Search This Blog

Tuesday 26 May 2015

Study Skills - ಅಧ್ಯಯನ ಅಧ್ಯಾಪನಗಳಿಗೊಂದು ಹೊಸ ಗತಿ

ನಾನು ಈಚೆಗೆ ಎಸ್ ಅನುಪಮಾ ಇವರು ಇಂಗ್ಲಿಷಿನಲ್ಲಿ ಬರೆದ ಸ್ಟಡಿ ಸ್ಕಿಲ್ಲ್ಸ್ ಎಂಬ ಪುಸ್ತಕವನ್ನು ಓದಿದೆ. ಮನಸ್ಸಿನಲ್ಲಿ ಅಚ್ಚೊತ್ತಿತು. ಅದನ್ನು ಕನ್ನಡಕ್ಕೆ ಅನುವಾದ ಮಾಡುವ ಅವಕಾಶ ಕೂಡ ನನಗೆ ಸಿಕ್ಕಿತು. ಅನಂತರ ಅದರ ಬಗ್ಗೆ ಪ್ರಶಂಸಾ ಸಮೀಕ್ಷೆಯೊಂದನ್ನು ಬರೆದೆ. ಅದು ಹೀಗಿದೆ:

                                        
“ಕಲಿಕೆಯಲ್ಲಿ ಯಾವ ಮಗುವೂ ಹಿಂದುಳಿಯ ಬಾರದೆಂ”ದು ಭಾವಿಸುವ ಅಧ್ಯಾಪಕರಾರು? “ಕಡಿಮೆ ಬೋಧನೆ ಹೆಚ್ಚು ಕಲಿಕೆ”; “ತರಗತಿಯು ಒಂದು ವಿಸ್ತೃತ ಕುಟುಂಬದಂತಿರಬೇಕು”; “ಕಲಿಯುವವರ ಅಗತ್ಯಗಳನ್ನು ಸಂಪೂರ್ಣವಾಗಿ ಗಮನಿಸಬೇಕು”; - ಇಂತಹ ಹೇಳಿಕೆಗಳು ಇವತ್ತು ಎಲ್ಲ ದೇಶಗಳಲ್ಲಿ ಸಾಮಾನ್ಯ.ಇಂತಹ ಆಸೆಗಳಿಲ್ಲದವರಾರು? ಆದರೆ ಇವುಗಳ ವೈರುದ್ಧ್ಯಗಳೂ ಸಾಮಾನ್ಯ. ಅಂದರೆ ಕಲಿಕೆಯಲ್ಲಿ ಮಕ್ಕಳು ಹಿಂದುಳಿಯುವುದು, ಬೋಧನೆಗೆ ಹೆಚ್ಚು ಪ್ರಾಮುಖ್ಯವಿರುವುದು, ತರಗತಿಯಲ್ಲಿ ಶಿಸ್ತಿಗಾಗಿ ಶಿಕ್ಷೆ, ಕಲಿಯುವವರ ಅಗತ್ಯಗಳಿಗಿಂತ ವಸ್ತುವಿಷಯ ನಿರೂಪಣೆಯನ್ನೇ ಹೆಚ್ಚಾಗಿ ಗಮನಿಸುವುದು – ಇವೂ ಎಲ್ಲೆಡೆಯಲ್ಲೂ ಕಾಣಸಿಗುವುವು. ಈ ವೈರುದ್ಧ್ಯಗಳನ್ನು ಮೀರಿ ಕಲಿಕೆ ಪರಿಪೂರ್ಣವಾಗಿ ಮತ್ತು ಸಂತಸದಾಯಕವಾಗಿ ಆಗುವ0ತೆ ನೋಡಿಕೊಳ್ಳುವುದು ಹೇಗೆ ಎಂಬ ಸವಾಲು ಅಧ್ಯಾಪಕರ ಮುಂದಿದೆ.
          ಈ ನಿಟ್ಟಿನಲ್ಲಿ ಕಲಿಕಾಶೈಲಿಗಳು ಎಂಬುದು ಶಿಕ್ಷಣಕ್ಷೇತ್ರದಲ್ಲಿ ಈಚೆಗೆ ಬೆಳೆದು ಬಂದಿರುವ ಪರಿಕಲ್ಪನೆ. ಮಾಹಿತಿಯನ್ನು ಸಂಸ್ಕರಿಸಲು ವ್ಯಕ್ತಿ ಅನುಸರಿಸುವ ರೀತಿಗಳಲ್ಲಿ ಹೆಚ್ಚು ಆದ್ಯತೆಯ ರೀತಿಯನ್ನು ಕಲಿಕಾ ಶೈಲಿ ಎನ್ನಬಹುದು. ಅರಿವನ್ನು ಹೆಚ್ಚಿಸಿಕೊಳ್ಳುವ, ಭಾವನಾತ್ಮಕವಾಗಿ ನೋಡುವ, ಸಾಮಾಜಿಕವಾಗಿ ವ್ಯವಹಿರಿಸುವ, ಅಥವ ದೈಹಿಕವಾಗಿ ಪ್ರತಿಕ್ರಿಯಿಸುವ ಇತ್ಯಾದಿ ಪ್ರತಿಯೊಂದು ಆಯಾಮದಲ್ಲೂ ವ್ಯಕ್ತಿಗೆ ತನ್ನದೇ ಆದ ಆದ್ಯತೆಗಳಿರುತ್ತವೆ. ಈ ಆದ್ಯತೆಗಳು ಸನ್ನಿವೇಶವಶದಿಂದ ಮತ್ತು ಕಾಲಾನುಕ್ರಮದಲ್ಲಿ  ಬದಲಾಗುತ್ತಿರಬಹುದಾದರೂ ಹೆಚ್ಚು ಪ್ರಯೋಜನಕ್ಕೆ ಬರುವ ಒಂದೋ ಎರಡೋ ಇರುತ್ತವೆ. ಇವುಗಳನ್ನು ತಿಳಿದು ಕಲಿಯಲು ಕಲಿಸಲು ಪ್ರಾರಂಭಿಸುವುದರಿಂದ ಕಲಿಕೆಯು ವ್ಯಕ್ತಿಗೆ ಪ್ರಸ್ತುತವಾಗಿ ಸುಲಭವಾಗಬಹುದು. ಸಂತೋಷದಾಯಕವಾಗಬಹುದು. ಹೀಗೆ ಕಲಿಕೆಯನ್ನು ಪ್ರತಿವ್ಯಕ್ತಿಗನುಗುಣವಾಗಿ ಸಜ್ಜುಗೊಳಿಸುವುದು ಸಾಧ್ಯವಾಗುತ್ತದೆ ಎಂಬುದೇ ಈ ಹೊಸ ಪರಿಕಲ್ಪನೆ.
        ಒಂದು ಸಮೀಕ್ಷೆಯ ಪ್ರಕಾರ ಬೇರೆಬೇರೆ ಅಧ್ಯಾಪನ ತಜ್ಙರಿಂದ ಗುರುತಿಸಲ್ಪಟ್ಟ ಒಂದು ನೂರಕ್ಕೂ ಹೆಚ್ಚು ಕಲಿಕಾಶೈಲಿಗಳಿವೆ. ಮತ್ತು ಅವುಗಳಿಂದ ವ್ಯಕ್ತಿ ತನಗೆ ಬೇಕಾದ್ದನ್ನು ಆರಿಸಿಕೊಳ್ಳುತ್ತಾನೆ. ಇಂತಹ ಕಲಿಕಾಶೈಲಿಗಳನ್ನು ವಿವಿಧವಾಗಿ ವರ್ಗೀಕರಿಸುವ ಪ್ರಯತ್ನಗಳು