Search This Blog

Tuesday 14 August 2018

ಇಪ್ಪತ್ತನೆಯ ಶತಮಾನದಲ್ಲಿ ಕನ್ನಡ ವ್ಯಾಕರಣಾಧ್ಯಯನ - ಡಿ ಎನ್ ಶಂಕರಭಟ್ಟ, ಎಂ ವಿ ಸೀತಾರಾಮಯ್ಯ ಮತ್ತು ರಂಗನಾಥ ಶರ್ಮ


   
   ಇಪ್ಪತ್ತನೆಯ ಶತಮಾನದಲ್ಲಿ ಕನ್ನಡ ವ್ಯಾಕರಣಾಧ್ಯಯನ
                                   ಡಿ ಎನ್ ಶಂಕರಭಟ್ಟ, ಎಂ ವಿ ಸೀತಾರಾಮಯ್ಯ ಮತ್ತು ರಂಗನಾಥ ಶರ್ಮ
                                                ++++++++++++++++++++++++++++
ಹಳಗನ್ನಡ ಕಾಲದಲ್ಲಿ ಸಂಸ್ಕೃತ ವ್ಯಾಕರಣ ಪದ್ಧತಿಗಳನ್ನನುಸರಿಸಿ ಕನ್ನಡ ವ್ಯಾಕರಣಗಳ ರಚನೆಯಾಯಿತು. ಕೇಶಿರಾಜನ ಶಬ್ದಮಣಿದರ್ಪಣ, ನಾಗವರ್ಮನ ಶಬ್ದಸ್ಮೃತಿ ಇತ್ಯಾದಿಗಳು ಕಾತಂತ್ರ ಪದ್ಧತಿಯನ್ನನುಸರಿಸಿ ರಚನೆಯಾದುವುಗಳಾದರೆ ಭಟ್ಟಾಕಳಂಕದೇವನ ಶಬ್ದಾನುಶಾಸನ ಪಾಣಿನಿಯ ಪದ್ಧತಿಯನ್ನು ಅನುಸರಿಸಿದೆ. ಇಲ್ಲೆಲ್ಲ ನಾಮಪದ, ಕ್ರಿಯಾಪದ ಮತ್ತು ಅವ್ಯಯಗಳೆಂಬ ಪದಗಳ ತ್ರಿವರ್ಗೀಕರಣವನ್ನು ಅನುಸರಿಸಿದ್ದಾರೆ. ಹತ್ತೊಂಬತ್ತನೆಯ ಶತಮಾನದಲ್ಲಿ ಮಿಶನರಿಗಳ ಆಗಮನದ ನಂತರ ಇಂಗ್ಲಿಷ್ ವ್ಯಾಕರಣ ಮಾದರಿಗಳನ್ನು ಅನುಸರಿಸಿ ವ್ಯಾಕರಣಗಳ ರಚನೆ ಕ್ನಡದಲ್ಲಿ ಮೊದಲ್ಗೊಂಡಿತು. ವ್ಯಾಕರಣ ಕೃತಿಗಳ ಸಂಖ್ಯಾ ಬಾಹುಳ್ಯ ಹೆಚ್ಚಿತು. ಇವುಗಳಲ್ಲಿ ಅಷ್ಟವರ್ಗೀಕರಣವೇ ಜೀವಾಳ. ಒಟ್ಟಿನಲ್ಲಿ ಹತ್ತೊಂಬತ್ತನೆಯ ಶತಮಾನದ ಅಂತ್ಯದ ವರೆಗೆ ರಚಿತವಾದ ಎಲ್ಲ ಕನ್ನಡ ವ್ಯಾಕರಣಗಳು ತಮ್ಮ ಪ್ರೇರಣೆಯನ್ನು ಬೇರೊಂದು ಭಾಷೆಯ ವ್ಯಾಕರಣದ ವಿನ್ಯಾಸದಿಂದ ಪಡೆದಂತಹವು. ಇಪ್ಪತ್ತನೆಯ ಶತಮಾನದಲ್ಲಿ ಕನ್ನಡಕ್ಕೆ ಕನ್ನಡದ್ದೇ ವ್ಯಾಕರಣವಿರ ಬೇಕೆಂಬುದರ ಬಗ್ಗೆ ವಿಪುಲವಾದ ಚರ್ಚೆ ನಡೆಯಿತು ಮತ್ತು ಪರ ವಿರೋಧ ಅಭಿಪ್ರಾಯಗಳು ವ್ಯಕ್ತಗೊಂಡವು. ಅಲ್ಲದೆ ಹಳಗನ್ನಡ ವ್ಯಾಕರಣಗಳ ತೌಲನಿಕ ಅಧ್ಯಯನಗಳು ಎರಡು ಬಂದಿವೆ. ಈ ಎಲ್ಲವುಗಳ ಒಂದು ಸಂಕ್ಷಿಪ್ತ  ಚರ್ಚೆ ಇಲ್ಲಿದೆ.
2.     ಇಪ್ಪತ್ತನೆಯ ಶತಮಾನದ ಹೊಸ ಪ್ರವೃತ್ತಿಗಳು
ಕನ್ನಡ ವ್ಯಾಕರಣವು ಇತರ ಭಾಷಾ ವ್ಯಾಕರಣಗಳ ಅನುಸರಣೆಯಾಗದೆ ಕನ್ನಡದ ಸ್ವರೂಪವನ್ನು ಸ್ವೋಪಜ್ಞವಾಗಿ ಪರಿಶೀಲನೆಯಿಂದ ಮೂಡಿ ಬರ ಬೇಕೆಂಬ ತತ್ವವನ್ನು ಮೊದಲು ಪ್ರತಿಪಾದಿಸಿದವರು ಸೇಡಿಯಾಪು ಕೃಷ್ಣ ಭಟ್ಟರು. “ಕನ್ನಡದ ಜಾಯಮಾನಕ್ಕೆ ತಕ್ಕಂತೆ [ಮತ್ತು] ಇಂದಿನ ಭಾಷಾ ವ್ಯವಸ್ಥೆಗೆ ತಕ್ಕಂತೆ ಕಾಣಿಸಬಹುದಾದ ಮತ್ತು ತದುಪಭೇದಗಳ ವಿವೃತಿ” (ಸೇಡಿಯಾಪು,ಪು256)ಯಾಗಬೇಕೆಂಬ ತುಡಿತವನ್ನು ಇವರ ಕೃತಿಗಳಲ್ಲಿ ನಾವು ಕಾಣಬಹುದು. “ಕನ್ನಡದ ಹಲವು ವ್ಯಾಕರಣ ಪುಸ್ತಕಗಳಲ್ಲಿ ಇಂಗ್ಲಿಷ್ ವ್ಯಾಕರಣವನ್ನು ಕಣ್ಮುಚ್ಚಿ ಅನುಕರಿಸಿ ನಾಮಪದಗಳನ್ನು ವರ್ಗೀಕರಿಸಿರುವುದು ಕಂಡುಬರುತ್ತದೆ” (ಸೇಡಿಯಾಪು, ಪು246) ಇಂತಹ ದೋಷಗಳನ್ನು ಸರಿಪಡಿಸಬೇಕೆಂಬ ಭಾವನೆ ಅವರಲ್ಲಿ ಬಲವಾಗಿತ್ತು. ತಮ್ಮ ಹಲವು ಕೃತಿಗಳಲ್ಲಿ ಅವರು ಇಂತಹ ಪ್ರತಿಪಾದನೆಗಳನ್ನು ಮುಂದಿಟ್ಟಿದ್ದರೂ ಕನ್ನಡ ವ್ಯಾಕರಣದ ಸ್ವರೂಪ ಹೀಗೆಯೇ ಇರಬೇಕೆಂಬ ಒಂದು ಸುಸಂಬದ್ಧ ಸಿದ್ಧಾಂತವನ್ನು ಅವರು ಮಂಡಿಸಿದಂತೆ ತೋರುವುದಿಲ್ಲ.
ಇಂತಹ ಸ್ವರೂಪದ ಬಗ್ಗೆ ಒಂದು ಗಟ್ಟಿ ನಿಲುವನ್ನು ಡಿ ಎನ್ ಶಂಕರ ಭಟ್ಟರ ಕೃತಿಗಳಲ್ಲಿ ಗುರುತಿಸಬಹುದು. ಅವರ ಏಳು ಕೃತಿಗಳಲ್ಲಿ ಇಂತಹ ವಿಷಯಗಳು ಸವಿಸ್ತಾರವಾಗಿ ಬಂದಿವೆ. ಅವು ಯಾವುವೆಂದರೆ:
1.    ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ (2000)
2.    ಕನ್ನಡ ವಾಕ್ಯಗಳ ಒಳರಚನೆ (2004)
3.    ಕನ್ನಡ ಭಾಷೆಯ ಕಲ್ಪಿತ ಚರಿತ್ರೆ  (1995)
4.    ಕನ್ನಡ ಸರ್ವನಾಮಗಳು  (2003)
5.    ಕನ್ನಡ ವಾಕ್ಯಗಳು  (1978)
6.    ನಿಜಕ್ಕೂ ಹಳಗನ್ನಡ ವ್ಯಾಕರಣ ಎಂತಹುದು  (2005)
7.    ಕನ್ನಡ ಶಬ್ದ ರಚನೆ  (1999)
ಸಂಸ್ಕೃತ ವ್ಯಾಕರಣದ ಪರಿಭಾಷೆಯಿಂದ ಮತ್ತು ಇಂಗ್ಲಿಷ್ ವ್ಯಾಕರಣದ ಪರಿಕಲ್ಪನೆಗಳಿಂದ ಕನ್ನಡ ವ್ಯಾಕರಣವನ್ನು ಬಿಡಿಸ ಬೇಕೆಂಬ ಕಾಳಜಿ ಇವರ ಎಲ್ಲ ಕೃತಿಗಳಲ್ಲಿ ಕಂಡುಬರುವ ಅಂಶ. ಕಲಿಯುವವನಿಗೆ ವ್ಯಾಕರಣವನ್ನು ಸುಳಭಗೊಳಿಸುವುದು ಹೇಗೆ ಎಂಬುದು ಇವರ ಇನ್ನೊಂದು ಕಾಳಜಿ. ಭಾಷಾ ಶಾಸ್ತ್ರದ ಆಳವಾದ ಅಧ್ಯಯನ, ವ್ಯಾಪಕವಾಗಿ ಭಾಷಾ ರಚನೆಗಳ ಪರಿಶೀಲನೆ, ವಸ್ತು ನಿಷ್ಠತೆ – ಇವು ಇವರ ಕೃತಿಗಳ ವೈಶಿಷ್ಟ್ಯ. ಈ ಮುಪ್ಪುರಿಯಿಂದ ಕನ್ನಡದಲ್ಲಿ ಭಾಷಾ ಚಿಂತನೆಗೆ ಸಂಬಂಧಿಸಿ ಇವರಿಗೆ ವಿಶಿಷ್ಟ ಸ್ಥಾನವಿದೆ.  ಇವರ ಎಲ್ಲ ಕೃತಿಗಳ ವಿಶ್ಲೇಷಣೆಯನ್ನು ಇಲ್ಲಿ ಪ್ರಯತ್ನಿಸಿಲ್ಲವಾದರೂ ಇವರ ಚಿಂತನೆಗಳ ದಿಕ್ಕನ್ನು, ನಿರೂಪಣೆಯ ರೀತಿಗಳನ್ನು ಮತ್ತು ಸಾಂಪ್ರದಾಯಿಕ ವ್ಯಾಕರಣದಿಂದ ಇವು ಹೇಗೆ ಭಿನ್ನವಾಗುತ್ತವೆ ಎಂಬುದನ್ನೂ ಇಲ್ಲಿ ಸಂಕ್ಷಿಪ್ತವಾಗಿ ಪರಿಚಯಿಸಿದ್ದೇನೆ.
ಭಟ್ಟರು ಈ ಕೃತಿಗಳ ರಚನಾ ಪೂರ್ವದಲ್ಲಿ ಕನ್ನಡ ವ್ಯಾಕರಣ ಸಾಹಿತ್ಯವನ್ನು ವಿವರವಾಗಿ ಪರಿಶೀಳಿಸಿದ್ದಾರೆ. ಕನ್ನಡ ವ್ಯಾಕರಣ ಪದ್ಧತಿಗಳನ್ನು ಹೋಲಿಸಿದ್ದಾರೆ. ಸಂಸ್ಕೃತ ಮತ್ತು ಇಂಗ್ಲಿಷ್ ಪ್ರೇರಿತ ವ್ಯಾಕರಣಗಳ ಪರಿಮಿತಿಗಳನ್ನು ಗುರುತಿಸಿದ್ದಾರೆ. ಕನ್ನಡ ಭಾಷೆಯ ಸ್ವಭಾವ ಮತ್ತು ಬೆಳವಣಿಗೆಯ ಬಗ್ಗೆ ಆಳವಾದ ಅಧ್ಯಯನ ಮತ್ತು ಚಿಂತನೆ ನಡೆಸಿದ್ದಾರೆ. ಇವುಗಳಿಂದೆಲ್ಲ ಕನ್ನಡ ಭಾಷೆಯ ರಚನೆಯನ್ನು ಹೆಚ್ಚು ಸ್ಪಷ್ಟವಾಗಿ ನಿಖರವಾಗಿ ಮತ್ತು ಸುಲಭವಾಗಿ ವಿವರಿಸುವುದಕ್ಕಾಗಿ ನಿಯಮಗಳನ್ನು ಮಂಡಿಸಿದ್ದಾರೆ. ಈ ಕಾರ್ಯಕ್ಕಾಗಿ ‘ಪದಗುಚ್ಛ’ ‘ಪದಕಂತೆ’ ‘ಗುಣಪದಗಳು’ ‘ಸರ್ವಪದಗಳು’ ‘ಕ್ರಿಯಾವಾಕ್ಯ’ ಇತ್ಯಾದಿ ಹೊಸ ಪಾರಿಭಾಷಿಕ ಪದಗಳನ್ನು ಬಳಸಿದ್ದಾರೆ. ಈ ಸಂಬಂಧ ಇವರ ಸಾಧನೆಗಳನ್ನು ಹೀಗೆ ಪಟ್ಟಿ ಮಾಡಬಹುದು:
1.    ಭಾಷಾ ಚರಿತ್ರೆ ಮತ್ತು ಭಾಷಾ ವಿಜ್ಞಾನಗಳಲ್ಲಿ ಮೂಡಿ ಬಂದ ತತ್ವಗಳನ್ನು ವ್ಯಾಕರಣ ನಿಯಮಗಳ ನಿರೂಪಣೆಗಳಲ್ಲಿ ಅಳವಡಿಸುವುದು. ಉದಾಹರಣೆಗೆ ‘ಅರಸ’ ‘ಅರಸಿ’ ‘ನೊಗ’ ‘ಬಿನ್ನಪ’ ‘ಕೆಲಸ’ ಮೊದಲಾದ ಪದಗಳನ್ನು ರಾಜನ್ ರಾಜ್ಞೀ ಯುಗ ವಿಜ್ಞಾಪ್ಯ ಕ್ರಿಯಾ ಮೊದಲಾದ ಸಂಸ್ಕೃತ ಪದಗಳಿಂದ ಸಾಧಿಸುವ ಬದಲಾಗಿ ‘ಅರಶನ್’ ‘ಅರಶ’ ‘ನುಗಂ’ ‘ವಿಣ್ಣಪ್ಪಂ’ ‘ಕಿರಿಶೈ’ ಮೊದಲಾದ ತದ್ಭವ ಪದಗಳಿಂದ ಸಾಧಿಸುವುದು ಸುಲಭ ಎಂಬುದನ್ನು ಆರ್ ನರಸಿಂಹಾಚಾರ್ ಇವರ ಕನ್ನಡ ಭಾಷೆಯ ಚರಿತ್ರೆಯನ್ನು ಉಲ್ಲೇಖಿಸಿ ಪ್ರತಿಪಾದಿಸಿದ್ದಾರೆ (ಭಟ್,2005 ಪು 95)
2.    ಇತರ ವ್ಯಾಕರಣಕಾರರ ಚಿಂತನೆಗಳನ್ನು ಇದೇ ರೀತಿ ಅಳವಡಿಸಿರುವುದು. ಉದಾಹರಣೆಗೆ ಕುಡುವಿಲ್ಲ, ಅಲರ್ಗಣ್ಣ, ನಿಡುಮೂಗಿ – ಇಂತಹ ಪದಗಳಲ್ಲಿ “ಕರ್ಮಧಾರಯ [ಸಮಾಸ]ದಿಂದ ಸಿದ್ಧವಾದ ನಾಮಪದಕ್ಕೆ ತದ್ಧಿತ ಪದವೊಂದು ಸೇರಿದೆ” ಎಂಬ ಅಂಶವನ್ನು  ವೆಂಕಟಾಚಲ ಶಾಸ್ತ್ರಿ ಅವರನ್ನು ಉಲ್ಲೇಖಿಸಿ ಪ್ರತಿಪಾದಿಸಿದ್ದಾರೆ (ಭಟ್,2005 ಪು 122).
3.    ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿಗೆ ಆಸ್ಪದವಾದ, ಸುದೀರ್ಘ ಚರ್ಚೆಗೆ ಒಳಗಾದ ಬೇರೆಬೇರೆ ವಿಷಯಗಳನ್ನು ಮತ್ತೊಮ್ಮೆ ಚರ್ಚಿಸಿ ಕನ್ನಡದ ಸ್ವಭಾವಕ್ಕೆ ತಕ್ಕಂತೆ ಮಾರ್ಪಡಿಸುವುದು. ಉದಾಹರಣೆಗೆ ಕನ್ನಡದಲ್ಲಿ ಪದವರ್ಗಗಳು ಮೂರೋ, ಎಂಟೋ ಅಥವ ಕಿಟೆಲ್ ಹೇಳಿದಂತೆ ಹದಿಮೂರೋ ಎಂಬಿವುಗಳನ್ನು ಪರಿಶೀಲಿಸಿ ಕನ್ನಡದಲ್ಲಿ ಪದವರ್ಗಗಳು ನಾಲ್ಕು ಎಂದು ನಿರ್ಣಯಿಸಿದ್ದಾರೆ (ಭಟ್, 2005 ಪು 62-68).
4.    ಯಾಕೆ ಹೀಗೆ ಎಂದೆನಿಸುವ ಕೆಲವು ಅಂಶಗಳನ್ನು ಕಾರಣ ಕೊಟ್ಟು ವಿವರಿಸಿ ಅದೊಂದು ಆಕ್ಷೇಪವಾಗಿರದೆ ಕನ್ನಡ ವ್ಯಾಕರಣದ ಮೈಯಲ್ಲಿ ಸರಿಯಾಗಿ ಹೊಂದುವ ವಿಷಯ ಎಂಬುದನ್ನು ತೋರಿಸಿಕೊಡುವುದು. ಉದಾಹರಣೆಗೆ ರವಿ ಮೂಡಿದಂ ಎಂಬಲ್ಲಿ ರವಿ ಎಂಬುದು ಮನುಷ್ಯನನ್ನು ಸೂಚಿಸುವ ಪದವಲ್ಲದಿದ್ದರೂ ಅದಕ್ಕೆ ಮನುಷ್ತ್ವವನ್ನು ಆರೋಪಿಸಿರುವುದು ಅದು ಪುಲ್ಲಿಂಗವಾಗಿರುವುದಕ್ಕೆ ಕಾರಣ ಎಂಬುದಾಗಿ ವಿವರಿಸಿದ್ದಾರೆ (ಭಟ್,2005 ಪು145).
5.    ಪದಗಳ ಆಂತರಿಕ ರಚನೆಯ ಆಧಾರದಲ್ಲಿ ಕನ್ನಡ ವ್ಯಾಕರಣಗಳಲ್ಲಿರುವ ‘ಅಪಭ್ರಂಶ ಪ್ರಕರಣ’ವನ್ನು ಸಂಪೂರ್ಣವಾಗಿ ಪರಿಷ್ಕರಿಸಲು ಸೂಚನೆಗಳಿವೆ. ಉದಾಹರಣೆಗೆ ‘ಪ್ರತಿ’ ‘ಅತಿ’ ಇಂತಹ ಭಾಷಾಘಟಕಗಳನ್ನು ಉಪಸರ್ಗಗಳಂತಲ್ಲದೆ ಪ್ರತ್ಯೇಕ ಪದಗಳನ್ನಾಗಿ ಎಣಿಸುವುದು ಕನ್ನಡ ಭಾಷೆಯು ಪದಗಳನ್ನು ಸ್ವೀಕರಿಸುವ ರೀತಿನೀತಿಗಳನ್ನು ಅರ್ಥಮಾಡಿಕೊಳ್ಳಲು ಸಹಾಯಕ ವಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ (ಭಟ್,1999 ಪು182)                                                                                                                                                                                                               
                          ಭಟ್ಟರ ಕೃತಿಗಳಲ್ಲಿ ಇಂತಹ ಹಲವು ಇತರ ನಿರೂಪಣೆಗಳಿವೆ. “ಕನ್ನಡ ಸಮಸ್ತ ಪದಗಳನ್ನು ಅವುಗಳ ಮೊದಲನೆಯ ಅಂಗಪದವನ್ನಾಧರಿಸಿ ಮೂರು ಮುಖ್ಯ ವಿಭಾಗಗಳಾಗಿ (ನಾಮಪದಯುಕ್ತ, ಗುಣವಾಚಕ ಯುಕ್ತ, ಕ್ರಿಯಾಪದ ಯುಕ್ತ ಎಂಬುದಾಗಿ) ವರ್ಗೀಕರಿಸುವುದು ಕನ್ನಡ ವ್ಯಾಕರಣದ ಮಟ್ಟಿಗೆ ಸಮರ್ಪಕವಾದುದೆಂದು ಹೇಳಬಹುದು” (ಭಟ್,2000 ಪು127) ಎಂದು ವಿವರಿಸಿರುವುದು ಅಂತಹವುಗಳಲ್ಲಿ ಒಂದು. ಈ ಅಭಿಪ್ರಾಯವು ರಾಚನಿಕವಾಗಿ ಸರಿ ಎನಿಸಿದರೂ ಈ ವಿಧಾನ ಎರಡನೆಯ ಮತ್ತು ಮೂರನೆಯ ವಿಭಾಗಗಳಿಗೆ ಸಮರ್ಪಕವಾಗಿ ಅನ್ವಯವಾದಂತೆ ಮೊದಲ ಗುಂಪಿಗೆ ಅನ್ವಯವಾಗದು. ನಾಮಪದಯುಕ್ತ ಎಂಬ ವರ್ಗದಲ್ಲಿ ತತ್ಪುರುಷಗಳು ಮತ್ತು ದ್ವಂದ್ವ ಎಂಬ ಉಪವಿಭಾಗಗಳನ್ನು ಕಲ್ಪಿಸಬೇಕಾಗುತ್ತದೆ. ಅಲ್ಲದೆ ವಿಗ್ರಹವಾಕ್ಯಗಳನ್ನು ಸಾಂಪ್ರದಾಯಿಕವಾಗಿ ಹೇಳುವ ರೀತಿಯು ಸಮಾಸಪದದ ಅರ್ಥವನ್ನು ಸ್ಪಷ್ಟವಾಗಿ ತಿಳಿಸಲು ಉಪಯುಕ್ತ ಮತ್ತು ಇದನ್ನು ವಿವರಿಸಲು ಒಂದು ಸಾಮಾನ್ಯೀಕೃತ ನಿಯಮ ನಿರ್ವಚನ ಕೂಡ ಸಾಂಪ್ರದಾಯಕ ಪದ್ಧತಿಯಲ್ಲಿಯೇ ಹೆಚ್ಚು ಪ್ರಸಕ್ತ. ಈ ಎಲ್ಲ ವಿಷಯಗಳ ಬಗ್ಗೆ ಹೆಚ್ಚು ಚರ್ಚೆ ಅಗತ್ಯವಿರಬಹುದು. ವಿಭಕ್ತಿಗಳನ್ನು ಕಾರಕವಶದಿಂದ ವಿಂಗಡಿಸುವ ರೀತಿಯನ್ನು ಬಿಟ್ಟು “ಅವುಗಳ ಅರ್ಥವನ್ನಾಧರಿಸಿ - ಬಾಧಿತ(ಅನ್ನು), ಮೂಲ(ಇಂದ), ಉದ್ದೇಶ(ಗೆ) ಮತ್ತು ಆಕರ(ಅಲ್ಲಿ) ಎಂಬ ಹೆಸರುಗಳಿಂದ ವಿವರಿಸಿದರೆ” (ಭಟ್,2000 ಪು164) ತಿಳಿಸಿ ಹೇಳುವುದು ಮತ್ತು ನೆನಪಿಟ್ಟುಕೊಳ್ಳುವುದು ಸುಲಭವಾದೀತೆಂದು ಅಭಿಪ್ರಾಯ ಪಟ್ಟಿದ್ದಾರೆ. ಪಠ್ಯ ಪುಸ್ತಕಗಳಲ್ಲಿ ಇಂತಹವನ್ನು ವಿಮರ್ಶಿಸಿ ಅಳವಡಿಸುವುದು ಸೂಕ್ತವಾದೀತು.
