಾಷಾ ಜ್ಞಾತಿಪದಕೋಶ ಪ್ರಕಟಿಸಿದೆ. ಇದನ್ನು ಆಗುಮಾಡಿದವರು ಕೆ ಪಿ ಭಟ್ಟ, ಎ ವಿ ನಾವಡ, ಪಿ ಕೇಕುಣ್ಣಾಯ, ಜಿ ಎಸ್ ಮೋಹನ, ಎಮ್ ಕುಂಟಾರ, ಸೆಲ್ವಕುಮಾರಿ ಮತ್ತು ಎಮ್ ಟಿ ರತಿ ಎಂಬ ಕನ್ನಡನಾಡಿನ ಜನಜನಿತ ವಿದ್ವಾಂಸರು. ಇವರು ಹಂಪನಾ ಅವರ ನೇತೃತ್ವದಲ್ಲಿ ಪಟ್ಟಿರುವ ಶ್ರಮದಿಂದ ಸಾಮಾನ್ಯ ಓದುಗನಿಗೂ ಸಂಶೋಧಕರಿಗೂ ಉಪಯುಕ್ತ ಕೃತಿಯೊಂದು ದೊರೆತಿದೆ.
ಈ  ಗ್ರಂಥದಲ್ಲಿ xx + 685 ಪುಟಗಳಿವೆ. ಇದರ ಸಂಪಾದಕವರ್ಗ ಇಲ್ಲಿ ಒಟ್ಟು 3808 ಕನ್ನಡ ಪದಗಳನ್ನು ಮುಖ್ಯಪದಗಳನ್ನಾಗಿಟ್ಟುಕೊಂಡು, ಅವುಗಳನ್ನು ಅಕಾರಾದಿಯಾಗಿ ಜೋಡಿಸಿ ಅರ್ಥಗಳನ್ನು ನೀಡಿದ್ದಾರೆ. ಎಲ್ಲ ಪ್ರಧಾನ ದ್ರಾವಿಡಭಾಷೆಗಳಲ್ಲಿ ಅದಕ್ಕಿರುವ ಸಮಾನ ಪದಗಳನ್ನೂ ಉಲ್ಲೇಖಿಸಿದ್ದಾರೆ. ಇದರಿಂದ ಕನ್ನಡಪದವೊಂದಕ್ಕೆ ತಮಿಳು, ಮಲಯಾಳಂ, ಕೊಡವ, ತುಳು ಮತ್ತು ತೆಲುಗು ಭಾಷೆಗಳಲ್ಲಿರುವ ಸಂವಾದಿ ಪದಗಳನ್ನು ತಿಳಿಯಲು ಅನುಕೂಲವಾಗಿದೆ. ಹವ್ಯಕ ಕನ್ನಡ, ಗೌಡ ಕನ್ನಡ, ಜೇನುಕುರುಬ ಕನ್ನಡ ಇತ್ಯಾದಿ ಉಪಭಾಷೆಗಳಲ್ಲಿ ಯಾವರೂಪ ಮತ್ತು ಅರ್ಥದಲ್ಲಿ ಈ ಪದ ಬರುತ್ತದೆ ಎಂಬುದನ್ನೂ ವಿವರಿಸಿದ್ದಾರೆ.