ನಡೆದಿವೆ. ದೃಷ್ಟಿಪ್ರಧಾನ, ಶ್ರವಣಪ್ರಧಾನ, ಭಾಷಾ ಪ್ರಧಾನ, ಶರೀರವ್ಯವಹಾರ ಪ್ರಧಾನ, ತರ್ಕ ಪ್ರಧಾನ, ಸಾಮಾಜಿಕವ್ಯವಹಾರಪ್ರಧಾನ, ವ್ಯಕ್ತಿಯ ಒಂಟಿತನ ಪ್ರಧಾನ – ಇತ್ಯಾದಿಯಾಗಿ ಕಲಿಕಾಶೈಲಿಗಳನ್ನು ಗುರುತಿಸುವುದಿದೆ. ಇಂತಹ ಕಲಿಕಾಶೈಲಿಗಳನ್ನು ಇಂದಿನ ಅಧ್ಯಾಪಕ ಮತ್ತು ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂತೆ ಸರಳ ಭಾಷೆಯಲ್ಲಿ ನಿರೂಪಿಸುವ ಪುಸ್ತಕವೇ ಅಧ್ಯಯನ ಕೌಶಲಗಳು ಅಥವ ಸ್ಟಡಿ ಸ್ಕಿಲ್ಸ್. ಎಸ್ ಅನುಪಮಾ ಇವರು ರಚಿಸಿರುವ ಈ ಪುಸ್ತಕ 2014ರ ನವೆಂಬರ್ ನಲ್ಲಿ ಪ್ರಕಟವಾಗಿದೆ.ಓರ್ಬಿನೆಟ್ ಟೆಕ್ನಾಲೊಜೀಸ್ (ಇಂಡಿಯಾ) ಪ್ರೈವೇಟ್ ಲಿಮಿಟೆಡ್ ಪುಸ್ತಕದ ಪ್ರಕಾಶಕರು.  120 ಪುಟಗಳಷ್ಡು ವಿಸ್ತಾರವಾಗಿದೆ. ಬೆಲೆ ರೂ. 199/-. ಉಪಯುಕ್ತವಾಗಿದೆ.
            ಪುಸ್ತಕದಲ್ಲಿ ಹತ್ತು ಅಧ್ಯಾಯಗಳಿವೆ. ಪೋಷಣಾಂಶಯುಕ್ತ ಆಹಾರ ಮತ್ತು ಉನ್ನತಶಿಕ್ಷಣವೃಕ್ಷ ಎರಡನ್ನು ಹೊರತುಪಡಿಸಿದರೆ ಉಳಿದವೆಲ್ಲ ವ್ಯಕ್ತಿ ತನ್ನ ಅಧ್ಯಯನವನ್ನು ಪರಿಣಾಮಕಾರಿಯಾಗಿ ರೂಢಿಸಿಕೊಳ್ಳಲು ಉಪಯುಕ್ತವಾದವು. ಅಧ್ಯಾಪಕರಿಗೂ ತಮ್ಮ ವಿದ್ಯಾರ್ಥಿಗಳ ಒಲವುಗಳನ್ನು ತಿಳಿದು ಕಲಿಸಲು ಪ್ರಯೋಜನಕಾರಿಯಾದವು. ಇವುಗಳಲ್ಲಿ ಮೊದಲನೆಯದೇ ಬಹು ಮುಖ್ಯ ಅಧ್ಯಾಯ ಎನ್ನಬಹುದು. ಇದರಲ್ಲಿ ಅಧ್ಯಯನ ಮಾಡಲು ವ್ಯಕ್ತಿಗಳು ಆದ್ಯತೆಯ ಮೇಲೆ ಬಳಸುವ ವಿಧಾನಗಳ ವಿವರವಿದೆ.