                          ಭಟ್ಟರ ನಿರೂಪಣೆಗಳ ಬಗ್ಗೆ ಚರ್ಚೆ ನಡೆದಿದೆ. ತೀವ್ರ ಟೀಕೆಗಳು ಬಂದಿವೆ. ಇಂತಹ ಒಂದು ಟೀಕೆಯನ್ನು ವ್ಯಾಕರಣ ಶಾಸ್ತ್ರದ ಪರಿವಾರ (ಶರ್ಮ,2002) ಎಂಬ ಕೃತಿಯಲ್ಲಿ ನೋಡಬಹುದು. ರಂಗನಾಥ ಶರ್ಮ ಇವರು ಭಟ್ಟರ ಕಾರಕ ಮತ್ತು ವಿಭಕ್ತಿಗಳ ನಿರೂಪಣೆಗಳನ್ನು ಒಪ್ಪುವುದಿಲ್ಲ (ಶರ್ಮ, 2002 ಪು 3). ಕನ್ನಡ ವರ್ಣಮಾಲೆಯಲ್ಲಿ ಭಟ್ಟರು ಸೂಚಿಸಿರುವ ಅನುಪೂರ್ವಿಯನ್ನು ಒಪ್ಪುವುದಿಲ್ಲ  (ಶರ್ಮ, 2002 ಪು 9). ವೈಯಾಕರಣಿ ಎಂಬ ಪದರೂಪದ ಬಗ್ಗೆ ಅವರಿಗೆ ಆಕ್ಷೇಪವಿದೆ. ಭಟ್ಟರೂ ಇವುಗಳಿಗೆ ತಮ್ಮದೇ ರೀತಿಯಲ್ಲಿ ಸ್ಪಂದಿಸಿದ್ದಾರೆ (ಭಟ್,2005). ಒಟ್ಟಾರೆ ಸಮನ್ಯಯವು ಇನ್ನೂಸಾಧಿತವಾಗಬೇಕಿದೆ.
                          ಕನ್ನಡ ವ್ಯಾಕರಣದ ಬಗ್ಗೆ ಪ್ರಮಾಣದಲ್ಲಿಯೂ ಗುಣಮಟ್ಟದಲ್ಲಿಯೂ ಶ್ರೀಯುತ ಶಂಕರ ಭಟ್ಟರಷ್ಟು ಕೃತಿರಚನೆ ಮಾಡಿದವರು ಬೇರೆ ಇಲ್ಲ. ಸ್ವೋಪಜ್ಙತೆ, ಭಾಷಾ ಘಟಕಗಳ ಸೂಕ್ಷ್ಮ ಪರಿಶೀಲನೆ, ಸಂಸ್ಕೃತ ಅಥವ ಇಂಗ್ಲಿಷ್ ಚೌಕಟ್ಟನ್ನು ಉಪಯೋಗಿಸದೆ ಕನ್ನಡ ವ್ಯಾಕರಣವನ್ನು ತನ್ನದೇ ನೆಲೆಯಲ್ಲಿ ಕಟ್ಟಬೇಕೆಂಬ ಕಾಳಜಿ – ಇವೆಲ್ಲವೂ ಪ್ರೊ ಭಟ್ಟರ ಕೃತಿಗಳ ಮುಖ್ಯ ಲಕ್ಷಣಗಳು. ಇವು ಕನ್ನಡ ವ್ಯಾಕರಣಕ್ಕೆ ಹೊಸ ದಿಕ್ಕು ತೋರಿಸ ಬಲ್ಲವು. ಲಭ್ಯವಿರುವ ವಾಸ್ತವಾಂಶಗಳನ್ನು ಈ ತತ್ವಗಳು ಧರಿಸಬಲ್ಲವೇ, ಈ ತತ್ವಗಳಲ್ಲಿ ತರ್ಕಬದ್ಧತೆ ಏಕಪ್ರಕಾರವಾಗಿವೆಯೇ – ಇಂತಹವುಗಳ ದೃಷ್ಟಿಯಿಂದ ವಿಸ್ತೃತವಾದ ಚರ್ಚೆಯ ಅಗತ್ಯವಿದೆ. ಆಗ ಮಾತ್ರ ಸಮನ್ವಯದ ಸಾಧನೆ ಮತ್ತು ತನ್ಮೂಲಕ ಖಚಿತವಾದ ನಿಯಮಗಳ ವಿಕಾಸ ಸಾಧ್ಯವಾಗುತ್ತದೆ.
ಶ್ರೀ ರಂಗನಾಥಶರ್ಮ ಇವರ ಎರಡು ಕೃತಿಗಳು
ವಿದ್ವಾನ್ ಶ್ರೀ ರಂಗನಾಥ ಶರ್ಮರು ಮೇಲೆ ಉಲ್ಲೇಖಿಸಿದ ವ್ಯಾಕರಣಶಾಸ್ತ್ರದ ಪರಿವಾರ ಎಂಬ ಕೃತಿಯನ್ನಲ್ಲದೆ ಹೊಸಗನ್ನಡ ವ್ಯಾಕರಣ ಎಂಬ ಇನ್ನೊಂದು ಪುಸ್ತವನ್ನೂ ಬರೆದಿದ್ದಾರೆ. ಈ ಕೃತಿಗಳಲ್ಲಿ ಇವರು ಕನ್ನಡ ಭಾಷೆಯ ಸಾಧು ಪ್ರಯೋಗಗಳಾವುವು ಎಂಬ ಬಗ್ಗೆ ಚಿಂತನೆ ನಡೆಸಿದ್ದಾರೆ. ಮೊದಲನೆಯದಾದ ವ್ಯಾಕರಣಶಾಸ್ತ್ರದ ಪರಿವಾರದಲ್ಲಿ ಐದು ಅಧ್ಯಾಯಗಳಿವೆ. ಇದು 164ಪುಟಗಳಷ್ಟು ವಿಸ್ತಾರದ್ದು. ‘ಕಾರಕ ಮತ್ತು ವಿಭಕ್ತಿ’ ಮತ್ತು ‘ಪಂಚಮೀ ವಿಭಕ್ತಿ ಪರಾಮರ್ಶೆ’ ಇವೆರಡು ಈ ಪುಸ್ತಕದ ಮೊದಲೆರಡು ಅಧ್ಯಾಯಗಳ ಶೀರ್ಷಿಕೆಗಳು ಮತ್ತು ಇವೆರಡೇ ಪುಸ್ತಕದ 134 ಪುಟಗಳಲ್ಲಿ ವ್ಯಾಪಿಸಿವೆ. ಉಳಿದ 30 ಪುಟಗಳಲ್ಲಿ ‘ವರ್ತಮಾನ ಕಾಲ’. ‘ಗಮಕ ಸಮಾಸ’ ‘ಕವಿರಾಜಮಾರ್ಗದ ನೂತನ ಸಂಸ್ಕರಣ’ – ಈ ವಿಷಯಗಳು ಬಂದಿವೆ. ಈ ಕೃತಿಯಲ್ಲಿ ಶರ್ಮರ ನಿರೂಪಣೆಗಳು ಶಂಕರ ಭಟ್ಟರ ಪ್ರತಿಪಾದನೆಗಳಿಗೆ ತದ್ವಿರುದ್ಧ ತುದಿಯಲ್ಲಿವೆ. ಭಟ್ಟರು ಕನ್ನಡದಲ್ಲಿ ನಾಲ್ಕು ಉದ್ದೇಶಗಳಿಗೆ ನಾಲ್ಕು ವಿಭಕ್ತಿಗಳು ಸಾಕು ಎಂದು ವಾದಿಸುತ್ತಾರೆ. ವಿಭಕ್ತಿಗಳು ಕಾರಕವಶಗಳೆಂದೂ ವಿಭಕ್ತಿಗಳೆಷ್ಟೇ ಇರಲಿ ಎಲ್ಲ ಭಾಷೆಗಳಲ್ಲೂ ಕಾರಕಗಳು ಆರೇ ಎಂದೂ ಶರ್ಮರ ವಾದ (ಶರ್ಮ, 2002 ಪು132). ವ್ಯಾಕರಣಕಾರರು ನಿರೂಪಿಸಿರುವುದಕ್ಕನುಗುಣವಾಗಿ ವಿಭಕ್ತಿಗಳನ್ನು ನಿಯತವಾಗಿ ಬಳಸಬೇಕೆಂಬುದು ಇವರ ಕಳಕಳಿ (ಶರ್ಮ, 2002 ಪು63 – ಅಪದಂ ನ ಪ್ರಯುಂಜೀತ ಇತ್ಯಾದಿ). ವಿಭಕ್ತಿಗಳನ್ನು ಸರಿಯಾಗಿ ಬಳಸದಿದ್ದಲ್ಲಿ ‘ಕುರಿ ನುಂಗಿದ ಹಾವು’ ಎಂಬಂತಹ ಪತ್ರಿಕಾ ಶೀರ್ಷಿಕೆಯಲ್ಲಿ ಕುರಿ ಹೆಬ್ಬಾವನ್ನು ನುಂಗಿತೋ ಹೆಬ್ಬಾವು ಕುರಿಯನ್ನು ನುಂಗಿತೋ ಎಂಬುದು ಗೊತ್ತಾಗದಿರುವಂತಹ ಸಂದಿಗ್ಧತೆ ಉಂಟಾಗುತ್ತದೆ (ಶರ್ಮ, 2002 ಪು76). ಇಷ್ಟರ ಮಟ್ಟಿಗೆ ಇವರು ಹೇಳುವಂತೆ ‘ಭಾಷಾಸ್ವರೂಪವನ್ನು ಕೆಡಿಸದೆ ಉಳಿಸಿಕೊಂಡು ಹೋಗುವುದು ಅವಶ್ಯಕ’ (ಶರ್ಮ, 2002 ಪು12).
                          ಕೃತಿಯಲ್ಲಿ ರಂಗನಾಥ ಶರ್ಮರದು ಒಂದು ರೀತಿಯ ತಾತ್ವಿಕ ದೃಷ್ಟಿ. ಅವರು ‘ವ್ಯಾಕರಣವನ್ನು ವೇದಾಂಗವೆಂದೂ ವೇದಕ್ಕೆ ಮುಖವಿದ್ದಂತೆ ಪ್ರಧಾನವೆಂದೂ ಪರಿಗಣಿಸುತ್ತಾರೆ (ಶರ್ಮ,ಪು5) ಹಾಗೆಯೇ ಸಂಸ್ಕೃತ ವ್ಯಾಕರಣದಲ್ಲಿರುವ ತತ್ವಗಳು ಇತರ ಭಾಷಾ ವ್ಯಾಕರಣಗಳಿಗೂ ಅನ್ವಯಿಸುತ್ತವೆ ಎಂಬುದು ಇವರ ನಂಬಿಕೆ. ಉದಾಹರಣೆಗೆ ಇವರು ಹೇಳುತ್ತಾರೆ: “ಸಕಲ ಭಾಷೆಗಳಲ್ಲೂ ನಿಹಿತವಾಗಿರುವ ಗೂಢ ತತ್ವವೇ ಕಾರಕತ್ವ (ಶರ್ಮ,2002 ಪು2). ಇದೊಂದು ಪಾರಂಪರಿಕ ದೃಷ್ಟಿ. ಮತಿಲಾಲ್ ಎಂಬ ವಿದ್ವಾಂಸರು ಹೇಳತ್ತಾರೆ: ವ್ಯಾಕರಣವು ಎಲ್ಲ ಶಾಸ್ತ್ರಗಳ ಅಧ್ಯಯನಕ್ಕೆ  ಮಹಾದ್ವಾರವೆಂಬ ಮನ್ನಣೆಗೆ ಪಾತ್ರವಾಗಿದೆ... ... ಪಾಣಿನಿಯು ಪ್ರಾರಂಭಿಸಿದ ವ್ಯಾಕರಣಾಧ್ಯಯನ ವಿಧಾನಗಳನ್ನು ಬೇರೆಬೇರೆ ಭಾಷೆಗಳಿಗೆ ಹಾಗೂ ಭಾಷಿಕ ವ್ಯವಸ್ಥೆಗಳಿಗೂ ವಿಸ್ತರಿಸಬಹುದೆಂದು ಕೆಲವರು ವಾದಿಸುತ್ತಾರೆ (ಮತಿಲಾಲ್,ಪು33,34). ಹೀಗೆ ವಿಸ್ತರಿಸುವುದೆಂದರೆ ಪರಿಭಾಷೆ, ವರ್ಗೀಕರಣ, ನಿರೂಪಣಾ ಕ್ರಮ ಇತ್ಯಾದಿಗಳನ್ನು ಅಳವಡಿಸಿಕೊಳ್ಳುವುದೆಂದರ್ಥ.
                          ಈಗಾಗಲೇ ಪ್ರಚಲಿತವಿರುವ ಪರಿಭಾಷೆಯ ಬಳಕೆ, ಬಳಸುವುದಕ್ಕೂ ಅರ್ಥಮಾಡಿಕೊಳ್ಳುವುದಕ್ಕೂ ಸುಲಭವಾಗುತ್ತದೆ ಎಂಬುದನ್ನು ಒಪ್ಪ ಬೇಕಾಗುತ್ತದೆ. ಆದರೆ ಇಂತಹ ಎಲ್ಲ ಪಾರಿಭಾಷಿಕ ಪದಗಳು ಕನ್ನಡ ವ್ಯಾಕರಣ ವಿವರಣೆಗೆ ಅಗತ್ಯವಲ್ಲ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಸಂಸ್ಕೃತ ವ್ಯಾಕರಣದಲ್ಲಿ ಬಳಸಲಾದ ಪರಿಭಾಷೆ ಮತ್ತು ಪರಿಕಲ್ಪನೆಗಳನ್ನು  ಹಾಗೆ ಹಾಗೆಯೇ ಕನ್ನಡದಲ್ಲಿ ಬಳಸುವುದು ಎಷ್ಟುಮಟ್ಟಿಗೆ ಸೂಕ್ತವಾದೀತೆಂಬುದು ಇನ್ನೊಂದು ಪ್ರಶ್ನೆ. ಪಂಚಮೀ ವಿಭಕ್ತಿ ಕನ್ನಡದಲ್ಲಿ ಇದೆಯೋ ಇಲ್ಲವೋ, ಒಂದು ನಿರ್ದಿಷ್ಟ ವಿಧದ ಸಮಾಸ ಕನ್ನಡದಲ್ಲಿ ಇದೆಯೋ ಇಲ್ಲವೋ ಎಂಬಂತಹ ಹುಡುಕಾಟಗಳು ಹಳಗನ್ನಡ ಕಾಲದಿಂದಲೂ ಇರುವುದೇ ಈ ಪ್ರಶ್ನೆಗಳಿಗೆ ಎಡೆಮಾಡುತ್ತದೆ. ಭಾಷೆ ಮತ್ತು ವ್ಯಾಕರಣಗಳನ್ನು ಅರ್ಥಮಾಡಿಕೊಳ್ಳಲು ಕಲಿಯಲು ಮತ್ತು ಕಲಿಸಲು ಇವು ಎಷ್ಟು ಸಹಾಯ ಮಾಡುತ್ತವೆ ಭಾಷೆಯ ರಚನೆಯನ್ನು ಸ್ಪಷ್ಟ ಪಡಿಸುವಲ್ಲಿ ಇವುಗಳ ಕೊಡುಗೆ ಏನು ಎಂಬಿವುಗಳನ್ನೂ ಯೋಚಿಸುವುದು ಅಗತ್ಯ. ಇವೆಲ್ಲವೂ   ಕನ್ನಡ ವ್ಯಾಕರಣ ರಚನೆಗೆ ಮಾರ್ಗದರ್ಶಕ ಸೂತ್ರಗಳಾಗ ಬಲ್ಲವು. ವ್ಯಾಪಕವಾಗಿರುವ ಸಾರ್ವತ್ರಿಕ ವ್ಯಾಕರಣ ಶಾಸ್ತ್ರವೊಂದರಿಂದ ತತ್ವಗಳನ್ನು ಸ್ವೀಕರಿಸುವಾಗ ಇಂತಹ ಪರಿಮಿತಿಗಳನ್ನು ವಿಧಿಸಿಕೊಳ್ಳುವುದು ಕನ್ನಡ ಭಾಷೆಯ ಸೀಮಿತತೆಗೆ ಅಗತ್ಯ ಎಂಬುದನ್ನೂ ಒಪ್ಪಬೇಕಾಗುತ್ತದೆ. ಕನ್ನಡ ಭಾಷೆ ಎಲ್ಲಿ ಆ ಚೌಕಟ್ಟಿನಿಂದ ಹೊರ ಚಾಚುತ್ತದೋ ಅಲ್ಲಿ ಹೊಸ ರೀತಿಯ ನೀರೂಪಣೆ ಅನಿವಾರ್ಯ.
                          ಶರ್ಮರ ಇನ್ನೊಂದು ಕೃತಿ ಹೊಸಗನ್ನಡ ವ್ಯಾಕರಣ. ಇದು ಸಾಮಾನ್ಯ ಜನರ ಆಸಕ್ತಿಗೆ ಸ್ಪಂದಿಸುವ ಇರಾದೆಯದ್ದು. ವಿದ್ಯಾರ್ಥಿಗಳಿಗೂ ಉಪಯುಕ್ತ. ಚಾರಿತ್ರಿಕ ಅಂಶಗಳು, ವಿಶಿಷ್ಟ ಪದಗಳು, ವಾಕ್ಯಗಳು – ಈ ಎಲ್ಲವುಗಳ ಉದಾಹರಣೆ ಮತ್ತು ಚರ್ಚೆ ಈ ಕೃತಿಯ ವೈಶಿಷ್ಟ್ಯ. ಹೊಸಗನ್ನಡದಲ್ಲಿ ಬಂದಿರುವ ಕೆಲವು ವಿಶಿಷ್ಟ ಪ್ರಯೋಗಗಳನ್ನು ಇಲ್ಲಿ ಚರ್ಚೆಗೆ ಒಳಪಡಿಸಲಾಗಿದೆ. ಉಧಾಹರಣೆಗೆ ‘ಪುಸ್ತಕದಲ್ಲಿನ’ ಎಂಬ ಪ್ರಯೋಗದಲ್ಲಿ ಸಪ್ತಮೀ ವಿಭಕ್ತಿ ಮುಂದೆ ಷಷ್ಠೀ ವಿಭಕ್ತಿ ಬಂದಿರುವುದು ಹೇಗೆ? ‘ಸರಕಾರದಿಂದ ಆಜ್ಞೆಯನ್ನು ಹೊರಡಿಸಲಾಗುವುದು’ – ಈ ರೀತಿಯದು ಕರ್ತರೀ ಪ್ರಯೋಗವೇ? ಇತ್ಯಾದಿ ಸೂಕ್ತ ಪ್ರಶ್ನೆಗಳನ್ನು ತಮ್ಮ ಮುನ್ನುಡಿಯಲ್ಲಿ ಇವರು ಎತ್ತಿದ್ದು ವ್ಯಾಕರಣಾಸಕ್ತರು ವಿಚಾರ ಮಾಡಬೇಕಾದ ವಿಷಯಗಳಾಗಿವೆ.
                          ರಂಗನಾಥ ಶರ್ಮರ ಕೃತಿಗಳಲ್ಲಿ ಪಾಂಡಿತ್ಯಪೂರ್ಣ ಚರ್ಚೆಗಳಿವೆ. ಕನ್ನಡದ ಸಾಧು ಪ್ರಯೋಗಗಳನ್ನು ಪತ್ತೆ ಹಚ್ಚಿ ಉಳಿಸಬೇಕೆಂಬ ಘನವಾದ ಕಾಳಜಿ ಇದೆ. ಇದಕ್ಕೆ ಸರಿಯಾದ ಉಪಕರಣ ಸಂಸ್ಕೃತ ವ್ಯಾಕರಣಕಾರರು ಬೆಳೆಸಿದ ಚೌಕಟ್ಟೇ ಆಗಿದೆ ಎಂಬುದು ಇವರ ದೃಢ ನಂಬಿಕೆ.
3.          ಹಳಗನ್ನಡ ವ್ಯಾಕರಣ ಕೃತಿಗಳ ತೌಲನಿಕ ಅಧ್ಯಯನಗಳು
                          ಹಳಗನ್ನಡಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಎರಡು ಹಾಗೂ ಸಂಸ್ಕೃತದಲ್ಲಿ ಎರಡು ಹೀಗೆ ನಾಲ್ಕು ವ್ಯಾಕರಣಗಳಿವೆ. ಇವುಗಳಲ್ಲಿ ಪ್ರತಿಯೊಂದರ ಅಥವ ಪಪ್ರತಿಯೊಬ್ಬ ಕೃತಿಕಾರನ ಕೊಡುಗೆಗಳೇನು ಎಂಬುದು ಒಂದು ಆಸಕ್ತಿದಾಯಕ ವಿಷಯ. ಈ ದೃಷ್ಟಿಯಿಂದ ವ್ಯಾಕರಣ ಕೃತಿಗಳ ತೌಲನಿಕ ಅಧ್ಯಯನ ಮುಖ್ಯ ವಾಗುತ್ತದೆ. ಇಂತಹ ಎರಡು ಮುಖ್ಯ ಅಧ್ಯಯನಗಳಿವೆ:
1.    ಎಂ ವಿ ಸೀ ಇವರ ಪ್ರಾಚೀನ ಕನ್ನಡ ವ್ಯಾಕರಣಗಳು
2.    ದೊಡ್ಡ ಸ್ವಾಮಿ ಇವರ ಹಳಗನ್ನಡ ವ್ಯಾಕರಣಗಳ ತೌಲನಿಕ ಅಧ್ಯಯನ
                  ಎಮ್ ವಿ ಸೀ ಇವರ ಕೃತಿಯಲ್ಲಿ ಹೆಸರಿನಿಂದ ನಿರೀಕ್ಷಿಸಬಹುದಾದಂತೆ ಹಳಗನ್ನಡದ ನಾಲ್ಕು ವ್ಯಾಕರಣಗಳ ಅಧ್ಯಯನವಿದೆ. ಮೊದಲಲ್ಲಿ ಶಬ್ದಸ್ಮೃತಿ, ಕರ್ಣಾಟ ಭಾಷಾ ಭೂಷಣ – (ಈ ಎರಡೂ ಕೃತಿಗಳು ನಾಗವರ್ಮನವು),  ಶಬ್ದಮಣಿದರ್ಪಣ (ಕೇಶಿರಾಜ), ಶಬ್ದಾನುಶಾಸನ (ಭಟ್ಟಾಕಳಂಕದೇವ) - ಇವುಗಳ ವಸ್ತು ವಿನ್ಯಾಸಗಳನ್ನು ಬೇರೆಬೇರೆಯಾಗಿ ಚರ್ಚಿಸಿದ್ದಾರೆ. ಅವುಗಳ ಕರ್ತೃತ್ವ ಮತ್ತು ಕಾಲಾನುಪೂರ್ವಿಯನ್ನು ಸರಿಯಾಗಿ ಗುರುತಿಸಿದ್ದಾರೆ. ಅನಂತರದ ಅಧ್ಯಾಯದಲ್ಲಿ ಈ ಪ್ರತಿಯೊಂದೂ ಒಂದರಿಂದ ಇನ್ನೊಂದು ಹೇಗೆ ಭಿನ್ನ, ಪ್ರತಿಯೊಂದರ ವೈಶಿಷ್ಟ್ಯವೇನು ಇತ್ಯಾದಿಗಳನ್ನು ಆಳವಾಗಿ ಚರ್ಚಿಸಿದ್ದಾರೆ. ಇದೊಂದು ಪಾಂಡಿತ್ಯ ಪೂರ್ಣ ಕೃತಿ. ಪ್ರತಿಯೊಬ್ಬ ವ್ಯಾಕರಣ ಕಾರನ ನಿರ್ದಿಷ್ಟ ಕೊಡುಗೆಗಳನ್ನು ತಿಳಿಯಲು ಈ ಪುಸ್ತ ಕ ಸಹಾಯ ಮಾಡುತ್ತದೆ.