ಹಾಗೆ ನೋಡಿದರೆ ಇದು ಸಂಪೂರ್ಣ ಹೊಸದೇನಲ್ಲ. ಟಿ ಬರೋ ಮತ್ತು ಎಮ್ ಬಿ ಎಮಿನೋ ಇವರ ಕೃತಿಯನ್ನವಲಂಬಿಸಿ ಕನ್ನಡದ ಸಂದರ್ಭಕ್ಕೆ ಸರಿಹೊಂದುವಂತೆ ರಚಿತವಾದುದು. ಹಲವು ರೀತಿಗಳಲ್ಲಿ ಇದು ಬರೋ-ಎಮಿನೋ ನಿಘಂಟನ್ನು ಮುಂದುವರೆಸಿದೆ. ಅಲ್ಲಿ ಕನ್ನಡದ ಉಪಭಾಷೆಗಳಲ್ಲಿ ಹವ್ಯಕ ಮಾತ್ರ ಹೆಚ್ಚಾಗಿ ಉಲ್ಲೇಖಗೊಂಡಿದ್ದರೆ ಈಗಿನ ದ್ರಾವಿಡಭಾಷಾ ಜ್ಞಾತಿಪದಕೋಶದಲ್ಲಿ ಹಾಲಕ್ಕಿ ಕನ್ನಡ, ಜೇನುಕುರುಬ ಕನ್ನಡ, ನಂಜನಗೂಡ ಕನ್ನಡ, ಬಾರ್ಕೂರು ಕನ್ನಡ ಇತ್ಯಾದಿಯಾಗಿ ಒಂಬತ್ತು ಉಪಭಾಷೆಗಳ ಪದಗಳನ್ನು ಉಲ್ಲೇಖಿಸಿದ್ದಾರೆ.  ಕನ್ನಡಿಗರಿಗಾಗಿ ರಚಿಸಿರುವುದರಿಂದ ಇದರಲ್ಲಿ ಎಲ್ಲವೂ ಕನ್ನಡ ಲಿಪಿಗಳಲ್ಲಿ ಮಾತ್ರವಿದೆ. ಕನ್ನಡ ಪದಗಳನ್ನು ಮಾತ್ರ ಪ್ರಧಾನ ಪದಗಳನ್ನಾಗಿ ಉಲ್ಲೇಖಿಸಲಾಗಿದೆ. ಬರೋ-ಎಮಿನೋ ನಿಘಂಟಿನಂತೆ ಎಲ್ಲ ಪದಗಳನ್ನೂ ಲಿಪ್ಯಂತರಿತ ವಿಧಾನದಲ್ಲಿ ಮಾತ್ರ ಬರೆದಿಲ್ಲ. ಅಲ್ಲಿ ಪ್ರಾಚೀನತೆಯನ್ನಾಧರಿಸಿ ಇತರ ದ್ರಾವಿಡ ಭಾಷಾ ಪದಗಳೂ ಉಲ್ಲೇಖಪದಗಳಾಗಿವೆ; ಹಾಗೆ ನೋಡಿದರೆ ತಮಿಳು ಪದಗಳೇ ಉಲ್ಲೇಖ ಪದಗಳಾಗಿರುವುದು ಹೆಚ್ಚು. ಉದಾ.”ಕುದಿ” ಎಂಬ ಕನ್ನಡ ಪದವು ಬರೋ-ಎಮಿನೋ ನಿಘಂಟಿನಲ್ಲಿ ಸ್ವತಂತ್ರ ನಮೂದಲ್ಲ. ತಮಿಳಿನ “ಕೊತ” ಪದದಡಿ ಬಂದಿರುವ ಪದ. ಇವೆಲ್ಲವೂ ಇಲ್ಲಿ ಸುಧಾರಣೆ ಕಂಡಿವೆ. ಮೇಲ್ನೋಟಕ್ಕೆ  ಈ ಹೊಸ ನಿಘಂಟಿನಲ್ಲಿ 3808ಪದಗಳು ಮಾತ್ರವಿರುವಂತೆ ಕಾಣುತ್ತದೆ. ಆದರೆ ನಿಘಂಟಿನಲ್ಲಿ ಬಂದಿರುವ ಎಲ್ಲ ಪದಗಳ ಅಕಾರಾದಿ ಸೂಚಿಯೊಂದನ್ನು ಕೊನೆಯಲ್ಲಿ ರಚಿಸಿಕೊಟ್ಟಿದ್ದು ಅದರಲ್ಲಿ ಎಣಿಸಿದಾಗ ನಿಘಂಟಿನಲ್ಲಿ ಪದಗಳ ಸಂಖ್ಯೆ 11632 ಆಗಿರುವುದು ಗೊತ್ತಾಗುತ್ತದೆ. ಈ ಸೂಚಿಯನ್ನು ಬಳಸಿಕೊಂಡು ಯಾವುದೇ ಪದವನ್ನು ಮುಖ್ಯನಿಘಂಟಿನಲ್ಲಿ ಹುಡುಕಬಹುದು. ಅರ್ಥ ಮತ್ತು ವಿವರಗಳನ್ನು ತಿಳಿಯಬಹುದು. ಹೀಗೆ ಇದು ಬರೋ-ಎಮಿನೋ ನಿಘಂಟಿನ ಮುಂದುವರಿಕೆಯಾಗಿದ್ದು ಕನ್ನಡ ಲಿಪಿಗಳ ಬಳಕೆ, ಕನ್ನಡದ ಉಲ್ಲೇಖ ಪದಗಳಿರುವುದು, ಪ್ರಾಚೀನ ನಿಘಂಟುಗಳಿಂದ ಪ್ರಮಾಣೀಕೃತ ನಮೂದುಗಳನ್ನು ಒಳಗೊಂಡಿರುವುದು, ಕನ್ನಡದ ಒಂಬತ್ತು ಉಪಭಾಷೆಗಳಿಂದ ಉಲ್ಲೇಖಗಳನ್ನು ಆಯ್ದಿರುವುದು ಇಂತಹವು  ಹೊಸ ನಿಘಂಟಿನ ವೈಶಿಷ್ಟ್ಯಗಳಾಗಿವೆ. ಆದಾಗ್ಯೂ ಉಲ್ಲೇಖಿತ ದ್ರಾವಿಡ ಭಾಷೆಗಳ ಸಂಖ್ಯೆಯನ್ನು ಗಮನಿಸಿದರೆ ಇದು ಸೀಮಿತವಾಗಿದೆ. ಮಾತಿನಲ್ಲಿ ಮಾತ್ರ ಅಸ್ತಿತ್ವದಲ್ಲಿರುವ ದ್ರಾವಿಡನುಡಿಗಳೂ ಸೇರಿದಂತೆ ಒಟ್ಟು ಹತ್ತೊಂಬತ್ತು ಭಾಷೆಗಳನ್ನು ಹಿಂದಿನ ನಿಘಂಟಿನಲ್ಲಿ  ಉಲ್ಲೇಖಿಸಿದ್ದರೆ ಈ ನಿಘಂಟಿನಲ್ಲಿ “ದಕ್ಷಿಣದ ಆರು ಪ್ರಮುಖ ಭಾಷೆಗಳಿಗೆ ಸಂಬಂಧಿಸಿದಂತೆ ಬರೋ ಅವರ ಜ್ಞಾತಿಪದಕೋಶ(1984)ದಲ್ಲಿಯ ಉಲ್ಲೇಖ ಪದಗಳನ್ನು ಪರಿಷ್ಕರಿಸುವುದು ಹಾಗೂ ಕನ್ನಡವನ್ನಾಧರಿಸಿದ ಹೆಚ್ಚಿನ ಉಲ್ಲೇಖ ಪದಗಳನ್ನು ಸೇರ್ಪಡೆಗೊಳಿಸುವುದು” ಇಲ್ಲಿರುವ ಆಶಯ.
ಈ ನಿಘಂಟಿನಲ್ಲಿ ಪ್ರತಿಪದಕ್ಕೆ ಕನ್ನಡದಲ್ಲಿ ವ್ಯಾಖ್ಯೆ ಇದೆ. ಇತರ ದ್ರಾವಿಡ ಭಾಷೆಗಳನ್ನು ಉಲ್ಲೇಖಿಸಿ ಅವುಗಳಲ್ಲಿರುವ ಅರ್ಥವನ್ನು ನೀಡಿದೆ. ಉದಾ. “ಕುದಿ” ಎಂಬ ಉಲ್ಲೇಖ ಪದದಡಿ ತುಳುವಿನಲ್ಲಿ ಇದು “ಕೊದಿ” ಎಂದಿರುವುದನ್ನು ಉಲ್ಲೇಖಿಸಿ “ಕೊದ್ದೇಲು” ಎಂಬ ಪದವನ್ನೂ ನಮೂದಿಸಿದೆ. ಇದರಿಂದ ‘ಕುದ್ದಿದ್ದು ಕೊದ್ದೇಲು’ ಎಂಬಂತೆ ನಿಷ್ಪತ್ತಿ ಹೊಳೆಯುತ್ತದೆ. ಈ ಕೊದ್ದೇಲು ಎಂಬ ಪದವನ್ನು ಹೀಗೆ ಸೇರಿಸಿರುವುದು ಹಳೆಯ ನಿಘಂಟು ಹೇಗೆ ಪರಿಷ್ಕರಣೆಗೊಂಡಿದೆ ಎಂಬುದಕ್ಕೆ ಒಂದು ನಿದರ್ಶನ. ಕುರ್ಕ, ತರಗು, ನೆತ್ತಿ, ಬರಣಿ – ಹೀಗೆ ಹಿಂದಿನ ನಿಘಂಟಿನಲ್ಲಿಲ್ಲದ ಹಲವು ಪದಗಳು ಇಲ್ಲಿ ಉಲ್ಲೇಖಗೊಂಡಿವೆ. ದ್ರಾವಿಡ ಭಾಷೆಗಳಲ್ಲಿ ಜ್ಞಾತಿಗಳಿರುವಂತಹ ಸಂಸ್ಕೃತ,  ಹಿಂದಿ, ಮರಾಠಿ ಪದಗಳನ್ನು ನೀಡಿದ್ದಾರೆ. ಉದಾ. “ವಡೆ” ಎಂಬುದು ಸಂಸ್ಕೃತ ಮೂಲದ್ದು. “ಡೊಕ್ಕರ” ಎಂಬ ಪದ ಸಂಸ್ಕೃತದ ‘ದೋಃಕರಮ್’ ಮತ್ತು ಹಿಂದಿಯ ‘ಠೋಕರ’ ಎಂಬ ಪದಗಳೊಡನೆ ಸಂಬಂಧ ಹೊಂದಿರಬಹುದೆಂದು  ಸೂಚಿಸಿದೆ. “ಡಾಳ”  ಎಂಬುದು ಮರಾಠಿಯ ‘ಢಾಳ’ ಎಂಬ ಮೂಲದ್ದೆಂದು ಸೂಚಿಸಿದೆ. ಇಂತಹ ಇನ್ನೂ ಎಷ್ಟೋ ವೈಶಿಷ್ಟ್ಯಗಳು ಈ ಹೊತ್ತಗೆಯಲ್ಲಿವೆ.