   
ಕಲಿಕಾಶೈಲಿಗಳು ಎಂಬುದು ಮೊದಲನೆಯ ಅಧ್ಯಾಯದ ಹೆಸರು. ಇದರಲ್ಲಿ ಕಲಿಕಾಶೈಲಿಯನ್ನು  ದೃಶ್ಯಪ್ರಧಾನ ಶ್ರವಣಪ್ರಧಾನ ಮತ್ತು ಶರೀರಪ್ರಧಾನ ಎಂಬ ಮೂರು ವರ್ಗಗಳಲ್ಲಿ ಚರ್ಚಿಸಿದ್ದಾರೆ. ದೃಶ್ಯಪ್ರಧಾನ ಕಲಿಕೆಯವರು ಎಂದರೆ ಕಲಿಯಬೇಕಾದ ವಸ್ತುವನ್ನು ಅಥವ ಕ್ರಿಯೆಯನ್ನು ನೋಡುವುದರಿಂದ ಉತ್ತಮವಾಗಿ ಕಲಿಯವವರು. ಅವರಿಗೆ ಉಪನ್ಯಾಸಗಳನ್ನು ಅಥವ ಭಾಷಣಗಳನ್ನು ಕೇಳುವುದು ಅಷ್ಟಾಗಿ ಹಿಡಿಸುವುದಿಲ್ಲ. ಹಾಗೆ ಹೇಳಿದ್ದನ್ನು ಕೇಳಿದರೂ ಅವರು ಅದಕ್ಕೆ ದೃಶ್ಯ ರೂಪವನ್ನು ಕೊಡುವುದರಿಂದಲೇ ನೆನಪಿಟ್ಟುಕೊಳ್ಳುವರು ಮತ್ತು ಅನ್ವಯಪ್ರಯತ್ನಗಳನ್ನು ಮಾಡುವರು. ಶ್ರವಣ ಪ್ರಧಾನ ಕಲಿಕೆಯವರು ಕೇಳುವುದನ್ನೇ ಕಲಿಕೆಗೆ ಹೆಚ್ಚಾಗಿ ಅವಲಂಬಿಸುವವರು. ನೋಡುವುದಷ್ಟರಿಂದಲೇ ಅವರಿಗೆ ಪೂರ್ಣಪ್ರಯೋಜನಾಗದು. ನೋಡುವಾಗ ಅದರ ವಿಷಯವನ್ನು ಕೇಳಿಸಿಕೊಂಡರೆ ಅಂತಹವರ ಕಲಿಕೆ ಪರಿಣಾಮಕಾರಿಯಾಗುವುದು ಸಾಧ್ಯ. ಪ್ರಯೋಗಾಲಯ ಕೆಲಸದಂತಹವು ಇವರಿಗೆ ತುಂಬ  ಇಷ್ಟ. ನೋಡಿದ್ದನ್ನು ಕೇಳುವಂತೆ ತಮಗೆ ತಾವೇ ಗಟ್ಟಿಯಾಗಿ ಹೇಳಿಕೊಳ್ಳುವುದು ಇವರಿಗೆ ಪ್ರಯೋಜನವಾಗಬಹುದು. ಶರೀರ ಪ್ರಧಾನ ಕಲಿಕೆಯವರೆಂದರೆ ಸ್ಪರ್ಶ, ಅಂಗಾಂಗ ಚಲನೆ ಇಂತಹವುಗಳಿಂದ  ಉತ್ತಮವಾಗಿ ಕಲಿಯಬಲ್ಲವರು.ಇವರಿಗೆ ಮುಟ್ಟಿ ತಿಳಿಯುವಂತಹ ಮಾಡಿ ಕಲಿಯುವಂತಹಹ ಅವಕಾಶಗಳು ಬೇಕು. ಅಲ್ಲದೆ ಒಂದೇ ಕಡೆಯಲ್ಲಿ ಕುಳಿತು ಕಲಿಯುವುದಕ್ಕಿಂತ ಓಡಾಡಿಕೊಂಡು ಓದಿ,  ನೋಡಿ ಕಲಿಯುವುದು ಇಷ್ಟವಾಗಬಹುದು. ಮೂರು ತರಹದ ಕಲಿಕೆಯವರ ಗುಣಲಕ್ಷಣಗಳೇನು ಅವರಿಗೆ ಯೋಗ್ಯವಾದ ಚಟುವಟಿಕೆಗಳು ಯಾವ ತರಹದವು ಇಂತಹವು ಮೊದಲ ಅಧ್ಯಾಯದ ಹೂರಣ. ಮುಂದಿನ ಅಧ್ಯಾಗಳಲ್ಲಿ ಮೂರು ಕಲಿಕೆಗಾರರು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಾರೆ.