                          ದೊಡ್ಡ ಸ್ವಾಮಿಯವರದು ಇದಕ್ಕಿಂತ ಭಿನ್ನ ಕೃತಿ. ವ್ಯಾಕರಣದ ಒಂದು ವಿಷಯಕ್ಕೆ ಸಂಬಂಧಿಸಿದಂತೆ (ಉದಾ.ಸಂಧಿ) ಬೇರೆಬೇರೆ ವ್ಯಾಕರಣಗಳಲ್ಲಿರುವ ಸೂತ್ರಗಳನ್ನು ಒಂದೇ ಕಡೆ ಕೊಡುವ ಕ್ರಮವನ್ನು ಇವರು ಅನುಸರಿಸಿದ್ದಾರೆ ಮತ್ತು ಈ ಕೃತಿಯಲ್ಲಿ ಹೀಗಿದೆ ಇನ್ನೊಂದರಲ್ಲಿ ಹಾಗಿದೆ ಎಂದು ಹೇಳಿ ಮುಗಿಸುತ್ತಾರೆ. ಇದರಿಂದ ಈ ವಿಷಯಕ್ಕೆ ಸಂಬಂಧಿಸಿ ಬೇರೆಬೇರೆ ವ್ಯಾಕರಣಕಾರರ ಅಭಿಪ್ರಾಯಗಳನ್ನು ಹೋಲಿಸಲು ಅನುಕೂಲವಾಗಿದೆ. ಆದರೆ ಇದರಲ್ಲಿ ಹೀಗಿದೆ ಎಂಬ ವಿವರಣೆಯನ್ನು ಬಿಟ್ಟು ಬೇರೆ ರೀತಿಯ ಚರ್ಚೆ ಈ ಕೃತಿಯಲ್ಲಿಲ್ಲ.  ಆದ್ದರಿಂದ ದೊಡ್ಡಸ್ವಾಮಿಯವರ ಕೃತಿಯ ಉಪಯುಕ್ತತೆ ಪರಿಮಿತ ಸ್ವರೂಪದ್ದಾಗಿದೆ.
4                       ಶಾಲಾ ವ್ಯಾಕರಣಗಳು
                          ಇಪ್ಪತ್ತನೆಯ ಶತಮಾನದ ಇನ್ನೊಂದು ವಿದ್ಯಮಾನವೆಂದರೆ ಶಾಲೆಗಳಲ್ಲಿ ಉಪಯೋಗಕ್ಕೆಂದು ರಚನೆಯಾದ ವ್ಯಾಕರಣ ಪಠ್ಯಗಳ ವೈಪುಲ್ಯ. ಇಂತಹ ಮೂವತ್ತಕ್ಕೂ ಹೆಚ್ಚು ವ್ಯಾಕರಣಗಳು ಇಪ್ಪತ್ತನೆಯ ಶತಮಾನದಲ್ಲಿ ಪ್ರಕಟವಾಗಿವೆ. ಇಪ್ಪತ್ತೊಂದನೆಯ ಶತಮಾನದಲ್ಲಿಯೂ ಈ ಪ್ರವೃತ್ತಿ ಮುಂದುವರೆದಿದೆ ಮತ್ತು ಇಂತಹ ಕೃತಿಗಳು ಪ್ರಕಟವಾಗುತ್ತಲೇ ಇವೆ. ವ್ಯಾಕರಣವನ್ನು ಕಲಿಸುವ ಅಗತ್ಯವೇ ಇಲ್ಲ, ಅದು ತನ್ನಷ್ಟಕ್ಕೆ ತಾನೇ ಭಾಷಿಕರ ಕರಗತವಾಗುತ್ತದೆ ಎಂಬ ವಾದವಿದ್ದರೂ ವ್ಯಾಕರಣ ಬೋಧನೆ ಮತ್ತು ಕಲಿಕೆಗಳನ್ನು  ಸಂಪೂರ್ಣವಾಗಿ ಕಡೆಗಣಿಸದೇ ಇರುವುದು ಸಮಾಧಾನದ ವಿಷಯ. ಇಪ್ಪತ್ತು ಮತ್ತು ಇಪ್ಪತ್ತೊಂದನೆಯ ಶತಕಗಳಲ್ಲಿ ಪ್ರಕಟವಾಗಿರುವ ಮತ್ತು ಆಗುತ್ತಿರುವ ಕೃತಿಗಳೆಲ್ಲಾ ಶಾಲೆಗಳಲ್ಲಿ ಉಪಯೋಗಕ್ಕೆಂದೇ ಇವೆ. ಇವುಗಳಲ್ಲಿ ಭಾಷಾ ರಚನೆಯನ್ನು ನಿರ್ದುಷ್ಟಗೊಳಿಸುವಂತಹ ಖಚಿತವಾದ ಹೊಸ ಅಂಶಗಳು ವಿರಳ. ಈಗಾಗಲೇ ಸಿದ್ಧವಾದ ವ್ಯಾಕರಣ ನಿಯಮಗಳನ್ನು ಸುಲಭವಾಗಿ ಕಲಿಸುವುದು ಹೇಗೆ ಎಂಬುದೇ ಈ ವ್ಯಾಕರಣಕಾರರ ಮುಖ್ಯ ಕಾಳಜಿ. ಭಾಷಾ ಕಲಕೆ ಮತ್ತು ಅದಕ್ಕೆ ಪೂರಕವಾಗಿ ವ್ಯಾಕರಣ ಕಲಿಕೆಯನ್ನು ಅಕ್ಷರ-ಪದ-ವಾಕ್ಯ ಈ ಅನುಪೂರ್ವಿಯನ್ನನುಸರಿಸಿ ಕಲಿಸಬೇಕೆಂಬುದು ಒಂದು ಪಂಥ. ಹೀಗಲ್ಲ ಇದಕ್ಕೆ ವಿಲೋಮವಾಗಿ ವಾಕ್ಯ-ಪದ-ಅಕ್ಷರ ಈ ಅನುಕ್ರಮವನ್ನು ಅನುಸರಿಸ ಬೇಕೆನ್ನುವವರು ಬೇರೆ ಕೆಲವರು. ಹಾಗೆಯೇ ಕಲಿಸುವುದಕ್ಕೆ ಸಂಬಂಧಿಸಿಯೂ ಎರಡು ಪಂಗಡಗಳು: ಮೊದಲು ಉದಾಹರಣೆಗಳನ್ನು ನೀಡಿ ತನ್ಮೂಲಕ ನಿಯಮ ನಿರೂಪಣೆ ಮಾಡಬೇಕೆನ್ನುವವರು ಒಂದು ಕಡೆ; ಹಾಗಲ್ಲ ಮೊದಲು ನಿಯಮಗಳನ್ನು ನಿರೂಪಿಸಿ ಅದನ್ನು ವಿಶ್ಲೇಷಿಸುತ್ತಾ ಉದಾಹರಣೆಗಳನ್ನು ನೀಡಿ ಸ್ಪಷ್ಟಗೊಳಿಸಬೇಕೆನ್ನುವವರು ಇನ್ನೊಂದು ಕಡೆ. ಇವೆಲ್ಲವೂ ಒಟ್ಟಾರೆಯಾಗಿ ಶಾಲಾ ವ್ಯಾಕರಣಗಳ ಪ್ರವೃತ್ತಿಗಳನ್ನು ಚಿತ್ರಿಸುತ್ತವೆ. ಅವರವರು ರಚಿಸಿದ ವ್ಯಾಕರಣ ಪಠ್ಯದ ಸ್ವರೂಪವನ್ನು ನಿರ್ಧರಿಸುತ್ತವೆ.
                          ಪಂಜೆ ಮಂಗೇಶರಾಯರು, ಕಯ್ಯಾರ ಕಿಞ್ಞಣ್ಣ ರೈ, ತೀ ನಂ ಶ್ರೀ ಮುಂತಾದವರು ಅನುಗಮನ ಪದ್ಧತಿಯನ್ನನುಸರಿಸಿ ವ್ಯಾಕರಣ ಪಠ್ಯಗಳನ್ನು ಬರೆದಿದ್ದಾರೆ. ಎರೆಸೀಮೆ ಇವರ ಕನ್ನಡ ವ್ಯಾಕರಣ ನಿಗಮನ ಪದ್ಧತಿಯಲ್ಲಿರುವ ಕೃತಿ. ಉದಾಹರಣೆಗಳ ಬಾಹುಳ್ಯ, ನಿಯಮಗಳನ್ನು ದಪ್ಪಕ್ಷರಗಳಲ್ಲಿ ಮುದ್ರಿಸಿರುವುದು, ನಿಯಮಕ್ಕೆ ಅಪವಾದಗಳನ್ನು ಉಲ್ಲೇಖಿಸಿರುವುದು ಇಂತಹ ಗುಣಗಳಿಂದ ಇದು ಅಧ್ಯಪಕರಿಗೂ ವಿದ್ಯಾರ್ಥಿಗಳಿಗೂ ಪ್ರಿಯವಾದ ಕೃತಿಯಾಗಿತ್ತು. ಜೊತೆಗೆ ಇದರ ಬೆಲೆ ಕೂಡ ಸಾಮಾನ್ಯ ಜನರಿಗೆ ಕೈಗೆಟುಕುಷ್ಟೇ ಇತ್ತು. ಹೀಗಾಗಿ ಇದು ಎಂಬತ್ತರ ದಶಕದಲ್ಲಿ ಕೂಡ ಜನಪ್ರಿಯ ವ್ಯಾಕರಣ ಕೃತಿಯಾಗಿತ್ತು. ಪ್ರಸ್ತುತ ಕೃತಿಯ ಪ್ರತಿಗಳು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ.
                          ಇಪ್ಪತ್ತನೆಯ ಶತಮಾನದಲ್ಲಿ ಕನ್ನಡದ ಉಪಭಾಷೆಗಳನ್ನು ಗುರುತಿಸುವಿಕೆ ಅವುಗಳಿಗೆ ವ್ಯಾಕರಣ ರಚನೆ ಉಪಭಾಷೆಗಳ ನಡುವೆ ತೌಲನಿಕ ವ್ಯಾಕರಣಾಧ್ಯಯನಗಳು ಇಂತಹ ಹೊಸ ಪ್ರವೃತ್ತಿಗಳೂ ಕಾಣಿಸಿಕೊಂಡವು. ಇಂತಹವುಗಳನ್ನು ಇಲ್ಲಿ ಚರ್ಚಿಸಿಲ್ಲ. ಇವೆಲ್ಲ ಭಾಷಾಶಾಸ್ತ್ರದ ಪರಿಭಾಷೆ, ವಿಧಾನ ಮತ್ತು ವಿವರಣಾ ಕ್ರಮಗಳನ್ನು ಅನುಸರಿಸಿದ್ದು ಭಾಷಾಧ್ಯಯನ ಬೇರೆಯೇ ಮಜಲನ್ನು ಪ್ರವೇಶಿಸಿತು ಎನ್ನ ಬಹುದು. (ಇವುಗಳ ಅತಿ ಸಂಕ್ಷಿಪ್ತ ಮತ್ತು ಸ್ಥೂಲವಧ ವಿವರಗಳನ್ನು ನನ್ನ ಕನ್ನಡ ವ್ಯಾಕರಣಗಳ ಹೊಸ ಸಮೀಕ್ಷೆ ಮತ್ತು ಇತರ ಪ್ರಬಂಧಗಳು ಎಂಬ ಕೃತಿಯಲ್ಲಿ ಕಾಣಬಹುದು).  
                          ಒಟ್ಟಿನಲ್ಲಿ ಇಪ್ಪತ್ತನೆಯ ಶತಮಾನದಲ್ಲಿ ಕನ್ನಡ ಪದ ವಾಕ್ಯಗಳನ್ನು ವರ್ಗೀಕರಿಸಿ ವಿಶ್ಲೇಷಿಸಿ ಅಂತಹ ಪ್ರಯೋಗಗಳ ಹಿಂದಿನ ತತ್ವಗಳನ್ನು ಕಂಡು ಹಿಡಿಯುವ ಮೂಲಕ ಕನ್ನಡಕ್ಕೆ ಕನ್ನಡದ್ದೇ ವ್ಯಾಕರಣ ರಚನೆಯಾಗ ಬೇಕೆಂಬ ಕಾಳಜಿ ಕಾಣಿಸಿಕೊಂಡಿತು. ಆದರೆ ಇಂತಹ ತತ್ವಗಳ ಬಗ್ಗೆ ಒಮ್ಮತ ಮೂಡದೆ ಇಂತಹ ವ್ಯಾಕರಣ ರಚನೆ ಇನ್ನೂ ಸಾಧ್ಯವಾಗಿಲ್ಲ. ಬೋಧನೆ ಮತ್ತು ಕಲಿಕೆಗೆ ಅನುಕೂಲವಾಗುವಂತೆ ಶಾಲಾವ್ಯಾಕರಣಗಳು ಹಲವು ರಚನೆಯಾದುವು.

                          ಪರಾಮರ್ಶಿಸಿದ ಗ್ರಂಥಗಳು: 
1.    ದೊಡ್ಡ ಸ್ವಾಮಿ, 1980:  ಹಳಗನ್ನಡ ವ್ಯಾಕರಣಗಳ ತೌಲನಿಕ ಅಧ್ಯಯನ ಮದ್ದೂರು ದುಂಡನಹಳ್ಳಿ]
2.   ಸೀತಾರಾಮಯ್ಯ ಎಮ್ ವಿ (ಎಂ ವಿ ಸೀ), : ಪ್ರಾಚೀನ ಕನ್ನಡ ವ್ಯಾಕರಣಗಳು [ಮೈಸೂರು ವಿಶ್ವ ವಿದ್ಯಾಲಯ, ಮಾನಸ ಗಂಗೋತ್ರಿ ಮೈಸೂರು]
3.    ಮತಿಲಾಲ್, ಬಿ ಕೆ 2005: ಶಬ್ದ ಮತ್ತು ಜಗತ್ತು – ಭಾಷೆಯ ಅ ಮಾತುಕತೆ ಸಂಚಿಕೆ 73 ಇದರಲ್ಲಿ ಧಾರಾವಾಹಿಯಾಗಿ ಬಂದಿರುವ ಧ್ಯಯನಕ್ಕೆ ಭಾರತದ ಕೊಡುಗೆ
4.    ಮಹೀದಾಸ, 1997: ಕನ್ನಡ ವ್ಯಾಕರಣಗಳ ಹೊಸ ಸಮೀಕ್ಷೆ ಮತ್ತು ಇತೆ ಪ್ರಬಂಧಗಳು [ಯುಗಪುರುಷ ಪ್ರಕಾಶನ ಕಿನ್ನಿಗೋಳಿ ಮಂಗಳೂರು]
5.    ಭಟ್ ಶಂಕರ ಢಿ ಎನ್,2000: ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ [ಭಾಷಾ ಪ್ರಕಾಶನ ಮೈಸೂರು]
6.    ಭಟ್ ಶಂಕರ ಢಿ ಎನ್, 2004: ಕನ್ನಡ ವಾಕ್ಯಗಳ ಒಳರಚನೆ
7.    ಭಟ್ ಶಂಕರ ಢಿ ಎನ್,1995: ಕನ್ನಡ ಭಾಷೆಯ ಕಲ್ಪಿತ ಚರಿತ್ರೆ 
8.    ಭಟ್ ಶಂಕರ ಢಿ ಎನ್,2003: ಕನ್ನಡ ಸರ್ವನಾಮಗಳು 
9.    ಭಟ್ ಶಂಕರ ಢಿ ಎನ್,1978: ಕನ್ನಡ ವಾಕ್ಯಗಳು 
10.  ಭಟ್ ಶಂಕರ ಢಿ ಎನ್,2005: ನಿಜಕ್ಕೂ ಹಳಗನ್ನಡ ವ್ಯಾಕರಣ ಎಂತಹುದು  
11.  ಭಟ್ ಶಂಕರ ಢಿ ಎನ್,1999: ಕನ್ನಡ ಶಬ್ದ ರಚನೆ  [ಕ್ರೈಸ್ಟ್ ಕಾಲೇಜು ಕುವೆಂಪು ನಗರ ಬೆಂಗಳೂರು]
12.  ಶರ್ಮ, ರಂಗನಾಥ ವಿದ್ವಾನ್, 2002:  ವ್ಯಾಕರಣ ಶಾಸ್ತ್ರದ ಪರಿವಾರ [ರಾಷ್ಟ್ರಕವಿ ಗೋವಿಂದಪೈ ಸಂಶೋಧನ ಕೇಂದ್ರ ುಡುಪಿ]
13.  ಸೇಡಿಯಾಪು ಕೃಷ್ಣ ಭಟ್ಟ, 1992: ಇದರಲ್ಲಿ ಪಾದೇಕಲ್ಲು ವಿಷ್ಣು ಭಟ್(ಸಂ) ವಿಚಾರ ಪ್ರಪಂಚ [ಕರ್ನಾಟಕ ಸಂಘ ಪುತ್ತೂರು]


Sunday 5 August 2018

ಕನ್ನಡ ಗಾದೆಗಳ ಬಗ್ಗೆ





                       
ಕನ್ನಡ ಗಾದೆಗಳ ಬಗ್ಗೆ

ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಭಾರತೀಯ ಪರಂಪರೆಯಲ್ಲಿ ವೇದಕ್ಕೆ ಬಹುಮಹತ್ವವಿದೆ. ವೇದಗಳು ಪ್ರಪಂಚದ ಪ್ರಾಚೀನತಮ ಸಾಹಿತ್ಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿವೆ; ಅವು ಪ್ರಭು ಸಂಮಿತೆಯಿಂದ ಜೀವನ ಮೌಲ್ಯಗಳನ್ನು ಬೋಧಿಸುವುವು ಮತ್ತು ಆದ್ದರಿಂದ ಆದೇಶಸ್ವರೂಪದಲ್ಲಿರುವುವು; ಅವು ಬೌದ್ಧಿಕವಾಗಿ ವಿಕಸಿತ ಮನಸ್ಸುಗಳಿಂದ ಬಂದ ವಿವರಣೆಗಳಾದುದರಿಂದ ಸುಳ್ಳಾಗಿರುವುದಿಲ್ಲ; ಅವು ಶಾಬ್ದಿಕವಾಗಿ ಕೂಡ ವ್ಯತ್ಯಾಸವಾಗದೆ ತಲೆಮಾರಿನಿಂದ ತಲೆಮಾರಿಗೆ ಉಳಿದು ಬಂದವಾಗಿದ್ದು ಸಾಂಸ್ಕೃತಿಕ ಮಹತ್ವದವಾಗಿವೆ; ಹಲವು ವೇದ ಮಂತ್ರಗಳು ಅತಿ ಸಂಕ್ಷಿಪ್ತವಾಗಿದ್ದು ಸೂತ್ರಸ್ವರೂಪದವಾಗಿವೆ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿನಲ್ಲಿ ಗಾದೆಗಳೂ ಈ ಎಲ್ಲ ಗುಣಲಕ್ಷಣಗಳಿಂದ ನಿರ್ವಚಿತವಾಗಿವೆ ಎಂಬ ಧ್ವನಿ ಇದೆ. ಗಾದೆಗಳು ಅತಿಸಂಕ್ಷಿಪ್ತಮ ಹೇಳಿಕೆಗಳ ರೂಪದಲ್ಲಿದ್ದು ದಿನಚರಿಯ ಸ್ಪಷ್ಟ ಸನ್ನಿವೇಶದೊಡನೆ ಸಮನ್ವಯ ಸಾಧಿ22ಸುತ್ತವೆ. ವೇದಗಳಂತೆಯೇ ಗಾದೆಗಳು ತಲತಲಾಂತರದಿಂದ ಇಂದಿಗೆ ವರ್ಗಾವಣೆಗೋಡಿರುವುವು ಮತ್ತು ಸಾಂಸ್ಕೃತಿಕ ಮಹತ್ವದವು – ಭಾಷಾ ವ್ಯತ್ಯಾಸಗಳಿಗೆ ಪಕ್ಕಾಗಿ ಶಾಬ್ದಿಕವಾಗಿ ಬದಲಾಗಿರಬಹುದಾದರೂ. ಪ್ರಪಂಚದ ಯಾವುದೇ ಭಾಷೆಯ ಗಾದೆಗೂ ಈ ಮಾತು ಅನ್ವಯಿಸುತ್ತದೆ ಎಂಬುದು ಆಶ್ಚರ್ಯವಾದರೂ ನಿಜ. ಗಾದೆಗಳು ಒಂದು ಭಾಷಾ ಸಮುದಾಯದವರಿಗೆ ಅಸ್ಮಿತೆಯನ್ನು ಒದಗಿಸುತ್ತವೆ. ಗಾದೆಗಳು ಸಾಮಾನ್ಯವಾಗಿ ನಿಜವಾದುವಾದರೂ ಯಾವಾಗಲೂ ಆಗಬೇಕೆಂದಿಲ್ಲ; ಅವು ಸಾಮಾನ್ಯವಾಗಿ ಸೂತ್ರಸ್ವರೂಪದವು ಆದರೆ ಯಾವಾಗಳೂ ಅಲ್ಲ( Mieder).