ಎಟಿಮಲಾಜಿಕಲ್ ನಿಘಂಟುಗಳ ಪರಂಪರೆಗೆ ಇದು ಹೊಸ ಸೇರ್ಪಡೆ. ಇಂದಿನ ಎಲ್ಲ ಅಗತ್ಯಗಳಿಗೆ ಸ್ಪಂದಿಸಿದೆ ಎನ್ನಲಾಗುವುದಿಲ್ಲ. ಅಗತ್ಯವಿದ್ದಲ್ಲಿ ಅಂಗಪದಗಳನ್ನು ಒಡೆದು ಅರ್ಥವನ್ನು ನಿರ್ದೇಶಿಸುವುದು, ಬೇರೆ ಮೂಲದ್ದೇ ಆದರೂ ಕನ್ನಡದ್ದೇ ಎಂಬಂತೆ ವ್ಯಹರಿಸಲ್ಪಡುವ ಪದಗಳನ್ನು ಸೇರಿಸುವುದು, ಪ್ರಥಮವಾಗಿ ಈ ಪದಪ್ರಯೋಗ ಕಂಡುಬರುವ ಕಾಲವನ್ನು ತಿಳಿಸುವುದು – ಇಂತಹ ಸುಧಾರಣೆಗಳನ್ನು ಅಳವಡಿಸುವುದರಿಂದ ನಿಷ್ಪತ್ತಿ ಶಾಸ್ತ್ರೀಯ ನಿಘಂಟಿನ ಉಪಯುಕ್ತತೆ ಹೆಚ್ಚಬಹುದು. ಉದಾ. ಪಗಡೆ ಪ್ರಿಯರಲ್ಲಿ ಬಳಕೆಯಲ್ಲಿರುವ ಇತ್ತಿಗ(=ಇರ್ + ತ್ರಿಕ), ಜಾಣ್(= ಸಂಸ್ಕೃತದ ‘ಜ್ಞಾನ’ದ ತದ್ಭವ), ಟೋಪಿ(ಹಿಂದುಸ್ತಾನಿ) ಇತ್ಯಾದಿ ಪದಗಳು ಈಗ ಪ್ರಕಟವಾಗಿರುವ ಯಾವ ನಿಷ್ಪತ್ತಿ ನಿಘಂಟಿನಲ್ಲೂ ಲಭ್ಯವಿಲ್ಲ.
ಒಟ್ಟಿನಲ್ಲಿ ಎಟಿಮಲಾಜಿಕಲ್ ನಿಘಂಟುಗಳ ಪರಂಪರೆಯೊಂದು ಕನ್ನಡದಲ್ಲಿ ಬೇಳೆದಿದೆ. ಪರಂಪರೆಯನ್ನು ಮುಂದುವರೆಸಿ ಹೊಸ ಜ್ಞಾತಿಪದಕೋಶವೊಂದು ಸಾಹಿತ್ಯಪರಿಶತ್ತಿನಿಂದ ಪ್ರಕಟವಾಗಿದೆ, ಇನ್ನಷ್ಟು ಸುಧಾರಿತ ಕೃತಿಗಳು ಈ ಪರಂಪರೆಗೆ ಸೇರುವ ಅಗತ್ಯವಿದೆ.