      ಎರಡನೆಯ ಅಧ್ಯಾಯಕ್ಕೆ ಅಧ್ಯಯನ ಕೌಶಲಗಳು ಎಂದು ಹೆಸರು. ವ್ಯಕ್ತಿ ಯಾವ ಬಗೆಯ ಕಲಿಕೆಯವನು ಎಂಬುದನ್ನು ಗುರುತಿಸಲು ಪ್ರಶ್ನಾವಳಿ ಭಾಗದಲ್ಲಿದೆ.  ಅಲ್ಲದೆ, ಓದುವ ರೀತಿ, ಗಮನ ಕೇಂದ್ರೀಕರಣ, ಟಿಪ್ಪಣಿ ಬರೆದುಕೊಳ್ಳುವುದು, ಪ್ರಶ್ನೆ ಕೇಳಿಕೊಂಡು ಕಲಿಕೆಯನ್ನು ದೃಢವಾಗಿಸಿಕೊಳ್ಳುವುದು,ಅಧ್ಯಯನಕ್ಕಾಗಿ ಗುಂಪುಗಳನ್ನು ಮಾಡಿಕೊಂಡು ಓದುವುದು ಇತ್ಯಾದಿಗಳನ್ನು ಸ್ಪಷ್ಟವಾಗಿ ವಿವರಿಸಲಾಗಿದೆ.
          “ನೆನಪಿಟ್ಟುಕೊಳ್ಳುವ ತಂತ್ರಗಳು”, “ಗುರಿನಿರ್ಧಾರ”, “ನಿರ್ವಹಣೆ”, “ಪರೀಕ್ಷೆಗಳನ್ನು ತೆಗೆದುಕೊಳ್ಳುವುದು”, “ಒತ್ತಡ ನಿರ್ವಹಣೆ”, “ಪೋಷಣಾಂಶಯುಕ್ತ ಆಹಾರ”, “ಪೋಷಕರು ಮಕ್ಕಳಿಗೆ ಹೇಗೆ ಸಹಾಯ ಮಾಡಬಹುದು ಮತ್ತು ಒತ್ತಡರಹಿತರಾಗಬಹುದು”  ಮತ್ತು “ಉನ್ನತ ಶಿಕ್ಷಣ ವೃಕ್ಷ” – ಇವು ಮೂರರಿಂದ ಹತ್ತರವರೆಗಿನ ಅಧ್ಯಾಯಗಳ ಶೀರ್ಷಿಕೆಗಳು. ಪೋಷಣಾಂಶಯುಕ್ತ ಆಹಾರ ವ್ಯಕ್ತಿಯನ್ನು ದೈಹಿಕವಾಗಿ ಸಕ್ಷಮನನ್ನಾಹಿಸಿಕೊಳ್ಳುವುದಕ್ಕೆ ಸೂಕ್ತವಾದ ಆಹಾರಾಭ್ಯಾಸಗಳನ್ನು ತಿಳಿಸುತ್ತದೆ. ಉನ್ನತ ಶಿಕ್ಷಣ ವೃಕ್ಷ ಉನ್ನತ ಶಿಕ್ಷಣದ ಬೇರೆಬೇರೆ ಹಂತಗಳನ್ನು ತೋರಿಸುವ ಮೂಲಕ ವ್ಯಕ್ತಿಗೆ ವೃತ್ತಿ ಮಾರ್ಗದರ್ಶಕವಾಗಿದೆ. ಇವೆರಡನ್ನು ಬಿಟ್ಟರೆ ಉಳಿದುವೆಲ್ಲ ಅಧ್ಯಯನವನ್ನು ಪರಿಣಾಮಕಾರಿಯಾಗಿಸುವಂತಹ ಸಲಹೆಗಳನ್ನೇ ಒಳಗೊಂಡಿವೆ.