ಹೀಗೆಯೇ ಸಾರ್ವತ್ರಿಕವಾಗಿ ಅನ್ವಯವಾಗುವ ಇತರ ಕೆಲವಂಶಗಳೂ ಇವೆ. ಗಾದೆಗಳು ವ್ಯಕ್ತಿಯೊಬ್ಬನ ಅನುಭವಾಭಿವ್ಯಕ್ತಿ ಮಾತ್ರವಲ್ಲ. ಒಂದು ಜನಸಮುದಾಯದ ಬಾಳಿನ ತಿರುಳಾಗಿ ಮಾರ್ಪಟ್ಟಿವೆ. ಅವುಗಳನ್ನು ಸಮುದಾಯದ ಅನುಭವಾಧಾರಿತ ಜಾಣ್ನುಡಿಗಳು ಎನ್ನಬಹುದು. ಅವು ಸಂದರ್ಭಾನುಸಾರ ವ್ಯಕ್ತಿಯ ಗುಣಾವಗುಣಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತವೆ. (ಈ ಗುಣವನ್ನು ಅರ್ಥಸಂದಿಗ್ಧತೆ ಎಂದು ಕೆಲವೊಮ್ಮೆ ಕರೆಯುವುದಿದೆ).ಹೀಗಿರುವುದರಿಂದ ಗಾದೆಗಳು ಸಂಸ್ಕೃತಿ ನಿರ್ದಿಷ್ಟ ಎಂದು ಹೇಳುತ್ತಾರೆ. ಅವುಗಳನ್ನು ಮೌಲ್ಯಗಳ ಮತ್ತು ನಡೆದುಕೊಂಡು ಬಂದ ಸಂಪ್ರದಾಯಗಳ ಹಿನ್ನೆಲೆಯಲ್ಲಿ ಅರ್ಥಮಾಡಿ ಕೊಳ್ಳ ಬೇಕಾಗುತ್ತದೆ. ಒಂದು ಸಂಸ್ಕೃತಿಯಲ್ಲಿರುವ ಗಾದೆಯೊಂದು ಅಕ್ಷರಶಃ ಇನ್ನೊಂದರಲ್ಲಿರುವುದು ಅಪುರೂಪ. ಆದರೆ ಅದರ ಸಮಾನಾರ್ಥದ ಗಾದೆ ಅಥವ ಗಾದೆಗಳು ಅನೇಕ ವೇಳೆ ಇರುತ್ತವೆ. ‘ಇಂತಹವು ಒಂದೇ ರೀತಿಯ ಮಾನಸಿಕ ಚಿತ್ರಗಳನ್ನೊಳಗೊಂಡಿದ್ದು ಸಾಂಸ್ಕೃತಿಕ ನಂಬಿಕೆಗಳ ವಿಭಿನ್ನತೆಯನ್ನು ತೋರಿಸುತ್ತವೆ; ಆದ್ದರಿಂದ ಮನುಷ್ಯ ತನ್ನ ಅನುಭವಗಳನ್ನು ಸಂಸ್ಕರಿಸಿ ಪ್ರಪಂಚವನ್ನು ಪರಿಕಲ್ಪಿಸಿಕೊಳ್ಳುವ ರೀತಿಯನ್ನು ವಿಶ್ಲೇಷಿಸಲು ಒಂದು ಉತ್ತಮ ಸಂಪನ್ಮೂಲವಾಗಿದೆ’ (ಮೊರೆನೊ, ಪು1).  “ಗಾದೆಗಳು ಒಂದು ಸಂಸ್ಕೃತಿಯ ಜಾನಪದ ಜಾಣತನವನ್ನು ಪ್ರತಿನಿಧಿಸುವ ರೂಪಕಾಧಾರಿತ ಹೇಳಿಕೆಗಳು” (ಕೊವೆಕ್ಸಸ್  128) ಎಂಬ ಅಭಿಪ್ರಾಯವಿದೆ. ಅವುಗಳನ್ನುಪರಿಕಲ್ಪನೆಗಳ ಸಂಮ್ಮಿಳಿತಗಳು ಎಂಬ ರೂಪಕ-ಭೇದವನ್ನಾಗಿ ಪರಿಗಣಿಸುವುದು ಅರ್ಥೈಸಲು ಹೆಚ್ಚು ಪ್ರಯೋಜನಕಾರಿ ಎಂಬುದು ಇನ್ನೋಂದು ಅಭಿಪ್ರಾಯ (ಯೋಂಗ್ಸಿಯಾಂಗ್, ಫಾಕ್ಕೋನಿಯರ್ ಮತ್ತು ಟರ್ನರ್). ಸಮ್ಮೇಳಗಳು ಎಂದು ಪರಿಗಣಿಸಿದರೆ ಸಾಕು, ರೂಪಕ ಪ್ರಭೇದವೋ ಅಲ್ಲವೋ ಎಂಬುದನ್ನು ಚರ್ಚಿಸಬೇಕಾಗಿಲ್ಲ ಎಂಬ ಅಭಿಪ್ರಾಯವೂ ಉಂಟು (ಸಲ್ಲಿವನ್ ಮತ್ತು ಸ್ವೀಟ್ಸ್ಟರ್). ಇವೆಲ್ಲ ಬೇರೆ ಬೇರೆ ಸಮಾಜಗಳಲ್ಲಿ ಗಾದೆಗಳ ಬಗ್ಗೆ ಇರುವ ಆಸಕ್ತಿಯನ್ನೂ ವಿಸ್ತಾರವಾದ ಚರ್ಚಾ ಸಾಹಿತ್ಯವನ್ನೂ ಅಭಿಪ್ರಾಯ ಬೇದಗಳನ್ನೂ ತೋರಿಸುತ್ತವೆ. ಹೀಗೆ ಗಾದೆಗಳು ಸಾರ್ವತ್ರಿಕ ಪ್ರಸ್ತುತೆ ಇರುವಂತಹವು. ಅವುಗಳ ವಿಶ್ಲೇಷಣೆ ಸಾಮಾನ್ಯವಾಗಿ ಮೂರು ದಾರಿಗಳಲ್ಲಿ ಸಾಗಿದೆ. ಈ ಪ್ರಬಂಧದಲ್ಲಿ ಈ ಮೂರನ್ನೂ (ಅಂದರೆ ಸಾಂಸ್ಕೃತಿಕ ಹಿನ್ನೆಲೆ, ರೂಪಕಗಳ ಕಾಗ್ನಿಟಿವ್ ಸಿದ್ಧಾಂತ ಮತ್ತು ಸಮ್ಮೇಳ ಅಥವ ಬ್ಲೆಂಡ್ ಸದ್ಧಾಂತ) ಇಲ್ಲಿ ಪರಸ್ಪರ ಪೂರಕಗಳನ್ನಾಗಿ ಬಳಸಿಕೊಳ್ಳಲಾಗಿದೆ. ಗಾದೆಗಳಲ್ಲಿ ಕೆಲವು ಸರಳ ಹೇಳಿಕೆಗಳು: ಉದಾ.  ಮನಸ್ಸಿದ್ದರೆ ಮಾರ್ಗ. ಚಿಂತೆ ಇಲ್ಲದವನಿಗೆ ಸಂತೇಲೂ ನಿದ್ದೆ ಇತ್ಯಾದಿ. ಇವು ತಮ್ಮಷ್ಟಕ್ಕೇ ಅರ್ಥವಾಗುವಂತಹವು ಮತ್ತು ಯಾವುದೇ ವಿಶ್ಲೇಷಣೆಯ ಅಗತ್ಯವಿರುವುದಿಲ್ಲ. ಒಂದು ರೀತಿಯಲ್ಲಿ ಸಾರ್ವತ್ರಿಕ ಸತ್ಯಗಳನ್ನು ತಿಳಿಸುವ ಹೇಳಿಕೆಗಳಿವು.
 ಗಾದೆಗಳಲ್ಲಿ ಪ್ರಾಣಿಗಳು ಮತ್ತು ಸಸ್ಯಗಳು ದೊಡ್ಡ ಪಾತ್ರವಹಿಸುತ್ತವೆ. ಮನುಷ್ಯರೇ ಪಾತ್ರಗಳಾಗಿರುವ ಗಾದೆಗಳೂ ಅನೇಕವಿವೆ. ಪ್ರಾಣಿಗಳು ಕೇಂದ್ರ ಪ್ರಜ್ಞೆಯಂತಿರುವುವೂ ಇವೆ. ಉದಾಹರಣೆಗೆ ನಾಯಿಗೆ ಹೇಳಿದರೆ ತನ್ನ ಬಾಲಕ್ಕೆ ಹೇಳ್ತಂತೆ ಎಂಬಂತಹ ಗಾದೆ-ಮಾತಿನಲ್ಲಿ ನಾಯಿಗೇ ನಾಯಕನ ಸ್ಥಾನ; ಇದು ನಾಯಿಯ ಒಂದು ಗುಣವನ್ನು ಕುರಿತಂತೆ ಕಂಡರೂ ನಿಜವಾಗಿ ಅದು ಮನುಷ್ಯ ವ್ಯವಹಾರಕ್ಕೇ ಸಂಬಂಧಿಸಿದ್ದು ಮತ್ತು ಇದು ಆ ಗಾದೆ ಪ್ರಯೋಗವಾಗುವ ಸಂದರ್ಭದಿಂದ ಸ್ಪಷ್ಟವಾಗುತ್ತದೆ. ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು ಎಂಬ ಗಾದೆಯಲ್ಲಿ ಪ್ರಾಣಿ ಸಸ್ಯಗಳೆರಡೂ ಪಾತ್ರವಹಿಸಿವೆ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಎಂಬಲ್ಲಿ ಸಸ್ಯದ್ದೇ ಕಾರುಭಾರ. ಕುಣಿಯಲಾರದವ ನೆಲ ಡೊಂಕು ಎಂದ ಎಂಬ ಗಾದೆ-ಮಾತಿನಲ್ಲಿ ಮನುಷ್ಯನದೇ ಪ್ರಧಾನ ಪಾತ್ರ.
ರಿಚರ್ಡ್ ಹಾನೆಕ್ ಇವರ ಪ್ರಕಾರ Proverbs force people to synthesise at a high level in a totality of abstract medium (Honeck, p131).ಅಂದರೆ ಒಂದು ವಿಷಯವನ್ನು ಇನ್ನಾವುದರ ಜೊತೆಗೋ ಸಮನ್ವಯಿಸಿ ಅತ್ಯುನ್ನತ ಮಟ್ಟದಲ್ಲಿ  ವಿಚಾರ ಮಂಥನ ಮಾಡುವಂತೆ ಗಾದೆಗಳು ಜನರನ್ನು ಒತ್ತಾಯಿಸುತ್ತವೆ. ಆದ್ದರಿಂದಲೇ ಗಾದೆಗಳು ಸಾಮಾಜಿಕವಾಗಿ ಪ್ರಸ್ತುತವಾಗಿರುವುವಷ್ಟೇ ಅಲ್ಲ, ಅವು ಸಮುದಾಯದ ಬೌದ್ಧಿಕ ಬೆಳವಣಿಗೆಗೂ ಕಾರಣವಾಗುತ್ತವೆ.
ಗಾದೆಗಳ ಕಾರ್ಯವು ಮುಖ್ಯವಾಗಿ ನಾಲ್ಕು: 1. ಅದು ಇನ್ನೊಬ್ಬರ ನಡವಳಿಕೆಯನ್ನು ಟೀಕಿಸಬಹುದು 2. ಅದು ಇನ್ನೊಬ್ಬರಿಗೆ ಒಂದು ಸಂದೇಶವನ್ನು ನೀಡಬಹುದು 3. ವಾಸ್ತವವನ್ನು ನಿರೂಪಿಸಿ ಸಂದರ್ಭದ ನಡವಳಿಕೆಯ ಅನಿವಾರ್ಯತೆಯನ್ನು ಸೂಚಿಸಬಹುದು.4. ಸ್ವನಿಯಂತ್ರಣದ ಆವಶ್ಯಕತೆಯನ್ನು ತಿಳಿಸಬಹುದು. ಗಾದೆಗಳ ಈ ಕಾರ್ಯವನ್ನು ವಿಶದೀಕರಿಸಲು ಮೇಲಿನ ಉದಾಹರಣೆಗಳೇ ಸಾಕಾಗುತ್ತವೆ. ಇತರ ಕೆಲವು ಉದಾಹರಣೆಗಳನ್ನೂ ನೋಡಬಹುದು: ಬಾಯೆಲ್ಲ ವೇದಾಂತ ಕೈಯೆಲ್ಲ ರಾದ್ಧಾಂತ (ಅಥವ ಹೇಳುವುದು ವೇದ ಹಾಕುವುದು ಗಾಳ) ಎಂಬಲ್ಲಿ ಸಮಾಜಕ್ಕೆ ಹೇಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕೆಂಬುದರ ಬಗ್ಗೆಯೇ ಯಾವಾಗಲೂ ಭಾಷಣ ಬಿಗಿಯುತ್ತಾ ಒಂದಲ್ಲೊಂದು ರೀತಿಯಲ್ಲಿ ತನ್ನ ತಿಜೋರಿಯನ್ನೇ ತುಬಿಸಿಕೊಳ್ಳುವ ಅಥವ ಸ್ವಾರ್ಥವನ್ನೇ ಸಾಧಿಸುವವರ ಬಗ್ಗೆ ಟೀಕೆ ಇದೆ; ನಾಯಿಯು ನಮ್ಮನ್ನು ಕಚ್ಚಿದರೆ ನಾಯಿಯನ್ನು ಕಚ್ಚಲಾಗುವುದೇ? ಎಂಬ ಗಾದೆಯಲ್ಲಿ ನಿಂದೆಗೆ ಪ್ರತಿನಿಂದೆ ಪರಿಹಾರವಲ್ಲವೆಂಬ ಸಂದೇಶವಿದೆ; ಬೆಲ್ಲವಿದ್ದಲ್ಲಿ ನೊಣಗಳ ಸಂತೆ ಎಂಬ ಗಾದೆ ವಾಸ್ತವವನ್ನು ತಿಳಿಸುತ್ತಾ ವ್ಯಕ್ತಿಯಲ್ಲಿರುವ ಸದ್ಗುಣಗಳನ್ನು ತೋರ್ಪಡಿಸುವಲ್ಲಿ ವಿವೇಚನೆ ಇಟ್ಟುಕೊಳ್ಳಬೇಕೆಂಬುದನ್ನು ಸೂಚಿಸುತ್ತದೆ; ಆಳಾಗಬಲ್ಲವ ಅರಸಾಗಬಲ್ಲ ಎಂಬ ಮಾತಿನಲ್ಲಿ ವೈಭವ-ಅಧಿಕಾರ-ಸಾಮರ್ಥ್ಯಗಳಿದ್ದಾಗ ಅಹಂಕಾರದಿಂದ ವರ್ತಿಸಿ ಇತರರನ್ನು ಶೋಷಿಸದೆ ತನ್ನನ್ನು ತಾನು ನಿಯಂತ್ರಿಸಿಕೊಂಡು ಸರಳತೆಯಿಂದ ಎಲ್ಲರೊಡನಿರಬೇಕೆಂಬ ಸೂಚನೆ ಇದೆ.
ಹಲವು ರೂಪಕಗಳು ಸಹಜವಾಗಿಯೇ ಗಾದೆಗಳಲ್ಲಿ ಬಳಕೆಯಾಗುತ್ತವೆ. ಕಾಗ್ನಿಟಿವ್ ಸಿದ್ಧಾಂತದ ಪ್ರಕಾರ ಇವುಗಳನ್ನು ವಿಶ್ಲೇಷಿಸಿವುದು ಗಾದೆಗಳನ್ನು ಸಮರ್ಪಕವಾಗಿ ಅರ್ಥಮಾಡಿಕೊಳ್ಳಲು ಬಹು ಸಹಾಯಕ. ಕಾಗ್ನಿಟಿವ್ ಸಿದ್ಧಾಂತದ ಪ್ರಕಾರ ರೂಪಕಗಳು ಕವಿಸೃಷ್ಟಿಗೋ ಕಾವ್ಯಗಳನ್ನು ಸುಂದರಗೊಳಿಸುವುದಕ್ಕೋ ಸೀಮಿತಗಳಲ್ಲ. ಅವು ಸಾಮಾನ್ಯಜನಮಾನಸದಲ್ಲಿ ನಿಬಿಡವಾಗಿರುವಂತಹವು. ಮನುಷ್ಯ ಈ ಪ್ರಪಂಚವನ್ನು ಗ್ರಹಿಸಲು ರೂಪಿಸಿಕೊಂಡ ಒಂದು ಉಪಕರಣವೇ ರೂಪಕ. ಉದಾಹರಣೆಗೆ ರಾಮಕೃಷ್ಣರನ್ನು ಸಂಧಿಸಿದ ನಂತರ ನರೇಂದ್ರನ ಜೀವನದ ದಿಕ್ಕೇ ಬದಲಾಯಿತು ಎಂಬ ವಾಕ್ಯವನ್ನು ಅರ್ಥಮಾಡಿಕೊಳ್ಳುವಾಗ ವಿಶೇಷ ಪ್ರಯತ್ನವಿಲ್ಲದೆ ಜೀವನವನ್ನು ಒಂದು ಪ್ರಯಾಣವನ್ನಾಗಿ ನಾವು ಪರಿಕಲ್ಪಿಸಿಕೊಳ್ಳುತ್ತೇವೆ. ಜೀವನ ಎಂಬುದು ಒಂದು ಅಮೂರ್ತ ಪರಿಕಲ್ಪನೆಯಾಗಿದ್ದು ಅದಕ್ಕೆ ದಿಕ್ಕು ಎಂಬುದು ಅರ್ಥವಾಗದ ಮಾತು. ಆದರೆ ನಮ್ಮ ಮನಸ್ಸುಗಳಲ್ಲೆಲ್ಲ ಜೀವನವು ಒಂದು ಪ್ರಯಾಣ ಎಂಬ ರೂಪಕ ಇರುವುದರಿಂದ ಇದು ಕೂಡಲೇ ಅರ್ಥವಾಗುತ್ತದೆ. ಪ್ರಯಾಣಕ್ಕೆ ಮುಂದೆ, ಹಿಂದೆ, ದಿಕ್ಕು ಬದಲಾವಣೆ ಎಲ್ಲವೂ ಇವೆ. ಆಡುವುದಕ್ಕಾಗಿ ನನ್ನಲ್ಲಿ ಸಮಯವಿಲ್ಲ ಎಂದಾಗಲೂ ಅಷ್ಟೆ. ಸಮಯವನ್ನು ನಾವು ನಮ್ಮಲ್ಲಿ ಇಟ್ಟುಕೊಂಡಿರುವ ಒಂದು ವಸ್ತುವನ್ನಾಗಿ ಕಲ್ಪಿಸಿ ಹೇಳುತ್ತಿದ್ದೇವೆ. ಅವನಿಗೆ ಸಿಟ್ಟೇರಿತು ಎನ್ನುವಾಗ ಥರ್ಮಾಮೀಟರಿನಂತಹ ಧಾರಕದಲ್ಲಿ ಒಂದು ದ್ರವವಾಗಿ ಸಿಟ್ಟು ಇದ್ದು ಏನೋ ಘರ್ಷಣೆಯ ಕಾರಣ ಅದು ಮೇಲೇರಿತು ಎಂಬಂತೆ ತಿಳಿಯುತ್ತೇವೆ. ನರಿ ಉಪಾಯಗಾರ ಎನ್ನುವಾಗ ಉಪಾಯ ಮಾಡುವ ಮಾನವ ಗುಣವನ್ನು ನರಿಗೆ (ಪ್ರಾಣಿಗೆ) ಆರೋಪಿಸುತ್ತೇವೆ. ಅಂದರೆ ಇಲ್ಲೆಲ್ಲ ಒಂದು ವಿಷಯವನ್ನು ಅಥವ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳಲು ಇನ್ನೊಂದರ ಮೊರೆ ಹೋಗುತ್ತಿದ್ದೇವೆ. ಹೀಗೆ ಒಂದು ಪರಿಕಲ್ಪನೆ, ಭಾವನೆ ಅಥವ ಘಟನೆಗಳನ್ನು ಇನ್ನೊಂದರ ಸಹಾಯದಿಂದ ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಒಂದನ್ನು ಇನ್ನೊಂದು ಎಂದು ಅಭೇದಾತ್ಮಕವಾಗಿ ಅಂದುಕೊಳ್ಳುತ್ತೇವೆ. ಇದೇ ರೂಪಕ.
ನಮ್ಮ ಬದುಕಿನ ರೀತಿಯನ್ನು ನಾವು ಅರ್ಥ ಮಾಡಿಕೊಳ್ಳುವಾಗ ಅಥವ ಇನ್ನೊಬ್ಬರಿಗೆ ಹೇಳುವಾಗ ನಾವು ಒಂದನ್ನು ಇನ್ನೊಂದಾಗಿ ರೂಪಕಗೊಳಿಸುತ್ತೇವೆ. ಮೇಲಿನವೆಲ್ಲ ಉದಾಹರಣೆಗಳು: ನಾವು ಜೀವನವನ್ನು ಪ್ರಯಾಣವಾಗಿ ರೂಪಕಗೊಳಿಸುತ್ತೇವೆ; ಸಮಯವನ್ನು ವಸ್ತುವನ್ನಾಗಿ ರೂಪಕಗೊಳಿಸುತ್ತೇವೆ; ಭಾವನೆಯನ್ನು (ಉದಾಹರಣೆಗೆ ಸಿಟ್ಟನ್ನು) ಧಾರಕದಲ್ಲಿರುವ ದ್ರವ ಅಥವ ಅನಿಲವನ್ನಾಗಿ ರೂಪಕಗೊಳಿಸುತ್ತೇವೆ. ಜೀವನ, ಸಮಯ, ಸಿಟ್ಟು, ನರಿಯ ಗುಣಸ್ವಭಾವ – ಇಂತಹವುಗಳು ಅಮೂರ್ತ ಸ್ವರೂಪದವಾಗಿದ್ದು ಅವುಗಳನ್ನು ಅರ್ಥಮಾಡಿಕೊಳ್ಳಲು ಹೀಗೆ ರೂಪಕಗೊಳಿಸುವುದು ಅಗತ್ಯವಾಗುತ್ತದೆ. (ಹೆಚ್ಚಿನ ವಿವರಗಳನ್ನು ರೂಪಕಗಳ ಸುತ್ತ ಎಂಬ ನನ್ನ ಪ್ರಬಂಧದಲ್ಲಿ ಕಾಣಬಹುದು). ಇವುಗಳಲ್ಲಿ ಕೆಲವು ಸಾರ್ವತ್ರಿಕವಾಗಿ ಪ್ರತಿ ವ್ಯಕ್ತಿಯ ಮನಸ್ಸಿನಲ್ಲಿ, ಇನ್ನು ಕೆಲವು ಒಂದು ಸಮುದಾಯದ ಎಲ್ಲ ವ್ಯಕ್ತಿಗಳ ಮನಃಪಟಲದಲ್ಲಿ ಒಂದೇರಿತಿಯಾಗಿ ರೂಪಕಗೊಂಡಿರುವುದು ಆಶ್ಚರ್ಯವೇ ಸರಿ.
ಗಾದೆಗಳೂ ರೂಪಕಗಳೇ ಎಂಬುದು ಒಂದು ಅಭಿಪ್ರಾಯವಷ್ಟೆ. ಗಾದೆಯು ಹಲವು ವಿಶಿಷ್ಟ ಸನ್ನಿವೇಶಗಳಿಗೆ ಅನ್ವಯವಾಗಬಲ್ಲ ಒಂದು ಸಾಮಾನ್ಯ ಅಥವ ಸಾರ್ವತ್ರಿಕ ಹೇಳಿಕೆ. ಆದ್ದರಿಂದ ಒಂದು ಗಾದೆಯ ಮೂಲಕ ನಾವೇನನ್ನು ಅರ್ಥ ಮಾಡಿಕೊಳ್ಳ ಬೇಕಿದೆ ಎಂಬುದು ತತ್ಕ್ಷಣ, ಅಂದರೆ ಗಾದೆಯ ಹೇಳಿಕೆಯಲ್ಲಿಯೇ, ಸ್ಪಷ್ಟವಿರುವುದಿಲ್ಲ. ಆದರೆ ಅದನ್ನು ಜನರು ಪ್ರಯೋಗಿಸುವ ಸನ್ನಿವೇಶ ನಾವು ಅರ್ಥ ಮಾಡಿಕೊಳ್ಳ ಬೇಕಾದ ಘಟನೆಯನ್ನು ಸ್ಪಷ್ಟಗೊಳಿಸುತ್ತದೆ. ಮತ್ತು ಗಾದೆಯು ಸಂದರ್ಭಾನುಸಾರ ಸ್ಪಷ್ಟವಾಗುತ್ತದೆ. ಹನಿಹನಿಗೂಡಿದರೆ ಹಳ್ಳ ತೆನೆತೆನೆ ಕೂಡಿದರೆ ಬಳ್ಳ ಎಂಬ ಗಾದೆ ಇದೆ. ನಾವು ಈ ಗಾದೆಯನ್ನು ನಿರ್ದಿಷ್ಟ ಸನ್ನಿವೇಶದಲ್ಲಿ ಪ್ರಯೋಗಿಸುತ್ತೇವೆ ಮತ್ತು ಪ್ರಯೋಗಿಸಿದ ಸಂದರ್ಭ ಈ ಗಾದೆಯಿಂದ ನಾವು ಹೇಳ ಬೇಕಾದುದನ್ನು ಸ್ಪಷ್ಟಗೊಳಿಸುತ್ತದೆ. ಹಾಗೆಂದು ಇದೊಂದು ಅರ್ಥಹೀನ ವಾಕ್ಯವೇನಲ್ಲ. ಅದಕ್ಕೆ ತನ್ನದೇ ಆದ ಅರ್ಥವೂ ಇದೆ. ಇಂತಹ ಅರ್ಥ ಸಂಸ್ಕೃತಿಯ ಹಿನ್ನೆಲೆಯಿಂದ ಬರುತ್ತದೆ. ಈ ವಾಕ್ಯದಲ್ಲಿ ಎರಡು ಭಾಗಗಳಿವೆ. ಹನಿಹನಿ ಕೂಡಿದರೆ ಹಳ್ಳ ಎಂಬುದು ಪೂರ್ವಾರ್ಧ, ಮೊದಲ ಭಾಗ. ಎರಡನೆಯ ಭಾಗ (ಅಂದರೆ ಉತ್ತರಾರ್ಧ) ಪೂರ್ವಾರ್ಧದಲ್ಲಿ ನಿರೂಪಿತ ವಾಸ್ತವದ ದೃಢೀಕರಣ; ಅದರಿಂದ ತೆಗೆದ ಅನುಮಾನವಾಗಿಯೂ (inference) ಅದನ್ನು ಪರಿಭಾವಿಸಬಹುದಾಗಿದೆ. ಹೀಗೆ ಗಾದೆಗೆ ತನ್ನಷ್ಟಕ್ಕೆ ತಾನೆ ಒಂದು ಅರ್ಥವಿದೆ ಮತ್ತು ಅದು ಸ್ಪಷ್ಟವಾಗಿಯೇ ಇದೆ. ಹೇಗೆ ಮಳೆಗಾಲದಲ್ಲಿ ಬೇರೆಬೇರೆ ಕಡೆಗಳಿಂದ ಹರಿದು ಬಂದ ನೀರೆಲ್ಲ ಸೇರಿ ಒಂದು ಹಳ್ಳವಾಗುತ್ತದೆಯೋ ಹಾಗೆಯೇ ಕೆಲವೇ ಕಾಳುಗಳಿರುವ ಹಲವು ತೆನೆಗಳು ಸೇರಿ ಬಳ್ಳ (ಧಾನ್ಯವನ್ನು ಅಳೆಯಲು ಬಳಸುವ ದೊಡ್ಡ ಧಾರಕ ಅಥವ ಪಾತ್ರೆ) ತುಂಬುತ್ತದೆ ಎಂಬುದು ಸ್ಪಷ್ಟವಿರುವ ಅರ್ಥ. ಒಬ್ಬ ಸಣ್ಣ ವಯಸ್ಸಿನ ವ್ಯಕ್ತಿ ತನ್ನಲ್ಲಿರುವ ಧನವನ್ನು ಅಲ್ಪಅಲ್ಪವಾಗಿ ಅನಗತ್ಯವಾಗಿ ವ್ಯಯಿಸುತ್ತಿದ್ದಾನೆನ್ನಿ; ಆಗ ಒಬ್ಬ ಹಿರಿಯ ವ್ಕಕ್ತಿ ಬುದ್ಧಿಮಾತಾಗಿ ಈ ಗಾದೆಯನ್ನು ಹೇಳಬಹುದು. ಅಂದರೆ ನಾವು ಇಲ್ಲಿ ಎರಡನೆಯದಾಗಿ ಪ್ರಸ್ತಾವಿಸಿರುವ ಘಟನೆಯನ್ನು ಪ್ರಸ್ತುತ ಗಾದೆಯ ಮೂಲಕ ಅರ್ಥಮಾಡಿಕೊಳ್ಳುತ್ತೇವೆ. ಸಣ್ಣಸಣ್ಣ ಮೊತ್ತಗಳಲ್ಲಿ ವ್ಯಯಿಸುವ ಧನ ಅರ್ಥಮಾಡಿಕೊಳ್ಳ ಬೇಕಾದ ಲಕ್ಷ್ಯ. ಇದೊಂದು ಮಾನವ ವ್ಯವಹಾರ. ಇದನ್ನು ಅರ್ಥ ಮಾಡಿಕೊಳ್ಳಲು ನಾವು ಬಳಸುವುದು ಹನಿಹನಿ ಕೂಡಿ ಹಳ್ಳವಾಗುತ್ತದೆಂಬ ಮತ್ತು ತೆನೆತೆನೆ ಕೂಡಿ ಬಳ್ಳವಾಗುತ್ತದೆಂಬ ವಾಸ್ತವವನ್ನು. ಗಾದೆಯಲ್ಲಿ ನಿರೂಪಿತ ಮೂಲ ಘಟನೆಯಲ್ಲಿ ಸಣ್ಣ ಹನಿಗಳು, ಸಣ್ಣ ತೆನೆಗಳು, ಹಳ್ಳ ಮತ್ತು ಬಳ್ಳ ಇವೆ. ಗಾದೆ ಪ್ರಯೋಗವಾಗುವ ವಾಸ್ತವ ಘಟನೆಯಲ್ಲಿ ಇರುವ ಧನದ ಅಲ್ಪ ವ್ಯಯಗಳೊಂದಿಗೆ ಹನಿ ಮತ್ತು ತೆನೆಗಳು ನಕ್ಷೀಕೃತವಾಗುತ್ತವೆ; ಹಳ್ಳ ಮತ್ತು ಬಳ್ಳಗಳು ದೊಡ್ಡ ಮೊತ್ತದ ಹಣದ ಚೀಲದೊಂದಿಗೆ ನಕ್ಷೀಕೃತವಾಗುತ್ತವೆ (ರೂಪಕಗಳಲ್ಲಿ ಕಂಡುಬರುವ ನಕ್ಷೆಗಳ ಬಗ್ಗೆ ರೂಪಕಗಳ ಸುತ್ತ ಎಂಬ ನನ್ನ ಪ್ರಬಂಧವನ್ನು ನೋಡಬಹುದು). ಸಣ್ಸಣ್ಣ ಮೊತ್ತಗಳನ್ನು ನಾವು ಎಗ್ಗಿಲ್ಲದೆ ಖರ್ಚು ಮಾಡುವುದನ್ನು ಬಿಟ್ಟು ಸಂಕಲಿಸಿದರೆ ಒಂದು ದಿನ ಅದು ದೊಡ್ಡ ಮೊತ್ತವಾಗುತ್ತದೆ, ಆಗ ಅದನ್ನು ಸತ್ಕಾರ್ಯಕ್ಕಾಗಿ ಬಳಸಬಹುದು; ಮತ್ತು ಹಣ ಸಿಕ್ಕಿದಂತೆಲ್ಲ ಖರ್ಚು ಮಾಡದೆ ಉಳಿಸುತ್ತಾ ಹೋಗಬೇಕು  ಎಂಬುದು ಇದರ ಅಭಿಪ್ರಾಯವಾಗಿ ಮೂಡುತ್ತದೆ. ಹೀಗೆ ಗಾದೆ ಸನ್ನಿವೇಶದಲ್ಲಿ ಅರ್ಥವಾಗುತ್ತದೆ.
ಇಲ್ಲೆಲ್ಲ ಗಾದೆಯು ಒಂದು ಮೂಲ ಪರಿಧಿಯಂತೆ ವರ್ತಿಸುತ್ತದೆ ಮತ್ತು ಅದು ಪ್ರಯೋಗವಾಗುವ ಸಂದರ್ಭದ ಮನಷ್ಯ ನಡವಳಿಕೆ ಲಕ್ಷ್ಯ ಪರಿಧಿಯಾಗಿ ಅರ್ಥವಾಗುತ್ತದೆ. ಆದ್ದರಿಂದಲೇ ವಿಭಿನ್ನ ಸಂದರ್ಭಗಳಲ್ಲಿ ಗಾದೆಗಳು ವಿಭಿನ್ನವಾಗಿ ಅರ್ಥವಾಗುತ್ತವೆ. ಪ್ರಥಮ ಚುಂಬನಮ್ ದಂತಭಗ್ನಮ್ ಎಂಬ ಇನ್ನೊಂದು ಉದಾಹರಣೆಯನ್ನು ನೋಡಬಹುದು. ಇದು ವ್ಯಕ್ತಿಯೊಬ್ಬನು ಭಾವನಾತ್ಮಕವಾಗಿ ನೋವಿನ ಅನುಭವವನ್ನು ಹೇಳಿಕೊಳ್ಳಲು ಮತ್ತು ಆದ್ದರಿಂದ ಸಣ್ಣಮಟ್ಟದ ಭಾವನಾತ್ಮಕ ಸಂದರ್ಭಗಳಲ್ಲಿ ಭಾಗವಹಿಸಲು ಹೆದರುತ್ತಿರುವುದನ್ನು ಸೂಚಿಸಲು ಬಳಸಬಹುದು. ಅಥವ ಒಬ್ಬ ವ್ಯಕ್ತಿಯು ಪ್ರಾರಂಭಿಸಿದ ಉದ್ಯಮ ಇತ್ಯಾದಿಗಳಲ್ಲಿ ಪ್ರಾರಂಭದಲ್ಲಿಯೇ ವಿಫಲನಾದುದನ್ನು ಟೀಕಿಸಲು ಬಳಸಬಹುದು.
ಪ್ರತಿಯೊಂದು ಗಾದೆಯ ಹಿಂದೆ ಒಂದು ವಿಸ್ತೃತ ಕಥೆಯೇ ಇರುತ್ತದೆ ಎನ್ನಬಹುದು.ಅಥವ ಗಾದೆಯ ಹಿನ್ನೆಲೆಯಾಗಿ ಒಂದು ಕಥೆಯನ್ನು ಕಲ್ಪಿಸುವುದು ಅದರ ಅರ್ಥವನ್ನು ಸ್ಪಷ್ಟಪಡಿಸಲು ಒಂದು ಸಾಧನವೇಸರಿ. (ನಾನು ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದಾಗ ಗಾದೆಗಳನ್ನು ವಿಸ್ತರಿಸಿ ಬರೆಯುವುದು ಒಂದು ಪರಿಕ್ಷಾ ಪ್ರಶ್ನೆಯಾಗಿರುತ್ತಿತ್ತು). ಉದಾಹರಣೆಗೆ: ಊಟ ಆಯ್ತೇನೋ ಗುಂಡ ಎಂದರೆ ಮುಂಡಾಸು ಮುವತ್ತು ಮೊಳ ಅಂದ ಎಂಬುದೊಂದು ಗಾದೆ. ಈ ಗಾದೆಯ ಹಿನ್ನೆಲೆಯನ್ನು ಹೀಗೆ ಕಲ್ಪಿಸಿಕೊಳ್ಳಬಹುದು. ಒಬ್ಬ ಏನೂ ಕೆಲಸವಿಲ್ಲದ, ಕೆಲಸಕ್ಕೆ ಒಗ್ಗದ ಹುಡುಗ; ಅವನೊಮ್ಮೆ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ; ಕೆಲಸದಲ್ಲಿ ನಿರತನಾಗಿದ್ದ ಒಬ್ಬ ಹಿರಿಯ ಪರಿಚಿತ ಇವನನ್ನು ನೋಡಿದ; ಮಾತನಾಡಿಸೋಣವೆಂದು ಊಟವಾಯ್ತೇನೋ ಗುಂಡ ಎಂದು ಕೇಳಿದ; ಗುಂಡ ಆಯ್ತು ಅಥವ ಇಲ್ಲ ಎಂದು ಉತ್ತರಿಸುವುದಿಲ್ಲ; ಬದಲಾಗಿ ಉದ್ದವಾಗಿದ್ದ ಹಿರಿಯನ ಮುಂಡಾಸನ್ನು ನೋಡಿ ‘ಮುಂಡಾಸು ಮುವತ್ತು ಮೊಳ’ ಎಂದು ಉಡಾಫೆ ಹೊಡೆದು ನಡೆದೇ ಬಿಟ್ಟ. ಕೇಳಿದ ಪ್ರಶ್ನೆಗೆ ಸರಿಯಾದ ಉತ್ತರ ಹೇಳದ, ಯಾವಾಗಲೂ ಸುತ್ತು ಬಳಸಿಯೇ ಮಾತನಾಡುವ, ಒಂದು ಮಾತಿಗೆ ಹಲವು ಮಾತುಗಳಿಂದ ಅಸಂಬದ್ಧವಾಗಿ ಪ್ರತಿಕ್ರಿಯಿಸುವ ಸಂದರ್ಭಗಳಲ್ಲಿ ಈ ಗಾದೆ ಬಳಕೆಯಾಗುತ್ತದೆ. ಹೀಗೆ ಗಾದೆಗಳಿಗೆ ಕಥಾ ಹಿನ್ನೆಲೆ ಕಲ್ಪಿಸ ಬಹುದು.
ಗಾದೆಗಳಲ್ಲಿ ರೂಪಕಗೊಳಿಸುವ ಪ್ರಕ್ರಿಯೆ ಹಲವು ರೀತಿಯಲ್ಲಿ ನಡೆಯುತ್ತದೆ. ಸಾರ್ವತ್ರಿಕವಾಗಿ ಅನ್ವಯವಾಗುವಂತಹ ಹೇಳಿಕೆಗಳ ರೂಪವಾಗಿ ಅವು ಇದ್ದು ಎಷ್ಟೋ ನಿರ್ದಿಷ್ಟ ಸಂದರ್ಭಗಳಲ್ಲಿ ಅವುಗಳನ್ನು ಬಳಕೆ ಮಾಡಲು ಸಾಧ್ಯವಾಗುತ್ತದೆ. ಅಂದರೆ ಒಂದು ಸಾರ್ವತ್ರಿಕ ಸತ್ಯದಂತಿರುವ ಹೇಳಿಕೆಯನ್ನು ಅದು ಈ ನಿರ್ದಿಷ್ಟ ಸಂದರ್ಭಕ್ಕಾಗಿಯೇ ಮಾಡಿದ್ದು ಎಂಬಂತೆ ಬಳಸುವುದು. ಅಂತಹವನ್ನು ಸಾರ್ವತ್ರಿಕವು ನಿರ್ದಿಷ್ಟ ಎಂಬ ರೂಪಕ ಎಂದು ಪರಿಗಣಿಸಬಹುದು. (ಇಂತಹವನ್ನು ರೂಪಕಗಳೆಂದು ಪರಿಗಣಿಸಬೇಕಾಗಿಲ್ಲ ಎಂಬ ವಾದವೂ ಇದೆ). ಮನುಷ್ಯನನ್ನು ಪ್ರಾಣಿಯನ್ನಾಗಿ ರೂಪಕಗೊಳಿಸುವುದು, ಸಸ್ಯವನ್ನಾಗಿ ರೂಪಕಗೊಳಿಸುವುದು ಇಂಹವು ಗಾದೆಗಳಲ್ಲಿ ಸಹಜ. ನಾಯಿ ಬೊಗಳಿದರೆ ದೇವ ಲೋಕ ಹಾಳಾಗದು ಎಂಬ ಗಾದೆ ಇದೆ. ಬೀದಿ ನಾಯಿಗೆ ಒಳ್ಳೆಯವರು ಕೆಟ್ಟವರು ಎಂಬುದರ, ಅಥವ ಇವರು ಒಳ್ಳೆಯ ಕಾರ್ಯ ಮಾಡಿದ್ದಾರೆ ಇನ್ನೊಬ್ಬರು ಕೆಟ್ಟ ಕಾರ್ಯ ಮಾಡಿದ್ದಾರೆ ಅಥವ ಮಾಡುತ್ತಾರೆ ಎಂಬುದರ ಪರಿಗಣನೆ ಇರುವುದಿಲ್ಲ. ತನಗೆ ಏನೋ ಅಪಾಯವಿದೆ ಎಂದು ದಾರಿಹೋಕರನ್ನು ನೋಡಿ ಬೊಗಳುತ್ತಿರುತ್ತದೆ. ಇದರಿಂದ ದಾರಿಗರಿಗೆ ಕೇಳುವ ಕಿರಿಕಿರಿ ಉಂಟಾದರೂ ಯಾರೇನೂ ಹೆದರಿ ಓಡುವುದಿಲ್ಲ. ಅವರೇನೂ ಕಳ್ಳರಲ್ಲವಲ್ಲ! ನಾಯಿಯ ಬೊಗಳುವಿಕೆಯೇ ಒಬ್ಬನನ್ನು ಕಳ್ಳನನ್ನಾಗಿಯೋ ಕೆಟ್ಟವನನ್ನಾಗಿಯೋ ಮಾಡುವುದಿಲ್ಲ. ಇದನ್ನು ಸಾರ್ವತ್ರಿಕವಾಗಿ ಅನ್ವಯವಾಗುವ ಒಂದು ಹೇಳಿಕೆಯಂತೆ ಗಾದೆ ನಿರೂಪಿಸುತ್ತದೆ. ಒಬ್ಬ ಸಜ್ಜನ ವಿದ್ವಾಂಸರನ್ನು ಅವನಿಗೆ ಸಿಗುವ ಗೌರವವನ್ನು ನೋಡಿ ಒಬ್ಬ ಕಾಳ ಸಂತೆಕೋರ ಅಸೂಯೆಯಿಂದ ನಿಂದಿಸಿದರೆ ನೋಡುಗರು ಈ ಗಾದೆಯನ್ನು ಹೇಳ ಬಹುದು. ಅಥವ ತನ್ನನ್ನು ಎದುರೆದುರೇ ವಿನಾಕಾರಣ ನಿಂದಿಸುತ್ತಿದ್ದರೆ ನಿಂದಕನಿಗೆ ತಾನು (ಓರ್ವ ಸಜ್ಜನ) ಈ ಮಾತನ್ನು ಬುದ್ಧಿಮಾತಾಗಿಯೂ ಹೇಳ ಬಹುದು. ಗಾದೆಯಲ್ಲಿ ನಾಯಿ ಎಂಬ ಮಾತಿದ್ದರೂ ಇದು ನಿಜವಾಗಿ ಮನುಷ್ಯನಿಗೆ ಅನ್ವಯವಾಗುವಂತಹದು. ಇಲ್ಲಿ ನಾಯಿಯ ನಿಷ್ಠಾ ನಡವಳಿಕೆ ಅನುಲಕ್ಷಿಸಿಲ್ಲ; ನಾಯಿಯ ಹೀನ ಸ್ವಭಾವಗಳು ಅನುಲಕ್ಷಿತವಾಗಿವೆ. ಅನಾವಶ್ಯಕವಾಗಿ ನಿಂದಿಸುವುದು ಕೆಲವರ ಹೀನ ಸ್ವಭಾವವಾಗಿದ್ದು ಅದರಿಂದ ಶ್ರೇಷ್ಠ ಸ್ವಭಾವದ ಮನುಷ್ಯನಿಗೇನೂ ಕುಂದಾಗುವುದಿಲ್ಲ ಎಂಬುದೇ ಇಲ್ಲಿರುವ ಧ್ವನಿ. ಅನೇಕ ಗಾದೆಗಳಲ್ಲಿ ಹೀಗೆ ಮನುಷ್ಯನ ಸ್ಥಾನದಲ್ಲಿ ಪ್ರಾಣಿಯೊಂದನ್ನು ಬಳಸುವುದಿದೆ. ಅಂದರೆ ಮನುಷ್ಯನನ್ನು ಪ್ರಾಣಿಯನ್ನಾಗಿ ರೂಪಕಗೊಳಿಸಿ ಗಾದೆಗಳಲ್ಲಿ ಪ್ರಯೋಗಿಸುವುದು ಸಾಮಾನ್ಯ. ಹೀಗೆ ಮನುಷ್ಯನ ಗುಣಗಳನ್ನು ಪ್ರಾಣಿಗಳಿಗೆ ಆರೋಪಿಸುವ ಮೂಲಕ ಅಥವ ಪ್ರಾಣಿಗುಣವನ್ನು ಮನುಷ್ಯನಿಗೆ ಆರೋಪಿಸುವ ಮೂಲಕ ರೂಪಕಗೊಳಿಸುವ ಈ ಪ್ರಕ್ರಿಯೆಗೆ ಅಸ್ತಿತ್ವದ ಮಹಾಸರಪಳಿ ರೂಪಕವೆಂದು ಕರೆಯುವರು.
ಪರಿಕಲ್ಪನಾತ್ಮಕ ರೂಪಕಗಳೂ ಗಾದೆಗಳಲ್ಲಿ ಪ್ರಯೋಗವಾಗುತ್ತವೆ. ಮಾಡಿದವನ ಪಾಪ ಆಡಿದವನ ಬಾಯಲ್ಲಿ ಎಂಬ ಗಾದೆಯನ್ನು ತೆಗೆದುಕೊಳ್ಳಿ. ಸಾರ್ವತ್ರಿಕವು ನಿರ್ದಿಷ್ಟ ಎಂಬ ತತ್ವವು ಬೇರೆಲ್ಲ ಗಾದೆಗಳಂತೆ  ಇದಕ್ಕೂ ಅನ್ವಯವೇ. ಅಲ್ಲದೆ ಪಾಪವನ್ನು ಒಂದು ಭಕ್ಷ್ಯದಂತೆ ಇಲ್ಲಿ ಬಳಸಿರುವುದು ಇನ್ನೊಂದು ವೈಶಿಷ್ಟ್ಯ (‘ಮಾಡುವುದು’ ‘ಬಾಯಲ್ಲಿ’). ಪಾಪವೆಂಬ ಅಮೂರ್ತ ಪರಿಕಲ್ಪನೆಯನ್ನು ಇಲ್ಲಿ ಭಕ್ಷ್ಯವೆಂಬಂತೆ ರೂಪಕಗೊಳಿಸಲಾಗಿದೆ.  ಬಾಳೊಂದು ಪಯಣ, ನೋಟವು ಸ್ಪರ್ಶ ತಿಳಿಯುವುದು ನೋಟ ಇಂತಹ ಪರಿಕಲ್ಪನಾತ್ಮಕ ರೂಪಕಗಳೂ ಗಾದೆಗಳಲ್ಲಿ ಬಳಕೆಯಾಗುತ್ತವೆ. ಬೆಕ್ಕು ಕಣ್ಮುಚ್ಚಿ ಹಾಲು ಕುಡಿದರೆ ಜಗತ್ತಿಗೆ ಗೊತ್ತಾಗಲ್ವಾ? ಎಂಬ ಗಾದೆಯಲ್ಲಿ ತಿಳಿಯುವುದು ನೋಟ ಎಂಬ ರೂಪಕ ಬಳಕೆಯಾಗಿದೆ. ಆರಕ್ಕೇರಲಿಲ್ಲ, ಮೂರಕ್ಕೀಳಿಯಲಿಲ್ಲ – ಈ ಗಾದೆಯಲ್ಲಿ ಏರುವುದು ಪ್ರಗತಿ, ಇಳಿಯುವುದು ವಿಗತಿ ಎಂಬ ರೂಪಕವಿದೆ. ಇದು ಜೀವನಕ್ಕೆ ಸಂಬಂಧಿಸಿದ್ದು ಬಾಳೊಂದು ಪಯಣ ಎಂಬ ರೂಪಕದ ಭಾಗವಾಗಿದೆ. ಪಯಣದಲ್ಲಿ (ಜೀವನದಲ್ಲಿ) ಏರುವುದು ಪ್ರಗತಿ ಮತ್ತು ಇಳಿಯುವುದು ತದ್ವಿರುದ್ಧ.