        ಈಚಿನ ದಿನಗಳಲ್ಲಿ ಬಂದಿರುವ ಶಿಕ್ಷಣ ಶಾಸ್ತ್ರ ಪುಸ್ತಕಗಳಲ್ಲಿ ಇದೊಂದು ವಿಶಿಷ್ಟ ಕೃತಿ. ವಿದ್ಯಾರ್ಥಿಗಳಿಗೂ ಅಧ್ಯಾಪಕರಿಗೂ ತಮ್ಮತಮ್ಮ ರೀತಿಯಲ್ಲಿ ಇದು ಪ್ರಯೋಜನಕ್ಕೆ ಬರುತ್ತದೆ. ಮುನ್ನುಡಿಯಲ್ಲಿ ಶ್ರೀ ಗುರುರಾಜ ಕರ್ಜಗಿಯವರು ಹೇಳುವಂತೆ “ ಈ ಪುಸ್ತಕದಲ್ಲಿ ಹೇಳಿರುವ ಅಂಶಗಳ ಪ್ರಯೋಜನವು ಶಾಲೆಯಲ್ಲಿ ಉತ್ತಮ ನಿರ್ವಹಣೆ ತೋರಬೇಕೆಂಬ ನಿಮ್ಮ ಇಚ್ಛೆಯನ್ನು ಅವಲಂಬಿಸಿದೆ.ಸ್ವಲ್ಪ ತ್ಯಾಗ ಮಾಡಲು, ಹೆಚ್ಚು ಪ್ರಯತ್ನಮಾಡಲು ನಿಮಗೆ ಇಷ್ಟವೇ ಇಲ್ಲದಿದ್ದರೆ ಎಷ್ಟೇ ಸಲಹೆಗಳನ್ನು ಕೊಟ್ಟರೂ, ಏನೇ ದೃಷ್ಟಿಕೋನ ತೋರಿದರೂ, ರೂಪುರೇಷೆ ರಚಿಸಿಕೊಟ್ಟರೂ ಪ್ರಯೋಜನವಾಗದು’. ಪ್ರಯತ್ನಶೀಲರಾದ ಗಂಭೀರ ವಿದ್ಯಾರ್ಥಿಗಳಿಗೆ ಮತ್ತು ಅಂತಹ ಅಧ್ಯಾಪಕರಿಗೆ ಈ ಪುಸ್ತಕ ಒಂದು ಅಮೂಲ್ಯ ಸಂಪನ್ಮೂಲವಾಗಿದೆ. ಅಂತಹವರಿಗೆ ಹೊಸದೊಂದು ರೀತಿಯಲ್ಲಿ ಅಧ್ಯಯನ ಪದ್ಧತಿಗಳನ್ನು ನೋಡಲು ಈ ಪುಸ್ತಕ ಸಹಾಯ ಮಾಡುತ್ತದೆ.




1 comment:

  1. ಇತ್ತಿಚಿನ ದಿನಗಳಲ್ಲಿ ಕಾಂಪಿಟಟಿವ್ ನೆಸ್ ಜಗತ್ತಿನಲ್ಲಿ ಜಾಸ್ತಿ ಆಗುತ್ತಿದೆ ಎನಿಸುತ್ತದೆ. ಅದರಿಂದಾಗಿ ಮಾನಸಿಕ ಒತ್ತಡಗಳು ಹಿಗ್ಗಿವೆ. ಅದರ ನಿರ್ವಹಣೆಯೂ ಒಂದು ಕೌಶಲವೇ. ಅದನ್ನು ಹೆಚ್ಚಿಸಿಕೊಳ್ಳಲು ಇಂಥಹ ಪುಸ್ತಕಗಳು ಸಂಪನ್ಮೂಲಗಳಾಗುತ್ತವೆ. ಅದರೊಟ್ಟಿಗೆ ಆದರ್ಶದ ಗುರಿಗಳು ಹೃದಯನ್ತರಾಳದಲಿ ತುಳುಕಿದರೆ ಸಧ್ಧೃಢ ಸಮಾಜದ ನಿರ್ಮಾಣ ಸಾಧ್ಯವಾಗಬಹುದು ಎನಿಸುತ್ತದೆ.

    ReplyDelete