ಗಾದೆಗಳನ್ನು ಅರ್ಥೈಸುವುದರಲ್ಲಿ ಈಚೆಗೆ ಬಳಕೆಗೆ ಬರುತ್ತಿರುವ ವಿಧಾನವೆಂದರೆ ಸಮ್ಮಿಳಿತಗಳ ಸಿದ್ಧಾಂತ (Theory of Blends). ಇದನ್ನು ರೂಪಕ ಸಿದ್ಧಾಂತದ ಇನ್ನೊಂದು ಮಗ್ಗಲು ಎನ್ನಬಹುದು. ಇದರ ಪ್ರಕಾರ ಗಾದೆಗಳನ್ನು ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆಯು ಮೂರು ಹಂತಗಳನ್ನು ಒಳಗೊಂಡಿರುತ್ತದೆ. ಅವು ಯಾವುವೆಂದರೆ:  ಸಂಯೋಜನೆ, ಸಂಪೂರ್ಣನೆ ಮತ್ತು ವಿಸ್ತರಣೆ. ಆಳಾಗಬಲ್ಲವ ಅರಸಾಗಬಲ್ಲ ಎಂಬ ಗಾದೆಯನ್ನು ಪರಿಗಣಿಸೋಣ. ಆಳು ಅರಸ ಎಂಬ ಎರಡು ಅಂಶಗಳಿಲ್ಲಿವೆ. ಆಳು ಎಂದೊಡನೆ ಮನಸ್ಸಿನಲ್ಲಿ ಮೂಡುವ ಚಿತ್ರಗಳು ಸೇವೆ ಮಾಡುವವನು, ಆದೇಶಗಳನ್ನು ಪಡೆಯುವವನು, ಇನ್ನೊಬ್ಬರನ್ನು ವಿರೋಧಿಸದವನು, ಬಡತನವನ್ನು ಸಹಿಸುವವನು ಇತ್ಯಾದಿ. ಇವೆಲ್ಲ ಮನಸ್ಸಿನ ಒಂದು ಭಾಗದಲ್ಲಿ ಸಂಗ್ರಹವಾಗಿವೆ ಎಂದು ಭಾವಿಸ ಬಹುದು. ಮತ್ತು ಆಳು ಎಂದೊಡನೆ ಮನಸ್ಸಿನ ಈ ಭಾಗವು ಕ್ರಿಯಾಶೀಲವಾಆಗುತ್ತದೆ. ಇದನ್ನು ಸಮ್ಮಿಳಿತಗಳ ಸಿದ್ಧಾಂತದಲ್ಲಿ ಒಂದು ಮಾನಸಿಕ ಅವಕಾಶ ಎಂದು ಕರೆಯುತ್ತಾರೆ. ಹೀಗೆಯೇ ಅರಸ ಎಂಬುದರ ಮಾನಸಿಕ ಅವಕಾಶ ಇನ್ನೊಂದಿದೆ. ಈ ಮಾನಸಿಕ ಅವಕಾಶದಲ್ಲಿ ಸೇವೆ ಮಾಡಿಸಿಕೊಳ್ಳುವವ, ಆದೇಶಗಳನ್ನು ನೀಡುವವ, ತನ್ನ ನಿರ್ಣಯಗಳನ್ನು ತಾನೇ ಮಾಡುವವ, ವೈಭವದಲ್ಲಿ ಜೀವಿಸುವವ ಇಂತಹವೆಲ್ಲ ಇವೆ. ಅರಸು ಎಂದೊಡನೆ ಈ ಮಾನಸಿಕ ಅವಕಾಶವು ಕ್ರಿಯಾಶೀಲವಾಗುತ್ತದೆ. ಆಳಾಗ ಬಲ್ಲವ ಅರಸಾಗ ಬಲ್ಲ ಎಂಬ ಇಡೀ ವಾಕ್ಯವನ್ನು ಉಚ್ಚರಿಸಿದೊಡನೆ ಈ ಎರಡರ ಅಂಶಗಳನ್ನು ಸೇರಿಸಿದ ಸಂಯೋಜನೆಯೊಂದು ಸಿದ್ಧವಾಗುತ್ತದೆ. ಇದನ್ನೂ ಸಂಯೋಜನೆಯ ಹಂತ ಎಂದು ಕರೆಯುತ್ತಾರೆ. ಈ ಸಂಯೋಜನೆಯಿಂದ ಸಾರ್ವತ್ರಿಕ ಮಾನಸಿಕ-ಅವಕಾಶವೊಂದನ್ನು ನಾವು ಸಿದ್ಧ ಮಾಡಿ ಕೊಳ್ಳುತ್ತೇವೆ.  ಈ ಸಾರ್ವತ್ರಿಕ ಅವಕಾಶದಲ್ಲಿ ಆಳು: ಸೇವೆ ಮಾಡುವವನು, ಆದೇಶಗಳನ್ನು ಪಡೆಯುವವನು, ಇನ್ನೊಬ್ಬರನ್ನು ವಿರೋಧಿಸದವನು, ಬಡತನವನ್ನು ಸಹಿಸುವವನು, ಅರಸು: ಸೇವೆ ಮಾಡಿಸಿಕೊಳ್ಳುವವ, ಆದೇಶಗಳನ್ನು ನೀಡುವವ, ತನ್ನ ನಿರ್ಣಯಗಳನ್ನು ತಾನೇ ಮಾಡುವವ, ವೈಭವದಲ್ಲಿ ಜೀವಿಸುವವ ಈ ಎಲ್ಲ ಅಂಶಗಳೂ ಇರುತ್ತವೆ ಮತ್ತು ವಾಕ್ಯವನ್ನು ಕೇಳಿದೊಡನೆ ಈ ಸಾರ್ವತ್ರಿಕ ಅವಕಾಶವು ಕ್ರಿಯಾಶೀಲವಾಗುತ್ತದೆ. ಇದು ಎರಡನೆಯ ಹಂತ. ಮೊದಲೇ ಲಭ್ಯವಿರುವ ಅವಕಾಶಗಳ ಸಂಯೋಜಿತ ಸ್ವರೂಪ ಇಲ್ಲಿ ಸಿದ್ಧವಾಗುತ್ತದೆ. ಇದನ್ನು ಸಂಪೂರ್ಣನೆ ಎನ್ನಬಹುದು. ಸೇವೆ ಮಾಡುವುದು, ಇನ್ನೊಬ್ಬರನ್ನು ಒಪ್ಪುವುದು, ಆಡಂಬರವಿಲ್ಲದ ಸರಳತನ, ಒಟ್ಟು ಹಿತಕ್ಕನುಗುಣವಾಗಿ ತನ್ನದೇ ನಿರ್ಣಯ ತೆಗೆದುಕೊಳ್ಳುವವನು, ಇಂತಹ ಅಂಶಗಳನ್ನೊಳಗೊಂಡ ಸಮ್ಮಿಳಿತ ಸಿದ್ಧವಾಗುತ್ತದೆ. ಎರಡು ಪ್ರಾಥಮಿಕ ಮಾನಸಿಕ ಅವಕಾಶಗಳ ಸಂಯೋಜನೆಯಿಂದ (ಅಂದರೆ ಸಂಪೂರ್ಣನೆಯ ಹಂತದಿಂದ) ಸಮ್ಮೀಳಿತವು ಹೇಗೆ ಉಂಟಾಗುತ್ತದೆ ಎಂಬುದನ್ನು ಇದು ತೋರಿಸುತ್ತದೆ. ಈ ರೀತಿಯ ಸಂಮಿಳಿತದಿಂದಾಗಿ ನಿರ್ದಿಷ್ಟ ಸಂದರ್ಭದಲ್ಲಿ ಗಾದೆಯು ತತ್ಕ್ಷಣ ಅರ್ಥವಾಗುತ್ತದೆ. ಈ ಮೂರು ಹಂತಗಳಲ್ಲಿ ಸಮ್ಮಿಳಿತ ಉಂಟಾಗುವ ಪ್ರಕ್ರಿಯೆಯನ್ನ ವಿದ್ವಾಂಸರೊಬ್ಬರು ಹೀಗೆ ವಿವರಿಸಿದ್ದಾರೆ:  1) by composition of the elements from the input spaces, 2) by completion, following a pre-existing structure available to the speaker, and 3) by further elaboration of the structure. This projection uses relations of identity, analogy, similarity, causality, change, time, intention, space, role, part and whole, or representation. If the proverb brings together two or more objects, it is easy to imagine that each of the objects could belong to a different input space (Jibir-Daura  p8). ಕೈಕೆಸರಾದರೆ ಬಾಯಿಮೊಸರು ಎಂಬ ಗಾದೆಯನ್ನು ತೆಗೆದುಕೊಳ್ಳೋಣ. ಇಲ್ಲಿ ‘ಕೆಸರು’ ಮತ್ತು ‘ಮೊಸರು’ ಎಂಬ ಎರಡು ಕ್ಷೇತ್ರಗಳಿವೆ. ಕೆಸರು ಕೈಗಳನ್ನು ಕೊಳೆ ಮಾಡುವಂತಹುದು; ಮಲೆನಾಡು ಪ್ರದೇಶದಲ್ಲಿ ಕೃಷಿ ಕೆಲಸ ಮಾಡುವಾಗ ಅನಿವಾರ್ಯ; ಕೆಲಸವನ್ನೊಳಗೊಂಡಿರುವುದರಿಂದ ಶ್ರಮ ಇಲ್ಲಿ ನಿಹಿತ. ಮೊಸರು ಉತ್ತಮ ಪೋಷಕಗುಣಗಳುಳ್ಳುದು; ತಿನ್ನುವಾಗ ರುಚಿ ನೀಡುವಂತಹುದು; ಸದನುಕೂಲ ತರುವಂತಹುದು. ಶ್ರಮ, ಕೈ ಕೊಳೆ, ಕೃಷಿ ಇವುಗಳೊಂದಿಗೆ ಪೋಷಕಾಂಶ, ರುಚಿ ಮತ್ತು ಅನುಕೂಲಗಳು ಸಮನ್ವಯಗೊಂಡು ಸಮ್ಮಿಳಿತ ಉಂಟಾಗುತ್ತದೆ. ಇದು ಒಂದು ರೀತಿಯ ಕಸಿ ಕಟ್ಟುವಿಕೆ ಇದ್ದಂತೆ. ಇಲ್ಲಿರುವ ಅಂಶಗಳಲ್ಲಿ ಕಾಣಬರದ ಹೊಸದೇ ಅರ್ಥವನ್ನು (ಕಸಿ ಮಾವಿನ ಹಣ್ಣು ಬೇರೆಯೇ ರುಚಿ ನೀಡುವಂತೆ) ಈ ಸಮ್ಮಿಳಿತ ಹೊರಡಿಸುತ್ತದೆ. ಕಷ್ಟ ಪಟ್ಟು ದುಡಿದರೆ ಸುಖದಾಯಕ ಪ್ರತಿಫಲ ಸಿಗುವುದೆಂಬುದು ಇಲ್ಲಿ ಧ್ವನಿತವಾಗುವ ಅಂಶ. ಗಾದೆಗಳನ್ನು ಅರ್ಥಮಾಡಿಕೊಳ್ಳಲು ಇಲ್ಲಿ ಹೇಳಿರುವ ಯಾವುದೇ ಒಂದಂಶ ಪೂರ್ಣ ಪರಿಣಾಮಕಾರಿ ಎನ್ನಲು ಬರುವುದಿಲ್ಲ. ಇವೆಲ್ಲವನ್ನು ಸಮ್ಮಿಳಿಸಿಕೊಂಡು ವಿಶ್ಲೇಷಿಸಿದಾಗ ಗಾದೆಯ ಅರ್ಥ ಮನಂಬುಗುತ್ತದೆ.
ಇತರ ಭಾಷೆಗಳಲ್ಲಿ ಬಹುಸಂಖ್ಯೆಯ ಗಾದೆಗಳು ಪ್ರಾಣಿಗಳನ್ನೊಳಗೊಂಡ ರೂಪಕಗಳನ್ನು ಬಳಸುತ್ತವೆ ಎಂಬ ಅಭಿಪ್ರಾಯವಿದೆ (Hien, p 2 ). ಕನ್ನಡದಲ್ಲಿ ಪರಿಸ್ಥಿತಿ ಬೇರೆ ಇರುವಂತೆ ಕಾಣುತ್ತದೆ. ಕನ್ನಡದಲ್ಲೊಂದು ಗಾದೆಗಳ ಸಂಗ್ರಹವನ್ನು ಉಳ್ಳಾಲ ನರಸಿಂಗರಾವ್  ಇವರು ಹತ್ತೊಂಬತ್ತನೆಯ ಶತಮಾನದಲ್ಲಿ ಸಂಕಲಿಸಿ ಹೊರತಂದರು. ಈ ಪ್ರಥಮ ಗಾದೆಗಳ ಸಂಗ್ರಹದಲ್ಲಿ  ಒಟ್ಟು 607 ಗಾದೆಗಳಿದ್ದು ಇದರಲ್ಲಿ ಸಸ್ಯಗಳಿಗೆ ಸಂಬಂಧಿಸಿದ 30 ಗಾದೆಗಳು, ಪ್ರಾಣಿಗಳ ಪಾತ್ರವಿರುವ 80 ಗಾದೆಗಳು, ದೇವರ ಪಾತ್ರವಿರುವ 7 ಗಾದೆಗಳು ಮತ್ತು ಮನುಷ್ರನದೇ ಪ್ರಧಾನ ಪಾತ್ರವಿರುವ 303 ಗಾದೆಗಳು ಇವೆ. ಹೀಗೆ ನಮ್ಮ ಭಾಷೆಯ ಗಾದೆಗಳಲ್ಲಿ ಮನುಷ್ಯರೇ ಪ್ರಧಾನ ಪಾತ್ರಗಳಿರುವಂತೆ ತೋರುತ್ತದೆ. ಅನಂತರದ ಸ್ಥಾನ ಪ್ರಾಣಿಸಂಬಂಧಿ ಗಾದೆಗಳಿಗೆ ಮತ್ತು ಅನಂತರ ಸಸ್ಯದವುಗಳಿಗೆ. ಎಲ್ಲ ಗಾದೆಗಳು ಸಾಮಾನ್ಯವಾಗಿ ಸಂಭಾಷಣೆಗಳಲ್ಲಿ ಉಪಯೋಗಕ್ಕೆ ಬರುವಂತಹವು. ಇವು ಜೊತೆಗಾರನ ಅಭಿಪ್ರಾಯಗಳನ್ನು ನಯವಾಗಿ ವಿರೋಧಿಸಲು, ಅವನನ್ನು ವಿಮರ್ಶಿಲು ಅಥವ ಅವನು ಸಣ್ಣವನಾಗಿದ್ದರೆ ಅವನನ್ನು ತಿದ್ದಲು ಉಪಯುಕ್ತವಾಗುತ್ತವೆ. ಹೀಗೆ ಸಾಂಸ್ಕೃತಿಕವಾಗಿಯೂ ಗಾದೆಗಳು ಮುಖ್ಯವಾಗುತ್ತವೆ.
ಇಲ್ಲಿ ಕೆಲವು ಅಪುರೂಪದ ಸಸ್ಯ ಸಂಬಂಧೀ ಗಾದೆಗಳನ್ನು ವಿಶ್ಲೇಷಣೆಗೆ ತೆಗೆದುಕೊಂಡಿದ್ದೇನೆ. ಇಲ್ಲಿ ಬಳಕೆಯಾಗಿರುವ ವಸ್ತುಗಳಾದ ‘ಅಕ್ಕಿ’, ‘ಅಡಿಕೆ’, ‘ಆನೆ’ ಇಂತಹವೆಲ್ಲ ಭಾರತೀಯ ಪರಂಪರೆಯಲ್ಲಿ ಮತ್ತು ಕರುನಾಡ ಸಂಸ್ಕೃತಿಯಲ್ಲಿ ತಮ್ಮದೇ ಪ್ರಾಮುಖ್ಯವನ್ನು ಹೊಂದಿವೆ. ಹಾಗಾಗಿಯೇ ಈ ಗಾದೆಗಳ ಸಂಗ್ರಾಹಕರು (ಉಳ್ಳಾಲ ನರಸಿಂಗರಾಯರು) ನೀಡಿರುವ ಇಂಗ್ಲಿಷಿನ ಸಮಾನ ಗಾದೆಗಳಲ್ಲಿ ಈ ಪದಗಳಿಲ್ಲ; ಬದಲಾಗಿ ಬೇರೆಯೇ ಪದಗಳು ಕಾಣಿಸಿಕೊಳ್ಳುತ್ತವೆ. ಇಲ್ಲಿ ಇಂತಹ ಕೆಲವು ಗಾದೆಗಳನ್ನು ಆಯ್ದು ಕೆಲವು ನಿರ್ಣಯಗಳನ್ನು ತೆಗೆದುಕೊಂಡಿದೆ. ಇವುಗಳಿಗಾಗಿ ತೆಗೆದ ನಿರ್ಣಯಗಳನ್ನ ಪ್ರಾತಿನಿಧಿಕ ಸ್ವರೂಪದವೆಂದು ಸ್ವೀಕರಿಸಬಹುದಾಗಿದೆ. ಇವು ಕನ್ನಡ ಮತ್ತು ಇಂಗ್ಲಿಷ್ ಗಾದೆಗಳ ವಿಭಿನ್ನತೆಯನ್ನು ತೋರಿಸುತ್ತವೆ.  ಮೊದಲನೆಯದಾಗಿ
1  ಅಕ್ಕಿ ಎಂದರೆ ಪ್ರಾಣ ನೆಂಟರೆಂದರೆ ಜೀವ                                            
                                     [ಸ್ನೇಹಕ್ಕೆ ಸ್ನೇಹ, ಮೀನಿನ ಬುಟ್ಟಿಗೆ ಕೈಹಾಕಬೇಡ]
                                      I love you well but touch not my pocket
ನೆಂಟರು ಮನೆಗೆ ಬರುತ್ತಿರಬೇಕು ಅವರ ಒಡನಾಟದಲ್ಲಿ ಸಂತೋಷ ಪಡಬಹುದು ಎಂಬುದು ಸಾಮಾನ್ಯವಾಗಿ ಎಲ್ಲರ ಆಸೆ.  ಆದರೆ ಅವರನ್ನು ಉಪಚರಿಸಲು ಬೇಕಾದ ಸಂಪನ್ಮೂಲಗಳಿಲ್ಲದೆ ಇದ್ದರೆ ಮುಜುಗರಕ್ಕೀಡಾಗ ಬೇಕಾಗುತ್ತದೆ. ಹಿಂದೆ ಅಜ್ಜಿಯರು ಮಕ್ಕಳನ್ನು ಆಡಿಸುತ್ತಿದ್ದ ಒಂದು ಆಟ ಇದೇ ಭಾವನೆಗಳನ್ನು ವ್ಯಕ್ತ ಪಡಿಸುವುದಿತ್ತು.ಅಜ್ಜಿ ಪ್ರಶ್ನಿಸುತ್ತಾಳೆ ನೆಂಟರು ಬಂದರೆ ಜೀವ ಹೆಂಗಾಗತ್ತೆ?  ಕೈಯನ್ನು ಕಿವುಚಿದಂತೆ ಅಭಿನಯಿಸುತ್ತಾ ಮಗು ಹೇಳ ಬೇಕು: ಹಿಂಗ್ಹಿಂಗಾಗತ್ತೆ. ಅಜ್ಜಿ: ಗಂಟಿಳಿಸಿದರು. ಮಗು ಎದೆಯ ಮೇಲೆ ಕೈಯಿಟ್ಟುಕೊಂಡು ‘ಅಬ್ಬಾ’. ಊಟ ಆಯ್ತುಂತೆ: ‘ಒಹೋ’ ಹೋಗಿಬರ್ತಾರಂತೆ: ‘ಸಂತೋಷ’.  ಹೀಗೆ ಬಡತನದಲ್ಲಿರುವವರ ಮನೆಗೆ ನೆಂಟರು ಬಂದಾಗಿನ ಬವಣೆ ಮತ್ತು ಸಂತೋಷ ಹಾಗೂ ಅವರು ಹೊರಟು ನಿಂತಾಗ ಆಗುವ ಸಮಾಧಾನ ಇವೆಲ್ಲವೂ ಇಲ್ಲಿ ವ್ಯಕ್ತವಾಗಿವೆ. ಈ ಗಾದೆಯೂ ಅದೇ ಭಾವಗಳನ್ನು ಹೇಳುವಂತಹದು.  ಇಲ್ಲಿ ಅಕ್ಕಿಯ ಪರಿಧಿಯಲ್ಲಿ ಜೀವನಾವಶ್ಕ ವಸ್ತುವಿನ ಪರಿಮಿತ ಲಭ್ಯತೆ, ಖರ್ಚು ಭರಿಸಲು ಕಷ್ಟಸಾಧ್ಯವಾಗಿರುವುದು, ಇರುವ ಸಂಪನ್ಮೂಲಗಳು ಪರಿಮಿತ ಕಾಲದವರೆಗೆ ಮಾತ್ರ ತಾಳಿಕೊಳ್ಳಲು ಶಕ್ಯವಿರುವುದು ಇತ್ಯಾದಿ ಇವೆ. ನೆಂಟರ ಪರಿಧಿಯಲ್ಲಿ ಪ್ರೀತಿ ವಾತ್ಸಲ್ಯ, ಜೊತೆಗೂಡಿ ಇರುವುದರಿಂದ ಲಭಿಸುವ ಸಂತೋಷ, ರಕ್ತ ಸಂಬಂಧಿಗಳನ್ನು ಬಿಟ್ಟಿರಲಾರದ ಕರ್ತವ್ಯ ಪ್ರಜ್ಞೆ ಇವು ಇವೆ. ಈ ಎರಡೂ ಪರಿಧಿಗಳು ನಮ್ಮ ಮನಸ್ಸಿನಲ್ಲಿ ಒಮ್ಮೆಗೇ ಕ್ರಿಯಾಶೀಲವಾಗುವುದರಿಂದ ಅವು ಸಮ್ಮಿಳಿತಗೊಳ್ಳುವು ಅನಿವಾರ್ಯವಾಗುತ್ತದೆ. ಒಂದು ಉತ್ತಮ ಸಂಮೇಳ ರೂಪುಗೊಳ್ಳುವುದೇ ನಮಗೆ ಗಾದೆಯನ್ನು ಅರ್ಥೈಸಲು ಮತ್ತು ಬಳಸಲು ಪರಚೋದಿಸುವ ಅಂಶ. ಇಂತಹ ಸಂಮೇಳವು ಸಾಧ್ಯವಾಗದಿದ್ದರೆ ಗಾದೆಯನ್ನು ಅರ್ಥೈಸುವಲ್ಲಿ ನಾವು ವಿಫಲರಾಗುತ್ತೇವೆ (ಟರ್ನರ್,ಪು5). ವೆರಡೂ ಪರಿಧಿಗಳು ಸಮ್ಮಿಳಿತಗೊಂಡ ಪರಿಧಿಯಲ್ಲಿ (ಇಲ್ಲಿ ಸಾರ್ವತ್ರಿಕ ಪರಿಧಿಯ ನಿರ್ವಚನವನ್ನು ಪ್ರತ್ಯೇಕವಾಗಿ ಹೇಳಿಲ್ಲ) ಪ್ರೀತಿ ವಾತ್ಸಲ್ಯ, ಕೂಡು ಸಂತೋಷ, ಕರ್ತವ್ಯ ಪ್ರಜ್ಞೆ, ಸಂಪನ್ಮೂಲ ಕೊರತೆ, ಸಹಿಸುವ ಕಷ್ಟ ಇವೆಲ್ಲವೂ ಇವೆ. ಈ ಸಮ್ಮಿಳಿತ ಪರಿಧಿಯು ನಿರ್ದಿಷ್ಟ ಸಂದರ್ಭವನ್ನು ಸಮರ್ಥವಾಗಿ ಅರ್ಥ ಮಾಡಿಸುತ್ತದೆ ಎಂಬುದು ಸಂಮೇಳ ಸಿದ್ಧಾಂತಕಾರರ ಅಭಿಪ್ರಾಯ. ಇಲ್ಲಿ ಅಕ್ಕಿ ಎಂದರೆ ಅಕ್ಕಿಯೇ ಆಗಬೇಕಿಲ್ಲ; ದುಡ್ಡು, ತನ್ನ ಸುಖ, ಹಂಚಿಕೊಳ್ಳ ಬೇಕಾದ ಸೌಲಭ್ಯಗಳು, ಪರಿಮಿತ ಸಂಪನ್ಮೂಲಗಳು ಇಂತಹವೆಲ್ಲ ಪರಿಧಿಯಲ್ಲಿ ಬರುತ್ತವೆ. ಹಾಗೆಯೇ ನೆಂಟರು ಎಂದರೂ ಸ್ನೇಹಿತರು, ಅತಿಥಿಗಳು, ಉಪಚರಿಸಲೇ ಬೇಕಾಗಿ ಬರುವ ಆಗಂತುಕರು ಇವರೆಲ್ಲರನ್ನೂ ಉದ್ದೇಶಿಸಿದೆ. ಹೀಗೆ ಇದು ನಿರ್ದಿಷ್ಟವು ಸಾರವತ್ರಿಕ ಎಂಬ ರೂಪಕವಾಗುತ್ತದೆ ಎಂಬುದು ಇನ್ನೊಂದು ಅಭಿಪ್ರಾಯ. ಇಲ್ಲಿ ಲಕ್ಷ್ಯ ಪರಿಧಿಯಲ್ಲಿ ಅಕ್ಕಿ, ನೆಂಟರು, ನೆಂಟರು ಬಂದಾಗಿನ ಕಷ್ಟ ಇವು ಇವೆ.  ಮೂಲ ಪರಿಧಿಯಲ್ಲಿ ಸಂದರ್ಭದಲ್ಲಿ ವಿವಕ್ಷಿತ ವ್ಯಕ್ತಿ,, ಅವನ ಮನೆಗೆ ಬಂದ ಅತಿಥಿ, ತನ್ನಲ್ಲಿರುವ ಅಲ್ಪ ಸಂಪನ್ಮೂಲವನ್ನು ಹಂಚಿಕೊಳ್ಳಬೇಕಾದ ಅನಿವಾರ್ಯತೆ ಇವು ಇವೆ. ಹೀಗಿದ್ದರೂ ಇಲ್ಲಿ ಪರಿಕಲ್ಪನಾತ್ಮಕ ರೂಪಕ ಪ್ರತಿಪಾದಕರ ಅಭಿಪ್ರಾಯ ಮತ್ತು ಸಂಮೇಳ ಸಿದ್ಧಾಂತಕಾರರ ಅಭಿಪ್ರಾಯಗಳು ಪರಸ್ಪರ ಬಹಿಷ್ಕೃತಗಳಾಗಿರದೆ ಪೂರಕಗಳಾಗಿವೆ ಎಂಬದು ಸ್ಪಷ್ಟ.
ಇದರ ಇಂಗ್ಲಿಷ್ ಸಮಾನಗಾದೆಯನ್ನು ಗಮನಿಸಬಹುದು. ಇದರಲ್ಲಿ ಅಕ್ಕಿಯೂ ಇಲ್ಲ, ನಂಟರೂ ಇಲ್ಲ. ಬದಲಾಗಿ ಪ್ರೀತಿ ಮತ್ತು ಜೇಬಿಗೆ ಕೈಹಾಕುವುದು ಇವೆ. ಅದೇ ಅರ್ಥವನ್ನು ಧ್ವನಿಸುತ್ತಿದ್ದರೂ, ಅದೇ ರೀತಿಯ ಸಂದರ್ಭಗಳಲ್ಲಿ ಬಳಸಬಹುದಾಗಿದ್ದಾದರೂ  ಇಲ್ಲಿಯ ಒತ್ತು ಬೇರೆ. ವ್ಯಾಪಾರೀ ಮನೋಭಾವ ಇಲ್ಲಿ ಎದ್ದು ಕಾಣುವ ಅಂಶ. ಇದಕ್ಕೆ ಸಮಾನಾರ್ಥಕವಾಗಿರುವ ಇನ್ನೊಂದು ಕನ್ನಡ ಗಾದೆಯಲ್ಲಿ ಜೇಬಿನ ಬದಲು ಮೀನಿನ ಬುಟ್ಟಿ ಇದೆ. ಹೆಚ್ಚು ಕಡಿಮೆ ಒಂದೇ ಅರ್ಥವಿರುವ ಈ ಭಿನ್ನ ರೂಪ ಗಾದೆಗಳು ಗಾದೆಗಳ ಸೃಷ್ಟಿ ಮತ್ತು ಬಳಕೆ ಹೇಗೆ ಸಂಸ್ಕೃತಿ ಮತ್ತು ನಾಗರೀಕತೆ ನಿರ್ದಿಷ್ಟ ವಾಗಿರುತ್ತವೆ ಎಂಬುದನ್ನು ಘನತರವಾಗಿ ವಿಶದೀಕರಿಸುತ್ತವೆ.
2  ಅಡಿಕೆ ಉಡಿಯಲ್ಲಿ ಹಾಕಬಹುದು, ಮರವಾದ ಮೇಲೆ ಕೂಡದು     
                        ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ
                        A colt you may break but an old horse you never can
                        Best to bend while a twig
ಎಲೆ ಅಡಿಕೆ ಬಾಳೆಹಣ್ಣು ಇಂತಹವನ್ನು ಹಿರಿಯರು ಕಿರಿಯರಿಗೆ ಕೊಡುವಾಗ ಕಿರಿಯರ ಉಡಿಯಲ್ಲಿ ಹಾಕುವುದು ಸಂಪ್ರದಾಯ. ಅಡಿಕೆಯನ್ನು ಹೀಗೆ ಉಡಿಯಲ್ಲಿ ಹಾಕಬಹುದು. ಅಡಿಕೆ ಶ್ರೇಷ್ಠ ಆದ್ದರಿಂದ ಅಡಿಕೆ ಮರ ಇನ್ನೂ ಶ್ರೇಷ್ಠ ಎಂದು ಬಗೆದು ಅಡಿಕೆ ಮರವನ್ನು ಉಡಿಯಲ್ಲಿ ಹಾಕಲು ಸಾಧ್ಯವಿಲ್ಲ ಎಂಬುದು ಇಲ್ಲಿರುವ ವಾಚ್ಯಾರ್ಥ. ಸಾಮಾಜಿಕ ಸಂದರ್ಭದಲ್ಲಿ ಒಬ್ಬನಿಗೆ ನೋವು ಉಂಟಾದರೆ ಅದು ಸಣ್ಣ ಮಟ್ಟದ್ದಾದರೆ ಅದಕ್ಕೆ ಪ್ರತಿರೋಧ ಒಡ್ಡದೆ ಅಲಕ್ಷಿಸಿ ಸಂಬಂಧಗಳನ್ನು ಕಾಯ್ದುಕೊಳ್ಳಬಹುದು. ಆದರೆ ನೋವುಂಟು ಮಾಡಬೇಕೆಂದೇ ಮಾಡಿದ ದೊಡ್ಡ ಮಟ್ಟದ ನೋವನ್ನು ಸಹಿಸಿಕೊಳ್ಳ ಸಾಧ್ಯವಿಲ್ಲ. ಅದನ್ನು ಪ್ರತಿರೋಧಿಸಿ ಮುಂದೆ ಹಾಗಾಗದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಅಡಿಕೆ ತಿಂದು ಜೀರ್ಣಿಸಿಕೊಳ್ಳಬಹುದಾದ್ದು; ಅಡಿಕೆ ಮರ ತಿನ್ನುವಂತಹದಲ್ಲ ಮತ್ತು ಅಂತಹ ಅಡಿಕೆಗಳ ರಾಶಿಯನ್ನೇ ನಾಳೆ ನೀಡುವಂತಹದು. ಇಲ್ಲಿ ಸಸ್ಯಗಳು ಪ್ರಾಣಿಗಳು ಎಂಬ ಮತ್ತು ನಿರ್ದಿಷ್ಟವು ಸಾರ್ವತ್ರಿಕ ಎಂಬ ರೂಪಕಗಳು ಬಳಕೆಯಾಗಿವೆ. ಅಡಿಕೆಗೆ ಸಂವಾದಿಯಾಗಿ ಸಣ್ಣ ನೋವು ಸಮಾನ ಉಪಕಾರಗಳು ಇಂತಹವೂ ಮರಕ್ಕೆ ಸಂವಾದಿಯಾಗಿ ಇವುಗಳ ಬೃಹತ್-ರೂಪಗಳೂ ಇವೆ. ಮರದ ಬೃಹತ್-ರೂಪದಿಂದಾಗಿ ಅಡಿಕೆಯಂತೆ ಕೈಯಲ್ಲಿ ಹಿಡಿಯಲಾಗದು.
ಇಂಗ್ಲಿಷ್ ಸಮಾನಾರ್ಥಕ ಗಾದೆಗಳನ್ನು ಗಮನಿಸಿ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಎಂಬುದಕ್ಕೆ  Best to bend while a twig ಎಂಬುದು ಭಾಷಾಂತರವೇ ಆಗಿದೆ. ಸಸ್ಯಗಳು ಪ್ರಾಣಿಗಳು ರೂಪಕದಿಂದ ಇದು ಮನುಷ್ಯರಿಗೆ ಅನ್ವಯವಾಗುತ್ತದೆ ಮತ್ತು ಸಾರ್ವತ್ರಿಕವು ನಿರ್ದಿಷ್ಟ ರೂಪಕದಿಂದ ಇದು ಗಾದೆಯು ಅದನ್ನು ಬಳಸಿದ ಸಾಮಾಜಿಕ ಸಂದರ್ಭದಲ್ಲಿ ಅರ್ಥವಾಗುತ್ತೆ. ಪಾಶ್ಚಾತ್ಯ ಸಂದರ್ಭದಲ್ಲಿಯೂ ಭಾರತೀಯ ಪರಂಪರೆಯಲ್ಲಿಯೂ ಸಸ್ಯಗಳಿಗಿರುವ ಸಮಾನ ಪ್ರಾಮುಖ್ಯ ಮತ್ತು ಸಮಾನ ಪರಿಕಲ್ಪನೆಗಳನ್ನೂ ಇದು ಎತ್ತಿ ತೋರಿಸುತ್ತದೆ.
ಇನ್ನೊಂದು ಸಮಾನಾರ್ಥಕ ಗಾದೆಯಾದ a colt you may break but an old horse you never can ಎಂಬುದರ ಪರಿ ಬೇರೆ. ಕುದುರೆ ಮರಿಯನ್ನು ಪಳಗಿಸಬಹುದು; ದೊಡ್ಡ ಕುದುರೆಯನ್ನು ಪಳಗಿಸಲಾದೀತೆ ಎಂಬುದು ಇದರ ಭಾಷಾಂತರ. ಉಳುವುದು, ಗಾಡಿಗೆ ಕಟ್ಟುವುದು ಇತ್ಯಾದಿ ಕಾರ್ಯಗಳಿಗೆ ಇಂಗ್ಲೇಂಡಿನಂತಹ ದೇಶದಲ್ಲಿ ಕುದುರೆಗಳನ್ನು ಬಳಸುತ್ತಾರೆ. ಆದ್ದರಿಂದ ಅಲ್ಲಿಯ ಸಂಸ್ಕೃತಿಯಲ್ಲಿ ಕುದುರೆಗಳಿಗೆ ವಿಶೇಷ ಸ್ಥಾನ. ಕುದುರೆಯನ್ನು ನೀರಿಗೊಯ್ಯಬಹುದು ನೀರ್ಗುಡಿಸಲಾದೀತೆ ಎಂಬ ಇನ್ನೊಂದು ಗಾದೆಯೂ ಈ ಅಂಶವನ್ನು ಪುಷ್ಠೀಕರಿಸುತ್ತದೆ. ಇದಕ್ಕೆ ಸಮಾನಾನುವಾದ ಕನ್ನಡದಲ್ಲಿಲ್ಲ. ಭಾರತೀಯ ಪರಂಪರೆಯಲ್ಲಿ ತತ್ಸಮಾನ ಕಾರ್ಯಗಳಿಗೆ ಎತ್ತುಗಳನ್ನು ಬಳಸಳಾಗುತ್ತಿತ್ತು. ಆದ್ದರಿಂದ ಆ ಗಾದೆಗೆ ಸ್ಥಾನವಿಲ್ಲ. ಅಲ್ಲದೆ ಎತ್ತಿಗಿಂತ ದನಕ್ಕೆ ಪ್ರಾಮುಖ್ಯ ಹೆಚ್ಚು ಮತ್ತು ದನ ಪೂಜ್ಯಸ್ಥಾನದಲ್ಲಿದ್ದು ಅದನ್ನು ಹೀಗಳೆಯುವಂತಹ ಹೇಳಿಕೆಗೆ ಅವಕಾಶವಿಲ್ಲ. ಸಾಂಸ್ಕೃತಿಕ ವಿಭಿನ್ನತೆಯು ಹೇಗೆ ಗಾದೆಗಳ ರೂಪಣೆಯನ್ನು ಪ್ರಭಾವಿಸುತ್ತವೆ ಎಂಬುದಕ್ಕೆ ಇದು ಇನ್ನೊಂದು ಉದಾಹರಣೆ.
3  ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು
                                    A wounded reputation can seldom be cured
ಇದೂ ಅಡಿಕೆಯನ್ನು ಕೇಂದ್ರಪ್ರಜ್ಞೆಯನ್ನಾಗಿ ಬಳಸಿರುವ ಇನ್ನೊಂದು ಗಾದೆ. ಗಾತ್ರದಲ್ಲಿಯೂ ಬೆಲೆಯಲ್ಲಿಯೂ ಅಡಿಕೆ ಬಹಳ ಸಣ್ಣದು ಮತ್ತು ಆನೆ ಅಗಾಧವಾದದ್ದು. ಆದರೆ ಸಾಂಸ್ಕೃತಿಕವಾಗಿ ಕೆಲವು ಸಂದರ್ಭಗಳಲ್ಲಿ ಅಡಿಕೆಯನ್ನೇ ಕೊಡಬೇಕಾದುದಿರುತ್ತದೆ. ಉದಾಹರಣೆಗೆ ಸಮಾರಂಭದೂಟದ ನಂತರ ವೀಳ್ಯದೆಲೆಯ ಜೊತೆಗೆ, ಫಲತಾಂಬೂಲದಲ್ಲಿ, ಪೂಜೆಯಲ್ಲಿ ನೈವೇದ್ಯಾರ್ಥ ಇತ್ಯಾದಿ. ಇಂತಹ ಸಂದರ್ಭಗಳಲ್ಲಿ ಒಂದು ಅಡಿಕೆಯನ್ನು ನೀಡಲಾಗದಿದ್ದರೆ ಯಜಮಾನ ಅವಮಾನಕ್ಕೊಳಗಾಗುತ್ತಾನೆ. ಅಥವ ಅಡಿಕೆ ಪಡೆಯದವ ಅವಮಾನಿತನಾದೆನೆಂದು ಭಾವಿಸುತ್ತಾನೆ. ಹೀಗೆ ಶ್ರೀಮಂತಿಕೆಯಿಂದ ಬೀಗುವ ವ್ಯಕ್ತಿಯೊಬ್ಬ ನಾನು ಆನೆಯನ್ನೇ ಕೊಡುತ್ತೇನೆಂದರೂ ಆದ ಅವಮಾನ ನೀಗುವುದಿಲ್ಲ. ಅಥವ ಸತ್ಕಾರಾರ್ಥ ಅಡಿಕೆಯನ್ನು ನೀಡಬೇಕಾದ ಸಂದರ್ಭದಲ್ಲಿ ಅಡಿಕೆಯನ್ನು ನೀಡದೆ ಒಬ್ಬನನ್ನು ಅವಮಾನಿಸಿದರೆ ವಜ್ರ ಕಿರೀಟ ಕೊಟ್ಟಾಕ್ಷಣ ಮಾನ ಬರುವುದಿಲ್ಲ. 
ಇಲ್ಲಿ ಅಡಿಕೆಯನ್ನುಸಾಮಾಜಿಕ ಸಂಸ್ಕೃತಿಯಲ್ಲಿ ಇರುವ ಒಂದು ಮೌಲಿಕ ವಸ್ತುವನ್ನಾಗಿ ಕಲ್ಪಿಸಲಾಗಿದೆ ಮತ್ತು ಆನೆಯನ್ನು ಭೌತಿಕ ಸಂಪತ್ತನ್ನಾಗಿ ಪರಿಕಲ್ಪಿಸಿದೆ. (ಆನೆ ಇಂದ್ರನ ವಾಹನ ಎಂಬುದನ್ನು ನೆನೆಯಬಹುದು). ಮೌಲ್ಯಹೀನತೆಯಿಂದ ಕಳೆದುಕೊಂಡ ಮಾನವನ್ನು ಎಷ್ಟೇ ಭೌತಿಕ ಸಂಪತ್ತು ಮರಳಿಸಲಾರದು ಎಂಬುದು ಇಲ್ಲಿ ನಿಹಿತವಾಗಿರುವ ಅರ್ಥ. ಗಾದೆಯನ್ನು ಪೂರ್ಣವಾಗಿ ಹೀಗೆ ಹೇಳಬಹುದು: (ವ್ಯಕ್ತಿಗೆ) ಅಡಿಕೆಯಿಂದಾಗಿ ಹೋದ ಮಾನ ಆನೆ ಕೊಟ್ಟರೂ ಬಾರದು.
ಇಂಗ್ಲಿಷ್ ಗಾದೆಯು ಗೌರವವನ್ನು ಒಂದು ಪ್ರಾಣಿಯನ್ನಾಗಿ ಕಲ್ಪಿಸಿದೆ. ಇದಕ್ಕೆ ಗಾಯವಾದರೆ ಗುಣಪಡಿಸಲಾಗದು ಎಂದು ಹೇಳುತ್ತಿದೆ. ಅಡಿಕೆಯ ಪ್ರಸಕ್ತಿ ಇಲ್ಲಿಲ್ಲ. ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಅಡಿಕೆಗೆ ಯಾವುದೇ ಮೌಲಿಕ ಸ್ಥಾನವಿಲ್ಲದಿರುವುದನ್ನಿ ಇಲ್ಲಿ ಸ್ಮರಿಸಬಹುದು.
4  ಅರಗಿನಂತೆ ತಾಯಿ ಮರದಂತೆ ಮಕ್ಕಳು
                                      Many a good cow had but a bad calf
ಅರಗು ಒಟ್ಟಾರೆಯಾಗಿ ಮರದಿಂದ ದೊರಕುವ ಒಂದು ಉಪಯುಕ್ತ ವಸ್ತು. ದೊರಕಿದನಂತರ ಅರಗು ತನ್ನನ್ನು ಸುಟ್ಟುಕೊಂಡು ಕರಗಿಸಿಕೊಂಡು ಬೀಗಗಳನ್ನು ಭದ್ರ ಪಡಿಸಲು, ಬಟ್ಟೆಗಳಿಗೆ ಬಣ್ಣ ಹಾಕಲು ಉಪಯೋಗಕ್ಕೆ ಬರುತ್ತದೆ. ಮರವನ್ನು ಆಹಾರಕ್ಕಾಗಿ ಅವಲಂಬಿಸಿದ ಕೀಟ ಹೊರಹಾಕಿದ ಅಂಟು ಇದಾಗಿದ್ದು ಇದನ್ನು ಮರದಿಂದ ಬೇರ್ಪಡಿಸಿ ಉಪಯೋಗಿಸುತ್ತೇವೆ. ಅಂದರೆ ಅರಗು ಮರಕ್ಕೆ ಹತ್ತಿದ ಕೀಟಗಳು ಹೊರಸೂಸುವ ಅಂಟು. ಕೀಟಗಳು ಮರ ತಯಾರಿಸಿದ ಆಹಾರವನ್ನು ಕೊಂಬೆಗಳಿಂದ ಸೆಳೆದು ತಿಂದು ಅರಗನ್ನು ಉತ್ಪಾದಿಸುತ್ತವೆ. ಅರಗೂ ಪರೋಪಕಾರಿ; ಮರವೂ ಪರೋಪಕಾರಿ. ಹೀಗೆ ಅರಗಿನಂತೆ ತಾಯಿ ಮರದಂತೆ ಮಕ್ಕಳು ಎಂದರೆ ತಾಯಿಯಂತೆ ಮಕ್ಕಳು ಎಂದರ್ಥವಾಗುತ್ತದೆ. (ಗಾದೆಯ ಬಳಕೆಯನ್ನು ಸಂದರ್ಭವನ್ನು ನಾನು ನೋಡಿಲ್ಲ). ಇದು ಯಥಾ ರಾಜಾ ತಥಾ ಪ್ರಜಾ ಎಂಬಂತೆ. ಆದಾಗ್ಯೂ ತಂದೆಯಂತೆ ಮಕ್ಕಳು ಎಂಬಂತಲ್ಲದೆ, ತಾಯಿಯಂತೆ ಮಕ್ಕಳು ಎಂದು ಹೇಳುತ್ತಿದೆ. ಇದು ಮಾತೃಪ್ರಧಾನ ಕುಟುಂಬವಿರುವ ಸಾಮಾಜಿಕ ಸಂದರ್ಭದಲ್ಲಿ ಬಂದಿದೆ. ಗಾದೆಗಳ ಸಾಂಸ್ಕೃತಿಕ ಮಹತ್ವವನ್ನು ಇದು ತೋರಿಸುತ್ತಿದೆ. ಸಂಪಾದಕರು ಕೊಟ್ಟಿರುವ ಸಮಾನಾರ್ಥಕ ಗಾದೆ ಬೇರೆಯೇ ಅರ್ಥವನ್ನು ನೀಡುತ್ತಿದೆ. ಅರಗಿನಂತೆ ತಾಯಿ ಮರದಂತೆ ಮಕ್ಕಳು ಎಂಬುದಕ್ಕೆ  Many a good cow had but a bad calf ಎಂಬುದು ಸಮಾನಾರ್ಥಕ ಗಾದೆಯಲ್ಲ. ಇದಕ್ಕೆ ಸರಿಯಾದ ಗಾದೆ Lke mother Like daughter ಎಂಬುದಾಗಬಹುದೆಂದು ಕಾಣುತ್ತದೆ.
ಗಾದೆ ಎಲ್ಲರಿಗೂ ಒಂದೇ ರೀತಿಯಲ್ಲಿ ಅರ್ಥವಾಗಬೇಕೆಂದಾಗಲೀ ಗಾದೆಗಳ ಎಲ್ಲ ಸಂಗ್ರಹಗಳಲ್ಲಿಯೂ ಒಂದೇ ಅರ್ಥವನ್ನು ನೀಡಬೇಕೆಂದಾಗಲೀ ಹೇಳಲಾಗುವುದಿಲ್ಲ. ಒಂದು ಗಾದೆಗೆ ಬೇರೆ ಬೇರೆ ಸಂಗ್ರಾಹಕರು ಬೇರೆಬೇರೆ ಅರ್ಥಗಳನ್ನು ಸೂಚಿಸಿರುವುದು ಅಸಾಮಾನ್ಯವೇನಲ್ಲ. ಲೀಸಾ ಜಿ ಬಿ ಹೆರನಿನ್  ಇವರು ಫಿನ್ನಿಶ್ ಗಾದೆ Lapset tulee leipineen [Children come with bread] ಎಂಬ ಗಾದೆಗೆ ಹೀಗೆ ಭಿನ್ನ ಅರ್ಥ ಸೂಚನೆಗಳಿರುವುದನ್ನು ಚರ್ಚಿಸಿದ್ದಾರೆ. ಗಾದೆಗಳಿಗೆ ಅವುಗಳನ್ನು ಅರ್ಥೈಸುವವರು ನೀಡುವ ಅರ್ಥವಲ್ಲ, ಸಮಾಜದಲ್ಲಿ  ಭಾಷಿಕರು ಬಳಸುವ ಅರ್ಥ ಎಂಬುದು ಇವನ ಅಭಿಪ್ರಾಯ (ಲೀಸಾ,ಪು 18).
ಈ ಗಾದೆಯಲ್ಲಿ ಸಾರ್ವತ್ರಿಕವು ನಿರ್ದಿಷ್ಟ, ಮತ್ತು ಮಾನವರು ಸಸ್ಯಗಳು ಎಂಬ ರೂಪಕಗಳು ಬಳಕೆಯಾಗಿವೆ. ಮೂಲ ಪರಿಧಿ ಮತ್ತು ಲಕ್ಷ್ಯ ಪರಿಧಿಗಳ ನಡುವಣ ನಕ್ಷೀಕರಣವು ಸ್ವಯಂ ಸ್ಪಷ್ಟವಾಗಿವೆ. ಆದರೆ ಸಮ್ಮಿಳಿತಗಳ ಸಿದ್ಧಾಂತದ ಪ್ರಕಾರ ಻ರ್ಥೈಸಿದಾಗ ಈ ಗಾದೆ ಹೆಚ್ಚು ಸ್ಪಷ್ಟವಾಗುತ್ತದೆ.
ಇದರ ಅಭಿಪ್ರಾಯವನ್ನು ಸಮ್ಮಿಳಿತಗಳ ಸಿದ್ಧಾಂತದ ಪ್ರಕಾರ ಹೀಗೆ ವಿವರಿಸಬಹುದು. ಒಂದು ಕಡೆಯಲ್ಲಿ ಅರಗು ಮತ್ತು ಮರ ಇವೆ. ಇನ್ನೊಂದು ಕಡೆ ತಾಯಿ ಮತ್ತು ಮಕ್ಕಳು ಇವೆ. ಮೊದಲ ಪರಿಧಿಯಲ್ಲಿ (ಮೊದಲ ಮಾನಸಿಕ ಅವಕಾಶದಲ್ಲಿ) ಅರಗು, ತಾನು ಕರಗಿ ಬೀಗವನ್ನು ಭದ್ರಪಡಿಸುವುದು, ಈ ಪ್ರಕ್ರಿಯೆಯಲ್ಲಿ ಅರಗು ತನ್ನನ್ನು ತಾನು ಕಳೆದುಕೊಳ್ಳುವುದು, ಮರ, ತನ್ನ ಫಲ-ಪುಷ್ಪ-ನೆರಳುಗಳನ್ನು ಎಲ್ಲರಿಗೆ ನೀಡುವುದು, ಅವರಿಂದ ಪ್ರತಿಫಲಾಪೇಕ್ಷೆ ಇಲ್ಲದಿರುವುದು – ಇವು ಇವೆ. ಎರಡನೆಯ ಪರಿಧಿಯಲ್ಲಿ (ಎರಡನೆಯ ಮಾನಸಿಕ ಅವಕಾಶದಲ್ಲಿ) ತಾಯಿ, ಸ್ವಾರ್ಥ ತ್ಯಾಗ, ಮಕ್ಕಳ ಸೇವೆ, ಪ್ರತಿಫಲಾಪೇಕ್ಷೆ ಇಲ್ಲದಿರುವುದು, ಮಕ್ಕಳು, ಆಶ್ರಯ ನೀಡುವುದು, ಸೌಲಭ್ಯಗಳನ್ನು ಒದಗಿಸುವುದು – ಇವು ಇವೆ. ಇವೆರಡೂ ಸಮ್ಮೇಳಗೊಂಡ ಸಮ್ಮೀಳಿತದಲ್ಲಿ ತಾಯಿ, ಮಗ, ಸ್ವಾರ್ಥ ತ್ಯಾಗ, ಸೇವೆ, ಸೌಲಭ್ಯ ಒದಗಿಸುವುದು, ಆಶ್ರಯ ನೀಡುವುದು – ಇವು ಉಂಟಾಗುತ್ತವೆ. ಇದರಿಂದಾಗಿ ಗಾದೆ ನಿರ್ದಿಷ್ಟ ಸಂದರ್ಭದಲ್ಲಿ ಅರ್ಥವಾಗುತ್ತದೆ.
ಕೃತಿಯ ಸಂಪಾದಕರು ನೀಡಿರುವ ಇಂಗ್ಲಿಷ್ ಪರ್ಯಾಯವು ಇಲ್ಲಿಯೂ ಸಮಾನಾರ್ಥಕ ವಾಗಿರುವಂತೆ ಕಾಣುವುದಿಲ್ಲ. ಹೀಗಿದ್ದರೂ ಗಾದೆಯಲ್ಲಿ ಅರಗು ಮತ್ತು ಮರಗಳಿಲ್ಲದೆ ಹಸು ದನಗಳಿರುವುದು ಎದ್ದು ಕಾಣುವಂತಹದು. ಸಸ್ಯಗಳು ಮಾನವರು ಬದಲಿಗೆ ಪ್ರಾಣಿಗಳು ಮಾನವರು ರೂಪಕ ಇಲ್ಲಿ ಬಳಕೆಯಾಗಿದೆ. ಅರಗು ಜಾರ್ಖಂಡಿನಲ್ಲಿ ಬೆಳೆಯುವ ವಿಶಿಷ್ಟ ಸಸ್ಯೋಪನ್ನವಾಗಿದ್ದು ಭಾರತದ ಇತರೆಡೆಗಳಲ್ಲೂ ಹಿಂದಿನಿಂದಲೂ ಬಳಕೆಯಾಗುತ್ತಿರುವುದು ಬಹುಶಃ ಇದಕ್ಕೆ ಕಾರಣ (ವಿಕಿಪೀಡಿಯಾ https//en.m.wikipedia.org).
ಇಂಗ್ಲೀಷಿನ ಎರಡು ಗಾದೆಗಳನ್ನು ಪರಿಶೀಲಿಸಿದರೂ (Many a good cow had but a bad calf & Lke mother Like daughter ) ಅರಗು ಮತ್ತು ಮರಗಳ ರೀತಿಯ ರೂಪಕಗಳನ್ನ ಅವು ಬಳಸಿಲ್ಲದಿರುವುದು ಕಂಡು ಬರುತ್ತದೆ. ಅವು (ಇಂಗ್ಲಿಷ್ ಗಾದೆಗಳು) ನೀರಸ ವಾಕ್ಯಗಳಂತೆ ಗೋಚರಿಸುತ್ತಿದ್ದು, ರೂಪಕಗಳಿಂದೊದಗುವ ಸೌಂದರ್ಯವನ್ನೂ, ಸ್ಪಷ್ಟತೆಯನ್ನೂ ಕನ್ನಡ ಗಾದೆಯಲ್ಲಿ ಕಾಣಬಹುದು. ರೂಪಕಗಳ ಸೃಷ್ಟಿಯಲ್ಲಿ ಸಂಸ್ಕೃತಿ ಮತ್ತು ನಾಗರೀಕತೆಗಳ ಮಹತ್ವವನ್ನು ಈ ಗಾದೆ ಎತ್ತಿ ತೋರಿಸುತ್ತಿದೆ ಎನ್ನಬಹುದು.
5  ಉಳಿ ಸಣ್ಣದಾದರೂ ಮರ ಕಡಿಯದೆ ಬಿಡದು
                                                     Little strokes fell great oaks
ಈ ಗಾದೆಯಲ್ಲಿ ಮರದ ಪ್ರಸಕ್ತಿ ಇದ್ದರೂ ಉಳಿಗೆ ಪ್ರಧಾನ ಪಾತ್ರ. ಉಳಿ ಕಡಿಯುವ ಕೆಲಸವನ್ನು ಮಾಡಿಯೇ ಮಾಡುತ್ತದೆ. ದೊಡ್ಡ ಉಳಿಯಾದರೆ ಕೆಲಸ ಬೇಗ ಮುಗಿಯುತ್ತದೆ. ಸಣ್ಣದಾದರೆ ನಿಧಾನವಾಗುತ್ತದೆ. ಇಲ್ಲಿ ಉಳಿ ಕಡಿಯುವ ಮನೋಭಾವಕ್ಕೆ ಅಂದರೆ ಹಾಳುಗೆಡಹುವ ಕಾರ್ಯಕ್ಕೆ ರೂಪಕ. ಮರ ಪರೋಪಕಾರಿಯಾದ್ದರಿಂದ ಸಜ್ಜನರಿಗೆ ರೂಪಕ. ಸಮಾಜವನ್ನು ಹಾಳುಗೆಡಹುವ ಜನ ಸಮಾಜದಲ್ಲಿದ್ದೇ ಇರುತ್ತಾರೆ. ಇಂತಹ ಜನರು ಸಣ್ಣದಾಗಿ ಇಂತಹ ಕೆಲಸವನ್ನೇನಾದರೂ ಮಾಡಿದಾಗ ಕ್ಷಮ್ಯವೆಂದೆಣಿಸಿ ಹಾಗೆಯೇ ಬಿಟ್ಟರೆ ಮುಂದೆ ಅವನು ದೊಡ್ಡ ಸಮಾಜ ಘಾತುಕನಾಗುತ್ತಾನೆ. ಬೇರ ತರಹದ ಸಾಂದರ್ಭಿಕ ಅರ್ಥಗಳೂ ಇದಕ್ಕೆ ಬರುವುವು. ಅಭಿಮನ್ಯು ಬಾಲಕ. ಆದರೆ ಕೌರವರ ಸೇನೆಯನ್ನೇ ಉರುಳಿಸಿದ. ಉಳಿ ಸಣ್ಣದಾದರೂ ಮರವನ್ನು ಕಡಿಯದೇ ಬಿಡದು.
ಇಲ್ಲಿರುವ ಇದರ ಇಂಗ್ಲಿಷ್ ರೂಪವೂ ಉತ್ತಮ ಭಾಷಾಂತರವಾಗಿ ಕಂಡು ಬರುತ್ತದೆ. ಉಳಿ ಮತ್ತು ಮರಗಳು ಎರಡೂ ಸಂಸ್ಕೃತಿಗಳಲ್ಲಿವೆ. ಒಂದೇ ತರಹದ ಕೆಲಸಗಳನ್ನು ಮಾಡುತ್ತವೆ. ಒಂದೇ ರೀತಿಯ ಸಂಕೇತಾರ್ಥಗಳನ್ನು ಸಮಾಜದಲ್ಲಿ ಪಡೆದಿವೆ. ಹೀಗಾಗಿ ತತ್ಸಮಾನ ಗಾದೆಗಳಾಗಿವೆ.
ಇದೇ ಸಂಗ್ರಹದಲ್ಲಿರುವ ಇತರ ಸಸ್ಯ ಸಂಬಂಧೀ ಗಾದೆಗಳು ಇವು: (1)ಆನೆ ಕೈಲಿ ಕಬ್ಬು ಕೊಟ್ಟ ಹಾಗೆ (As irrecoverable as a lump of butter in greyhound’s mouth), (2)ಕಡಲೆಗೆ ಮುಂದು ಕಡಿವಾಣಕ್ಕೆ ಹಿಂದು   [ಕೆಲಸಕ್ಕೆ ಕರೀ ಬೇಡ, ಊಟಕ್ಕೆ ಮರೀಬೇಡ (He has two stomachs to eat but one to work), (3)ಎತ್ತಿನ ಮುಂದೆ ತೆಂಗಿನ ಕಾಯಿ ಹಾಕಿದ ಹಾಗೆ  (It is like nuts to an ape) (4)ಕಬ್ಬು ಸಿಹಿ ಎಂದು ಬುಡದವರೆಗೆ ಅಗಿ ಬಾರದು ( ದ್ರಾಕ್ಷಿ ಸಿಹಿ ಎಂದು ಬಳ್ಳಿ ಸಹ ತಿನ್ನಬಾರದು The orange that is squeezed hard yields bitter juice), (5)ಕಬ್ಬು ಡೊಂಕಾದರೆ ಸವಿ ಡೊಂಕೆ (Black plums may eat as sweet as white), (6)ಕಳ್ಳ ಕಳ್ಳಗೆ ನಂಟು, ಹುಳಿ ಮೆಣಸಿಗೆ ನಂಟು(Birds of the same feather flock together), (7)ಕುಂಬಳ ಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿಕೊಂಡ (A guilty conscience needs no accuser), (8)ತಾನಾಗಿ ಬೀಳುವ ಮರಕ್ಕೆ ಕೊಡಲಿ ಯಾಕೆ (Press not a falling man too far), (9)ತಾನು ನೆಟ್ಟ ಬೀಳು ತನ್ನೆದೆಗೆ ಹಂಬಿತು (Clouds that the sun builds up darken him), (10)ಅಡಿಕೆ ಕದ್ದವ ಆನೆ ಕದ್ದಾನು (He who steals an egg will steal an ox), (11)ನಾಗಮಲ್ಲಿಗೆ ಹೂವು ಪೂಗವಾದೀತೆ ( Every reed will not make a pipe), (12)ಫಲಕ್ಕೆ ತಕ್ಕ ಬೀಜ ನೆಲಕ್ಕೆ ತಕ್ಕ ನೀರು (As is the tree so is the fruit), (13)ಬಾಳೆ ಹಣ್ಣಿಗೆ ಗರಗಸ ಬೇಕೆ (Send not for a hatchet to break open an egg), (14)ಬೂರುಗದ ಮರವನ್ನು ಗಿಣಿ ಕಾದ ಹಾಗೆ (A watched pan is long in boiling),  (15)ಬೋರೇ ಗಿಡದಲ್ಲಿ ಕಾರೇ ಹಣ್ಣಾದೀತೆ (Can you gather figs out of thistles), (16)ಮರ ಹತ್ತಿದವನ ಕಾಲು ಕೆಳಗೆ (The higher the ape climbs the more he shows the tail), (17)ಮಲ್ಲಿಗೆ ಹೂವಿನಿಂದ ಬಾಳೆ ಹಗ್ಗ ಪಾವನವಾಯ್ತು (For the rose the thorn is plucked), (18)ಮೋಟು ಮರ ಗಾಳಿಗೆ ಮಿಂಡ (He who has nothing is frightened at nothing), (19)ಹಣ್ಣೆಲೆ ಉದುರುವಾಗ ಕಾಯ್-ಎಲೆ ನಗುವುದು (He jests at scars that has never felt a wound), (20)ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ (Best to bend while a twig).          
ಈ ಗಾದೆಗಳಲ್ಲಿ ಕಂಡು ಬರುವ ಕೆಲವು ಸಾಮಾನ್ಯ ಸಾಂಸ್ಕೃತಿಕ ಅಂಶಗಳನ್ನು ನೋಡಬಹುದು. ಹಣ್ಣೆಲೆ, ಕಾಯೆಲೆ, ಮರ,ಬೀಳು – ಇಂತಹ ಸಸ್ಯಗಳಿಗೆ ಸಾಮಾನ್ಯವಾಗಿ ಅನ್ವಯಿಸುವ ಪದಗಳು, ಅಕ್ಕಿ, ಅಡಿಕೆ, ತೆಂಗಿನ ಕಾಯಿ – ಇಂತಹ ಪೂಜೆಗೆ ಬಳಸುವ ಫಲಗಳು  (ಅಕ್ಕಿ ತೆಂಗಿನ ಕಾಯಿಗಳು ಆಹಾರ ವಸ್ತುಗಳೂ ಆಗಿವೆ. ಕಬ್ಬು, ಕಡಲೆ, ಇವೂ ಇದೇ ಗುಂಪಿಗೆ ಸೇರಿದವು.), ದ್ರಾಕ್ಷಿ, ಮೆಣಸು, ಕುಂಬಳಕಾಯಿ- ಇಂತಹ ತರಕಾರಿ ಫಲಗಳು,ನಾಗಮಲ್ಲಿಗೆ, ಪೂಗ, ಬಾಳೆ, ಬೂರಗ – ಇಂತಹ ಹೂವುಗಳು ಈ ಗಾದೆಗಳಲ್ಲಿ ಬಳಕೆಯಾಗಿವೆ. ಇವೆಲ್ಲ ಈ ನಾಡಿನ ನೆಲಜಲದಲ್ಲಿ ಹಾಸುಹೊಕ್ಕಾಗಿರುವುವಷ್ಟೇ ಅಲ್ಲ, ನಾಡಿನ ಸಂಸ್ಕೃತಿಯಲ್ಲಿ ಪ್ರಮುಖ ಪಾತ್ರವಿದೆ. ಉಳಿ, ಕೊಡಲಿ – ಇವುಗಳನ್ನು ಸಸ್ಯನಾಶನ ಪ್ರವೃತ್ತಿಯ ಪ್ರತಿನಿಧಿಗಳನ್ನಾಗಿ ಬಳಸಿದ್ದಾರೆ. (ಉಳಿ-ಕೊಡಲಿಗಳು ನಿರ್ಮಾತೃಗಳೂ ಹೌದಾದರೂ ಈ ಉಪಕರಣಗಳ ಅಂತಹ ಗುಣಸ್ವಭಾವಗಳು ಇಲ್ಲಿ ನಕ್ಷೀಕೃತವಾಗಿಲ್ಲ). ಇಂಗ್ಲಿಷ್ ಗಾದೆಗಳಲ್ಲಿ ಇವು ಇಲ್ಲದಿರುವುದು ಅಲ್ಲಿನ ಸಂಸ್ಕೃತಿಯಲ್ಲಿ ಇವುಗಳಿಗೆ ಅದೇ ಮಹತ್ತವವಿಲ್ಲದಿರುವುದರಿಂದಲೇ. ಕೆಲವು ಗಾದೆಗಳಿಗೆ ಮಾತ್ರ ಸ್ಪಷ್ಟವಾದ ಸಮಾನಾಂತರ ಭಾಷಾಂತರಗಳು ಲಭ್ಯವಿವೆ ಉದಾ. 3, 8 ಮತ್ತು 20. ಇವು ಮಾನವನ ವಿಶ್ವ ವ್ಯಾಪೀ ಸಂಸ್ಕೃತಿಯ ಪ್ರತಿನಿಧಿಗಳು. ಆದರೂ ಇವುಗಳಲ್ಲಿ ಮೊದಲನೆಯದರಲ್ಲಿ ಕನ್ನಡದಲ್ಲಿ ಎತ್ತು ಇರುವ ಕಡೆ ಇಂಗ್ಲೀಷಿನಲ್ಲಿ ಕೋತಿ ಇದೆ.
ಆನೆ ಕೈಲಿ ಎಂಬಲ್ಲಿ ಪ್ರಾಣಿಯು ಮನುಷ್ಯ ಎಂಬ ರೂಪಕವಿದೆ; ಪರ್ಯಾಯ ಇಂಗ್ಲಿಷ್ ಗಾದೆಯ ಹೇಳಿಕೆಯಲ್ಲಿ ರೂಪಕವಿರುವುದಿಲ್ಲ. ಕಡಲೆಗೆ ಮುಂದು ಕಡಿವಾಣಕ್ಕೆ ಹಿಂದು ಎಂಬ ಗಾದೆಯಲ್ಲಿ ಕುದುರೆ ಎಂಬುದು ಅಧ್ಯಾಹಾರ; ಮುಂದು ಎಂಬುದು ಪ್ರಗತಿಯನ್ನೂ ಹಿಂದು ಎಂಬುದು ವಿಗತಿಯನ್ನೂ ಸೂಚಿಸುವ ದಿಕ್ಸೂಚೀ ರೂಪಕಗಳು. ಇದರ ಇಂಗ್ಲಿಷ್ ಪರ್ಯಾಯ ಮನುಷ್ಯನು ಪ್ರಾಣಿ ಎಂಬ ರೂಪಕವನ್ನೊಳಗೊಂಡಿದೆ (ಎರಡು ಹೊಟ್ಟೆಗಳು ದನ, ಎಮ್ಮೆ, ಮುಂತಾದ ಪ್ರಾಣಿಗಳಲ್ಲಿ ಮಾತ್ರ ಕಂಡುಬರುವುದರಿಂದ). ಬುಡದವರೆಗೆ ಅಗಿಯಬಾರದು ಎಂಬಲ್ಲಿ ಬುಡಸಹಿತ ತೆಗೆಯುವುದು ನಾಶ ಎಂಬ ರೂಪಕವಿದೆ; ಇಂಗ್ಲಿಷ ಗಾದೆ ಒಂದು ವಾಸ್ತವದ ಹೇಳಿಕೆಯಾಗಿದ್ದು (ಸಿಪ್ಪೆ ಸಹಿತ ಕಿವುಚಿದರೆ ಕಿತ್ತಳೆ ರಸ ಕಹಿ ತಾನೆ) ಸಾರ್ವತ್ರಿಕವು ನಿರ್ದಿಷ್ಟ ಎಂಬ ರೂಪಕದಿಂದ ಎರಡೂ ಅರ್ಥವಾಗುತ್ತವೆ. ಸವಿ ಡೊಂಕು ಎಂಬಲ್ಲಿ ಸವಿಯನ್ನು ಒಂದು ನೇರವಾಗಿರುವ ಕೋಲಿನಂತೆ ಪರಿಕಲ್ಪಿಸಲಾಗಿದೆ. ಹೀಗೆ ಭಾಷೆಗಳಲ್ಲಿ ಕಾಣ ಬರುತ್ತಿರುವ ರೂಪಕಗಳ ಪ್ರಯೋಗದಲ್ಲಿ ಭಿನ್ನತೆಗಳನ್ನು ಪಟ್ಟಿ ಮಾಡುತ್ತಾ ಹೋಗಬಹುದು.
ಒಟ್ಟಿನಲ್ಲಿ ಗಾದೆಗಳಲ್ಲಿ ಕೆಲವು ಸಾರ್ವತ್ರಿಕ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಿದ್ದರೆ ಹೆಚ್ಚಿನವು ಕರುನಾಡ ಸಂಸ್ಕೃತಿಯನ್ನೇ ಘನತರವಾಗಿ ಬಿಂಬಿಸುತ್ತವೆ. ಇವುಗಳನ್ನು ರೂಪಕಗಳ ಕಾಗ್ನಿಟಿವ್ ಸಿದ್ದಾಂತ ಮತ್ತು ಸಮ್ಮಿಳಿತಗಳ ಸಿದ್ಧಾಂತ ಇವುಗಳನ್ನಾಧರಿಸಿ ಅರ್ಥೈಸಬಹುದು. ಕನ್ನಡದಲ್ಲಿ ಸಸ್ಯ ಸಂಭಂಧೀ ಗಾದೆಗಳನ್ನು ಪರಿಶೀಲಿಸಿದಾಗ ಅಡಿಕೆ, ಪೂಗ, ಅರಗು ಇಂತಹ ವಸ್ತುಗಳನ್ನು ಅವು ಒಳಗೊಂಡಿರುವುವು.  ಈ ವಸ್ತುಗಳನ್ನು ಒಳಗೊಂಡ ಇಂಗ್ಲಿಷ್ ಗಾದೆಗಳು ಇಲ್ಲ. ಗಾದೆಗಳ ರೂಪಣೆ ಮತ್ತು ಅರ್ಥೈಸುವಿಕೆಗಳಿಗೆ ಸಂಸ್ಕೃತಿಯ ಹಿನ್ನೆಲೆ ಎಷ್ಟೊಂದು ಮುಖ್ಯ ಎಂಬುದನ್ನು ಈ ಅಂಶ ತೋರಿಸುತ್ತದೆ. ಗಾದೆಗಳಲ್ಲಿ ಬಳಕೆಯಾಗುವ ರೂಪಕಗಳೂ ಕೂಡ ಸಂಸ್ಕೃತಿಯಿಂದ ಸಂಸ್ಕೃತಿಗೆ ಬೇರೆಬೇರೆಯಾಗಿರುತ್ತವೆ. ಇದು ಹೊರ ಜಗತ್ತನ್ನು ವಿಭಿನ್ನ ಸಂಸ್ಕೃತಿಯ ಜನರು ಅರ್ಥಮಾಡಿಕೊಳ್ಳುವ ರೀತಿಗಳು ಕೂಡ ಭಿನ್ನಭಿನ್ನವಾಗಿರುವುದನ್ನು ಸೂಚಿಸುವಂತೆ  ತೋರುತ್ತದೆ.
           





BIBLIOGRAPHY
1.     Fauconnier, Gilles and Turner Mark 2003 : Conceptual Blending Form and Meaning Researches en communication n0 19. The pdf is available in the internet freely       
2.     Hien Li Thi Thu: Proverbs and Idioms Related to Animals in English and Vietnamese  [Class 4c-06, University of Pedogogy] The PDF is available in the internet freely
3.     Honeck, Richard P 1997: A PROVERB IN MIND The Cognitive Science of Proverbial Wit and Wisdom  University of Cicinnati Available in Google Books
4.     Jibir-Daura, Dr Ramlatu  : ANALYSIS OF HAUSA PROVERBS WITH CONCEPTUAL BLENDING                                                                                           Department of Arts and Social Science,  Ahmadu Bello University, Zaria
5.     Kovocses, Zoltan 2010: Metaphor: A Practical Introduction, 2nd ed.[Oxford University] Available in Googlebooks
6.     Kovecses, Zoltan 2006: Language Mind and Culture Oxford University Press Newyork  Available in Googlebooks
7.     Lakoff George amd Turner Mark, 1989: More Than Cool Reason – A Field Guide to
 Poetic Metaphor [Publ. University of Chicago Press]  Available in Googlebooks
8.     Mieder, Wolfgang 2004 :    Proverbs: A Handbook, Greenwood Punlishing Group, Available in Google Books
9.     Moreno, Ibanez Ana 2005:     Analysis of the Cognitive Dimension Of Proverbs in English and Spanish : SKACE Journal   of Theoretical Linguistics pdfs. Semamnticscholar.org
10.   Narasinga Rao, Ullal 1912: A Hand Book Of Canarese Proverbs with English  Equivalents [Publ. Basel Mission Book and Track Depository Mangalore]. ಇದು ಕನ್ನಡದ ಮೊದಲ ಗಾದೆಗಳ ಸಂಗ್ರಹ. ಇದರ ಮೊದಲ ಾವೃತ್ತಿ 1906ರಲ್ಲಿ ಮದ್ರಾಸಿನಿಂದ ಪ್ರಕಟವಾದಂತೆ ತಿಳಿದು             
11.   Sullivan,Karen and Sweetstar,Eve  2010: Is “Generic is Specific” a Metaphor?: Maning Form and BodyFey Parrill Ed Mark Turner CSLI
12.   Turner, Mark 2014: Origin of Ideas Oxford University Press Newyork Available in Google Books Publications
13.   YANG Yongxiang 2015:  The Explanatory Power of Conceptual Blending Theory for English Proverbs in Studies in Literature  and LanguageVol ii, no.3 pp52-56 CSCanada
*********************************************************************************************************************************************************